×
Ad

ಇಡೀ ವ್ಯವಸ್ಥೆಯಿಂದ ಕೊರಗ ಸಮುದಾಯದ ನಿರ್ಲಕ್ಷ್ಯ: ಸುಶೀಲಾ ನಾಡ

20ನೇ ದಿನ ಪೂರೈಸಿದ ಕೊರಗರ ಅಹೋರಾತ್ರಿ ಧರಣಿ ಸತ್ಯಾಗ್ರಹ

Update: 2026-01-03 19:26 IST

ಉಡುಪಿ, ಜ.3: ಕೊರಗ ಸಮುದಾಯದ ಯುವ ಜನತೆಗೆ ಸರಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಒದಗಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಶನಿವಾರ 20ನೆ ದಿನಕ್ಕೆ ಕಾಲಿರಿಸಿದ್ದು, ಈವರೆಗೆ ಸರಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಆದುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ರೀತಿಯ ಹೋರಾಟ ಮಾಡಲಾಗುವುದು ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಅಧ್ಯಕ್ಷೆ ಸುಶೀಲಾ ನಾಡ ತಿಳಿಸಿದ್ದಾರೆ.

ಧರಣಿ ಸ್ಥಳದಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಗರ ಸಮುದಾಯದ ಯುವಜನತೆಗೆ ಉದ್ಯೋಗ ನೀಡಬೇಕೆಂಬ ಇಚ್ಛಾಶಕ್ತಿ ಇಲಾಖೆಗಾಗಲೀ ಜಿಲ್ಲಾಡಳಿತಕ್ಕೆ ಇಲ್ಲ. ಯಾಕೆಂದರೆ ನಮ್ಮದು ಪ್ರಬಲ ಸಮುದಾಯ ಅಲ್ಲ. ರಾಜಕೀಯವಾಗಿ ನಮ್ಮಿಂದ ಯಾವುದೇ ಓಟು ಸಿಗುವುದಿಲ್ಲ. ಹಾಗಾಗಿ ಕೊರಗ ಸಮುದಾಯದ ಬಗ್ಗೆ ಇಡೀ ವ್ಯವಸ್ಥೆ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದೆ ಎಂದು ಆರೋಪಿಸಿದರು.

ಪಿವಿಟಿಜಿ ಸಮುದಾಯ: ಕೊರಗ ಸಮುದಾಯವನ್ನು ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಸಮುದಾಯ(ಪಿವಿಟಿಜಿ) ಎಂಬುದಾಗಿ ಗುರುತಿಸ ಲಾಗಿದೆ. ಕರ್ನಾಟಕದಲ್ಲಿ ಕೊರಗ ಮತ್ತು ಜೇನು ಕುರುಬ ಸೇರಿದಂತೆ ದೇಶದಲ್ಲಿ ಇಂತಹ 75 ಸಮುದಾಯಗಳು ಮಾತ್ರ ಇವೆ. ಈ ಸಮುದಾಯ ದವರಿಗೆ ನೇರನೇಕಾಮತಿ ಮೂಲಕ ಸರಕಾರಿ ಉದ್ಯೋಗ ನೀಡಲು ಕಾನೂನಾತ್ಮಕ ಅವಕಾಶ ಇದೆ ಎಂದು ಸುಶೀಲಾ ನಾಡ ತಿಳಿಸಿದರು.

ಒಂದೂವರೆ ವರ್ಷಗಳ ಹಿಂದೆ ಇದೇ ಬೇಡಿಕೆ ಮುಂದಿಟ್ಟು 10 ದಿನಗಳ ಕಾಲ ಹೋರಾಟ ಮಾಡಿದೇವು. ಆಗ ಸ್ಪೀಕರ್ ಯು.ಟಿ.ಖಾದರ್ ಸ್ಥಳಕ್ಕೆ ಬಂದು ಉದ್ಯೋಗದ ಭರವಸೆ ನೀಡಿದ್ದರು. ಅದರಂತೆ ಹೋರಾಟ ಕೈಬಿಟ್ಟಿದ್ದೇವು. ಬಳಿಕ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ನಮ್ಮ ಮನವಿಯನ್ನು ತಿಳಿಸಿದ್ದೇವು. ಅವರು ಕೂಡ ಭರವಸೆ ನೀಡಿದ್ದರು.

ಕಳೆದ ಬಜೆಟ್‌ನಲ್ಲಿ ಪರಿಶಿಷ್ಟ ಪಂಗಡದಲ್ಲಿ ಬರುವ ಎಲ್ಲ 13 ಬುಡಕಟ್ಟು ಸಮುದಾಯಗಳನ್ನು ಸೇರಿಸಿಕೊಂಡು ಸರಕಾರ ಉದ್ಯೋಗಾವಕಾಶದ ಘೋಷಣೆಯನ್ನು ಮಾಡಿತ್ತು. ಆದರೆ ನಮ್ಮ ಬೇಡಿಕೆ ಪಿವಿಟಿಜಿ ಸಮುದಾಯ ವನ್ನು ಮಾತ್ರ ಸೇರಿಸಿಕೊಳ್ಳಬೇಕು. ಯಾಕೆಂದರೆ ಆ ಬಲಾಢ್ಯ 13 ಬುಡಕಟ್ಟು ಸಮುದಾಯಗಳ ಜೊತೆ ನಮ್ಮ ದುರ್ಬಲ ಸಮುದಾಯ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಮತ್ತೆ ನಾವು ಅವಕಾಶದಿಂದ ವಂಚಿತ ರಾಗುತ್ತೇವೆ ಎಂದರು.

ಡಿಸಿ ಆದೇಶಕ್ಕೂ ಬೆಲೆ ಇಲ್ಲ: ನಮ್ಮ ಸಮುದಾಯದಲ್ಲಿ ಎಂಎ ಇಂಗ್ಲಿಷ್ ಬಿಎಡ್, ಎಂಎಸ್‌ಡಬ್ಲ್ಯು, ಎಂಕಾಂ, ಎಂಎಸ್ಸಿ, ಎಂಬಿಎ ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಪಡೆದವರು ತುಂಬಾ ಯುವಜನತೆ ಇದ್ದಾರೆ. ಇವರಿಗೆ ಯಾರಿಗೂ ಸರಕಾರಿ ಉದ್ಯೋಗ ಸಿಕ್ಕಿಲ್ಲ. ಇವರೆಲ್ಲ ಬಟ್ಟೆಯಂಗಡಿ ಸಹಿತ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇದ್ದಾರೆ ಎಂದು ಸುಶೀಲಾ ನಾಡ ತಿಳಿಸಿದರು.

ಹಿಂದಿನ ಜಿಲ್ಲಾಧಿಕಾರಿಗಳು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಸಂದರ್ಭ ಕೊರಗ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂಬುದಾಗಿ ಆದೇಶ ಹೊರಡಿಸಿದ್ದರು. ಆದರೆ ಐಟಿಡಿಪಿ ಸಹಿತ 36 ಇಲಾಖೆ ಗಳಲ್ಲಿನ ಸುಮಾರು 200-300 ಖಾಲಿ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡುವಾಗ ಒಂದೇ ಒಂದು ಕೊರಗ ಸಮುದಾಯದ ಯುವಜನತೆಯನ್ನು ಸೇರಿಸಿಕೊಂಡಿಲ್ಲ. ಜಿಲ್ಲಾಧಿಕಾರಿ ಆದೇಶಕ್ಕೂ ಯಾವುದೇ ಬೆಲೆ ಇಲ್ಲ. ಐಟಿಡಿಪಿ ಇಲಾಖೆಯಲ್ಲೂ ಕೊರಗ ಸಮುದಾಯದವರನ್ನು ನಿರ್ಲಕ್ಷಿಸಲಾಗಿದೆ ಎಂದರು.

ಆದುದರಿಂದ ಈ ಬಾರಿ ನಾವು ನಮ್ಮ ಹೋರಾಟವನ್ನು ಗಂಭೀರವಾಗಿ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಹೋರಾಟ ಕೈಬಿಡುವುದಿಲ್ಲ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹೋರಾಟಕ್ಕೆ ಸ್ಪಂದಿಸಬೇಕು. ರಸ್ತೆ ತಡೆ ಮಾಡಿ ಹೋರಾಟ ಮಾಡಲು ನಮಗೂ ಗೊತ್ತಿದೆ. ಆದರೆ ಆ ಹಂತಕ್ಕೆ ಹೋಗಲು ಸರಕಾರ ಅವಕಾಶ ನೀಡದೆ ನಮ್ಮ ಭರವಸೆ ಈಡೇರಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಸಂಯೋಜಕ ಪುತ್ರನ್ ಹೆಬ್ರಿ, ಮುಖಂಡ ದಿನಕರ ಕೆಂಜೂರು, ಕುಮಾರದಾಸ್ ಹಾಲಾಡಿ, ಸಂಜೀವ ಬಾರಕೂರು, ಶೇಖರ್, ಪದವೀಧರರಾದ ದೀಪಾ, ಗಣೇಶ್, ದಿವ್ಯಾ, ಪ್ರವೀಣ, ಸತೀಶ್, ಪ್ರೀತಿ, ದೀಪಿಕಾ ಮೊದಲಾದವರು ಉಪಸ್ಥಿತರಿದ್ದರು.

‘ನಮ್ಮ ಸ್ವಲ್ಪ ಕಲಿತವರು ಇದ್ದರೂ ಅವರಿಗೆ ಕಚೇರಿ ಶುಚಿತ್ವ ಕೆಲಸಗಳನ್ನು ನೀಡುವುದಿಲ್ಲ. ಬೀದಿ ಗುಡಿಸಲು, ಕಸ ಹೆಕ್ಕುವ ಕೆಲಸಕ್ಕೆ ಮಾತ್ರ ನಮ್ಮನ್ನು ಕರೆಯುತ್ತಾರೆ. ಮಂಗಳೂರು ವಿವಿ ಪ್ರಾಧ್ಯಾಪಕಿ ಸಬಿತಾ ಗುಂಡ್ಮಿ ಬಿಟ್ಟರೆ ನಮ್ಮ ಸಮುದಾಯದ ಯಾವುದೇ ವಿದ್ಯಾವಂತರಿಗೆ ಸರಕಾರಿ ಉದ್ಯೋಗ ಸಿಕ್ಕಿಲ್ಲ’

-ಸುಶೀಲಾ ನಾಡ, ಅಧ್ಯಕ್ಷರು, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ

‘ಎರಡು ಜಿಲ್ಲೆಗಳ ಶಾಸಕರು, ಸಂಸದರಿಗೆ ನಮ್ಮ ಬೇಡಿಕೆ ಈಡೇರಿಸ ಬೇಕೆಂಬ ಇಚ್ಛಾಶಕ್ತಿ ಇಲ್ಲ. ನಮ್ಮ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ. ಅವರಿಗೆ ಅಧಿಕಾರ ಇದ್ದರೂ ಆ ಬಗ್ಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಶಾಸಕರಿಗೆ ಕೋಳಿ ಅಂಕದ ಬಗ್ಗೆ ಇರುವ ಆಸಕ್ತಿ, ಕೊರಗರ ಬಗ್ಗೆ ಇಲ್ಲ. ನಮ್ಮ ಬಗ್ಗೆ ಕೇಳುವವರು ಯಾರು ಇಲ್ಲ. ನಮ್ಮ ಬಗೆಗಿನ ಸಾಮಾಜಿಕ ಧೋರಣೆ ಬದಲಾಗಬೇಕು. ಹಿಂದೆ ನೇರವಾಗಿ, ಈಗ ಪರೋಕ್ಷವಾಗಿ ಅಸ್ಪಶ್ಯತೆ ಆಚರಣೆ ಮಾಡಲಾಗುತ್ತಿದೆ’

-ದಿನಕರ ಕೆಂಜೂರು, ಮುಖಂಡರು, ಕೊರಗ ಸಂಘಟನೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News