×
Ad

ಉಡುಪಿ | ರೋಗಿಗೆ ಸಿಗಲಿಲ್ಲ ಆಂಬುಲೆನ್ಸ್ 108! : ಗೂಡ್ಸ್ ಟೆಂಪೋದಲ್ಲಿ ರೋಗಿ ಆಸ್ಪತ್ರೆಗೆ

ಉಡುಪಿ ಉದ್ಯಾವರದಲ್ಲಿ ನಡೆದ ಘಟನೆ: ಸಾರ್ವಜನಿಕರಿಂದ ಆಕ್ರೋಶ

Update: 2025-12-08 11:02 IST

ಉಡುಪಿ: ಎರಡೂವರೆ ಗಂಟೆ ಕಾದರೂ 108 ಅಂಬ್ಯುಲೆನ್ಸ್ ಸಿಗದ ಕಾರಣ ಚಿಂತಾಜನಕ ಸ್ಥಿತಿಯಲ್ಲಿದ್ದ ರೋಗಿಯನ್ನು ಗೂಡ್ಸ್ ಟೆಂಪೊದಲ್ಲಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಉದ್ಯಾವರದಲ್ಲಿ ರವಿವಾರ ರಾತ್ರಿ ವೇಳೆ ನಡೆದಿದೆ.

ಉದ್ಯಾವರದ ನಿವಾಸಿಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಕೂಡಲೇ ಮನೆಯವರು 108 ಅಂಬುಲೆನ್ಸ್‌ಗೆ ಕರೆ ಮಾಡಿದರು. ಆದರೆ ಈ ಅಂಬ್ಯುಲೆನ್ಸ್ ಲಭ್ಯ ಇಲ್ಲದ ಕಾರಣ, ಮನೆಯವರು ಖಾಸಗಿ ಅಂಬುಲೆನ್ಸ್ ಗಳನ್ನು ಸಂಪರ್ಕಿಸಿದರು. ಹೀಗೆ ಇವರು ರಾತ್ರಿ 7ಗಂಟೆಯಿಂದ 9.30ರವರೆಗೆ ಅಂಬ್ಯುಲೆನ್ಸ್‌ಗಾಗಿ ಪ್ರಯತ್ನ ಪಟ್ಟರು.

ಈ ಮಧ್ಯೆ ರೋಗಿ ಚಿಂತಾಜನಕ ಪರಿಸ್ಥಿತಿಗೆ ತಲುಪಿದರು. ಎರಡೂವರೆ ಗಂಟೆಗಳ ಕಾಲ ಕಾದರೂ ಅಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ರೋಗಿಯ ಕಡೆಯವರು ಕೂಡಲೇ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಸಂಪರ್ಕಿಸಿದರು. ವಿಶು ಶೆಟ್ಟಿ ಕೂಡ ಖಾಸಗಿ ಅಂಬುಲೆನ್ಸ್ ಗಾಗಿ ಸಂಪರ್ಕಿಸಿದರು. ಅವರಿಗೂ ಸಿಗದೆ ಇರುವುದರಿಂದ, ಇತ್ತ ರೋಗಿ ತೀರ ಚಿಂತಾಜನಕ ಪರಿಸ್ಥಿತಿ ತಲುಪಿದ್ದರಿಂದ ಬೇರೆ ದಾರಿ ಕಾಣದೆ ವಿಶು ಶೆಟ್ಟಿ ತನ್ನ ಗೂಡ್ಸ್ ಟೆಂಪೋಗೆ ಮಂಚ ಇರಿಸಿ ಅದರ ಮುಖಾಂತರ ರೋಗಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.

‘ಕಳೆದ ಒಂದು ವರ್ಷದಿಂದ 108 ಅಂಬುಲೆನ್ಸ್ ಸರಿಯಾಗಿ ಲಭ್ಯ ಇಲ್ಲದಿರುವುದರಿಂದ ನೂರಾರು ರೋಗಿಗಳು ಮೃತಪಟ್ಟಿದ್ದಾರೆ. ಈ ಬಗ್ಗೆ ನಾನು ಕಳೆದ ಒಂದು ವರ್ಷದಿಂದ ಸರಕಾರದ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಲಿಲ್ಲ. ಈ ಘಟನೆಯಲ್ಲಿ ಕೂಡ ಎರಡುವರೆ ಗಂಟೆ ಅಂಬುಲೆನ್ಸ್ ಸಿಗದೇ ರೋಗಿ ಚಿಂತಾ ಜನಕ ಪರಿಸ್ಥಿತಿ ತಲುಪಿದ್ದು ವಿಧಿ ಇಲ್ಲದೆ ಗೂಡ್ಸ್ ಟೆಂಪೋದಲ್ಲಿ ರೋಗಿಯನ್ನು ಕರೆದುಕೊಂಡು ಹೋಗಬೇಕಾಯಿತು’ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 108 ಆಂಬುಲೆನ್ಸ್ 18 ಇದ್ದರೂ ಸೇವೆಗೆ ಸಿಗುವುದು ಕೇವಲ ಐದರಿಂದ ಆರು ಮಾತ್ರ. ಆದುದರಿಂದ ಇನ್ನಾದರೂ ಸರಕಾರ, ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ತೆಗೆದು ಕೊಂಡು ಸಹಕರಿಸಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರ ಪ್ರಾಣ ವನ್ನು ನಿರ್ಲಕ್ಷಿಸಬಾರದು ಎಂದು ಅವರು ತಿಳಿಸಿದರು.

‘ವಿಶು ಶೆಟ್ಟಿ ಅವರಿಗೆ ನನ್ನ ಮೊಬೈಲ್ ಸಂಖ್ಯೆಯನ್ನು ನೀಡಿದ್ದೇನೆ. ಅವರು ನನಗೆ ಅಥವಾ ಜಿಲ್ಲಾಧಿಕಾರಿಗೆ ನೇರವಾಗಿ ಸಂಪರ್ಕಿಸಿದ್ದರೆ, ನಾನು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸುತ್ತಿದ್ದೆ. ಉದ್ಯಾವರದಲ್ಲಿ ನಡೆದ ಘಟನೆಯ ವೇಳೆಗೆ ಬ್ರಹ್ಮಾವರದಲ್ಲಿ ನಿಂತಿದ್ದ 108 ಅಂಬ್ಯುಲೆನ್ಸ್ ಖಾಲಿಯೇ ಇತ್ತು. ಮಾಹಿತಿ ನೀಡಿದ್ದರೆ ತಕ್ಷಣ ಅದು ರೋಗಿಯ ಬಳಿ ಹೋಗುತ್ತಿತ್ತು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಅಂಬುಲೆನ್ಸ್‌ಗಳನ್ನು ಸೇವೆಗೆ ನಿಯೋಜಿಸಲಾಗಿದೆ’

-ಡಾ.ಬಸವರಾಜ ಹುಬ್ಬಳ್ಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಉಡುಪಿ ಜಿಲ್ಲೆ.

‘ರಾಜ್ಯ ಸರಕಾರ ಜಿಲ್ಲೆಯ ಆರೋಗ್ಯ ಸಮಸ್ಯೆಗಳ ಬಗ್ಗೆ ಮಲತಾಯಿ ಧೋರಣೆ ನಡೆಸುತ್ತಿದ್ದು ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಕಳೆದ 2 ವರ್ಷಗಳಲ್ಲಿ ಹಲವಾರು ಬಾರಿ 108 ಸೇವೆ ವ್ಯತ್ಯಯವಾಗಿ ರೋಗಿಗಳು ಸಮಸ್ಯೆ ಎದುರಿಸುವ ಘಟನೆಗಳು ನಡೆದಿದ್ದು, ಹಲವು ಬಾರಿ ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತಂದರೂ ಗಂಭೀರವಾಗಿ ಪರಿಗಣಿಸಿಲ್ಲ. 108 ಚಾಲಕರಿಗೆ ಅವೈಜ್ಞಾನಿಕ ಶಿಫ್ಟ್ ವ್ಯವಸ್ಥೆ, ವಾಹನಗಳ ಕಳಪೆ ನಿರ್ವಹಣೆ, ವೇತನ ಬಾಕಿ, ವಸತಿ ಸೌಲಭ್ಯ ಮುಂತಾದ ಗಂಭೀರ ಸಮಸ್ಯೆಗಳ ಬಗ್ಗೆ ಹಲವು ಬಾರಿ ಪತ್ರ ಬರೆದರೂ ರಾಜ್ಯ ಸರಕಾರ ಪರಿಹಾರ ಕಲ್ಪಿಸಿಲ್ಲ’

-ಯಶ್‌ಪಾಲ್ ಸುವರ್ಣ, ಶಾಸಕರು ಉಡುಪಿ

ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ ಕೊರತೆ ಇಲ್ಲ: ಡಿಎಚ್‌ಒ

ರಾಜ್ಯದ ಮಾನದಂಡದಂತೆ ಉಡುಪಿ ಜಿಲ್ಲೆಯಲ್ಲಿ ಒಂದು ಲಕ್ಷ ಜನರಿಗೆ ಒಂದು ಆಂಬ್ಯುಲೆನ್ಸ್‌ನಂತೆ 108 ಯೋಜನೆಯಡಿ 18 ಆಂಬ್ಯುಲೆನ್ಸ್‌ಗಳಿವೆ. ಅವುಗಳಲ್ಲಿ 16 ಕಾರ್ಯನಿರ್ವಹಿಸುತ್ತಿದ್ದು, ಎರಡು ದುರಸ್ತಿ ಬಳಿಕ ಸೇವೆಗೆ ಬಳಸಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ ತಿಳಿಸಿದ್ದಾರೆ.

ನಮ್ಮಲ್ಲಿ ಅಂಬ್ಯುಲೆನ್ಸ್ ಸಮಸ್ಯೆ ಇಲ್ಲ. ಬದಲಾಗಿ ಮಾನವ ಸಂಪನ್ಮೂಲದ ಕೊರತೆ ಇದೆ. ಚಾಲಕರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಿಲ್ಲ. ನೇಮಕಗೊಂಡರೂ ಕೆಲ ತಿಂಗಳಲ್ಲಿ ತಮ್ಮ ಊರಿಗೆ ವರ್ಗಾವಣೆ ಕೇಳುತ್ತಾರೆ. ಹೆಚ್ಚಿನ ವರ್ಗಾವಣೆ, ಸಿಬ್ಬಂದಿ ಬದಲಾವಣೆಗಳಿಂದ ಸೇವೆಯಲ್ಲಿ ತೊಂದರೆ ಆಗುತ್ತಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News