ಉಡುಪಿ | ಜಲ್ಲಿ, ಮರಳು ಅಕ್ರಮ ಸಾಗಾಟ: ನಾಲ್ಕು ಲಾರಿಗಳು ವಶಕ್ಕೆ
ಉಡುಪಿ, ಸೆ.28: ಕಟ್ಟಡ ಸಾಮಗ್ರಿ ಸಾಗಾಟದ ವಾಹನಗಳ ವಿರುದ್ಧ ಕಠಿಣ ಕ್ರಮವನ್ನು ವಿರೋಧಿಸಿ ಲಾರಿ ಮಾಲಕರು ಮುಷ್ಕರ ನಡೆಸುತ್ತಿರುವುದರ ನಡುವೆಯೇ ಪರವಾನಿಗೆರಹಿತ ವಾಹನಗಳಲ್ಲಿ ಜಲ್ಲಿ, ಎಂ. ಸ್ಯಾಂಡ್ ಸಾಗಾಟ ಮಾಡುತ್ತಿದ್ದ ನಾಲ್ಕು ಲಾರಿಗಳನ್ನು ಬಲಾಯಿಪಾದೆ ಬಳಿ ಪೊಲೀಸರು ಬುಧವಾರ ಮಧ್ಯರಾತ್ರಿ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ವಾಹನಗಳಲ್ಲಿ ಒಂದು ಟಿಪ್ಪರ್ ಹಾಗೂ ಮೂರು 16 ಚಕ್ರದ ದೊಡ್ಡ ಲಾರಿಗಳು ಸೇರಿವೆ. ಇವುಗಳಲ್ಲಿ ಸಾಗರ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಉಡುಪಿಯ ಬೆಳ್ಮಣ್ ಪರಿಸರದ ಕ್ರಷರ್ ಗಳಿಂದ ಅಕ್ರಮವಾಗಿ ಜಲ್ಲಿ, ಎಂ. ಸ್ಯಾಂಡ್ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. 20 ಟನ್ ಸಾಗಿಸಬೇಕಿದ್ದ ಈ ಲಾರಿಗಳು ತಲಾ 60 ಟನ್ ಜಲ್ಲಿ ಹಾಗೂ ಎಂ ಸ್ಯಾಂಡ್ ಅನ್ನು ಸಾಗಿಸುತ್ತಿದ್ದವು. ಈ ವೇಳೆ ಟಿಪ್ಪರ್ ಬಲಾಯಿಪಾದೆ ಬಳಿ ಅಡ್ಡಾದಿಡ್ಡಿ ಚಲಾಯಿಸಿ ದ್ವಿಚಕ್ರ ವಾಹನವೊಂದಕ್ಕೆ ತಾಗಿದ್ದರಿಂದ ಅಕ್ರಮ ಮರಳು ಸಾಗಾಟ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಶಪಡಿಸಿಕೊಂಡ ವಾಹನಗಳನ್ನು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.