×
Ad

Udupi | ಕೊರಗರ ಪೌಷ್ಠಿಕ ಆಹಾರಕ್ಕೆ ಜಿಲ್ಲಾಮಟ್ಟದಲ್ಲಿಯೇ ಟೆಂಡರ್ : ಕೊರಗ ಸಮುದಾಯದ ಕುಂದು ಕೊರತೆಗಳ ಸಭೆಯಲ್ಲಿ ಆಗ್ರಹ

Update: 2026-07-03 18:22 IST

ಉಡುಪಿ : ಕೊರಗ ಸಮುದಾಯವರಿಗೆ ಸರಕಾರ ನೀಡುತ್ತಿರುವ ಪೌಷ್ಠಿಕ ಆಹಾರ ಕಳೆದ ಜನವರಿಯಿಂದ ಸ್ಥಗಿತಗೊಂಡಿದ್ದು, ಈ ಯೋಜನೆಯನ್ನು ಈ ಹಿಂದಿನಂತೆ ರಾಜ್ಯಮಟ್ಟದ ಬದಲು ಜಿಲ್ಲಾ ಮಟ್ಟದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಿ ಆಹಾರ ಭದ್ರತೆ ಒದಗಿಸಬೇಕೆಂದು ಕೊರಗ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೊರಗ ಸಮುದಾಯದ ಕುಂದು ಕೊರತೆಗಳ ಸಭೆಯಲ್ಲಿ ಈ ಒತ್ತಾಯಗಳು ಕೇಳಿ ಬಂದವು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕೊರಗ ಮುಖಂಡ ಬೊಗ್ರ ಕೊಕ್ಕರ್ಣೆ, 2025-26ನೇ ಸಾಲಿನಲ್ಲಿ ಎರಡು ತಿಂಗಳ ಪೌಷ್ಠಿಕ ಆಹಾರ ಪೂರೈಕೆಯಾಗಿಲ್ಲ. 2026-27ನೇ ಸಾಲಿನ ಆಹಾರ ಪೂರೈಕೆ ಇನ್ನೂ ಆರಂಭವಾಗಿಲ್ಲ. ಜನವರಿಯಿಂದ ಈವರೆಗೆ ಪೌಷ್ಠಿಕ ಆಹಾರ ಕೊರಗರಿಗೆ ಸಿಗುತ್ತಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಐಟಿಡಿಪಿ ಇಲಾಖೆಯ ಯೋಜನಾಧಿಕಾರಿ ನಾರಾಯಣ ಸ್ವಾಮಿ, ಜನವರಿಯಿಂದ ಕೊರಗ ಸಮುದಾಯಕ್ಕೆ ನೀಡುವ ಆಹಾರ ಸ್ಥಗಿತಗೊಂಡಿದೆ. ಜಿಲ್ಲಾ ಮಟ್ಟದಲ್ಲಿದ್ದ ಟೆಂಡರ್ ಪ್ರಕ್ರಿಯೆಯನ್ನು ಕಳೆದ ಸಾಲಿನಿಂದ ರಾಜ್ಯಮಟ್ಟದಲ್ಲಿ ಮಾಡಲಾಗುತ್ತಿದೆ. ಈ ಹಿಂದೆ ಕರೆಯಲಾದ ಟೆಂಡರ್ ನಲ್ಲಿ ಸಮಸ್ಯೆಯಾಗಿರುವುದರಿಂದ ಅದನ್ನು ರದ್ದು ಪಡಿಸಿ, ಹೊಸ ಟೆಂಡರ್ ಕರೆಯಲಾಗಿದೆ. ಸದ್ಯದಲ್ಲಿಯೇ ಆಹಾರವನ್ನು ಸಮುದಾಯಗಳಿಗೆ ಪೂರೈಕೆ ಮಾಡಲಾಗುತ್ತದೆ ಎಂದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಕೊರಗ ಮುಖಂಡ ಗಣೇಶ್ ಕುಂದಾಪುರ, ರಾಜ್ಯಮಟ್ಟದಲ್ಲಿನ ಟೆಂಡರ್ ಪ್ರಕ್ರಿಯೆಯಿಂದ ಕೊರಗರ ಆಹಾರ ಭದ್ರತೆಗೆ ಹೊಡೆತವಾಗಿದ್ದು, ಇದನ್ನು ತಡೆಯಲು ಈ ಹಿಂದಿನಂತೆ ಜಿಲ್ಲಾಮಟ್ಟದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಿ ಆಹಾರ ಪೂರೈಕೆ ಮಾಡಬೇಕು. ಇದರಿಂದ ಯಾವುದೇ ತೊಂದರೆ ಆಗದೆ ಕೊರಗರಿಗೆ ಸಮರ್ಪಕವಾಗಿ ಆಹಾರ ದೊರೆಯಲು ಸಾಧ್ಯ ಎಂದು ಹೇಳಿದರು.

ಕೊರಗ ಸಮುದಾಯದ ಆರೋಗ್ಯದ ಬಗ್ಗೆ ಸರ್ವೆ ಮಾಡಬೇಕು. ಎಷ್ಟು ಕುಟುಂಬಗಳಿವೆ ಎಂಬುದನ್ನು ಗುರುತಿಸಿ ಅವರಿಗೆ ಆರೋಗ್ಯ ಕಾರ್ಡ್ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ವಸತಿಗೆ 10 ಲಕ್ಷ ರೂ. ಒದಗಿಸಿ :

ಪ್ರಸ್ತುತ ಕೊರಗ ಸಮುದಾಯಗಳಿಗೆ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನಿಗಮದವರು ಮೊದಲು ಎರಡು ಕಂತುಗಳಲ್ಲಿ ಹಣ ನೀಡಿದರೆ, ಮೂರನೇ ಮತ್ತು ನಾಲ್ಕನೇ ಕಂತಿನ ಹಣ ಒಮ್ಮೇಲೆ ನೀಡುತ್ತಿದ್ದಾರೆ. ಇದರಿಂದ ಈ ಹಣ ಮನೆ ನಿರ್ಮಾಣಕ್ಕೆ ಬಳಕೆಯಾಗದೇ ಬೇರೆ ಕಾರ್ಯಕ್ಕೆ ಬಳಸಲಾಗುತ್ತಿದೆ. ಇದರ ಪರಿಣಾಮ ಈಗಲೂ ಕೆಲವು ಕುಟುಂಬಗಳ ಮನೆ ಇನ್ನೂ ಪೂರ್ಣಗೊಂಡಿಲ್ಲ. ಆದುದರಿಂದ ವಸತಿ ಯೋಜನೆಯನ್ನು ಐಟಿಡಿಪಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸಬೇಕು ಎಂದು ಗಣೇಶ್ ಕೊರಗ ಸಭೆಯಲ್ಲಿ ಆಗ್ರಹಿಸಿದರು.

ವಸತಿ ಯೋಜನೆಯಲ್ಲಿ ಕೇವಲ 4.5 ಲಕ್ಷ ರೂ. ಘಟಕ ವೆಚ್ಟವನ್ನು ನೀಡಲಾಗುತ್ತಿದೆ. ಇದರಿಂದ ಮನೆ ನಿರ್ಮಾಣ ಸಾಧ್ಯವಿಲ್ಲ. ಆದುದರಿಂದ ಕೊರಗ ಸಮುದಾಯದ ವಸತಿ ಯೋಜನೆಯ ಘಟಕ ವೆಚ್ಚವನ್ನು 10 ಲಕ್ಷ ರೂ. ಗೆ ಸರಕಾರ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ಬಾಕಿ ಮೊತ್ತ ಬಿಡುಗಡೆಗೆ ಆಗ್ರಹ :

ಕೊರಗ ಸಮುದಾಯದ ಅಭಿವೃದ್ಧಿಗಾಗಿ 2021-22ನೆ ಸಾಲಿನಲ್ಲಿ 3.20 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ 1.85 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಈ ಅನುದಾನ ಸಂಪೂರ್ಣ ವ್ಯಯವಾಗಿದೆ. ಆದುದರಿಂದ ಪ್ರಸ್ತುತ ಕೊರಗ ಜನಾಂಗದವರ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಕ್ಕೆ ಅನುದಾನ ಇಲ್ಲವಾಗಿದೆ ಎಂದು ಮುಖಂಡರು ಸಭೆಯಲ್ಲಿ ದೂರಿದರು.

ಇದೀಗ ಬಾಕಿ ಇರುವ 1.35 ಕೋಟಿ ರೂ. ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಅದೇ ರೀತಿ ಪ್ರತಿ ವರ್ಷ ರಾಜ್ಯ ಸರಕಾರ ಕೊರಗ ಸಮುದಾಯದ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ ಮೀಸಲಿರಿಸಬೇಕು ಎಂದು ಮುಖಂಡರು ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ ಎಂದು ಯೋಜನಾಧಿಕಾರಿ ನಾರಾಯಣ ಸ್ವಾಮಿ ತಿಳಿಸಿದರು.

ತಾಲೂಕಿನ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಕೊರಗ ಸಮುದಾಯದ ಎಸೆಸೆಲ್ಸಿಯ ಎಲ್ಲ 24 ವಿದ್ಯಾರ್ಥಿಗಳು ಕೂಡ ಉತ್ತೀರ್ಣರಾಗಿದ್ದು, ಅವರಿಗೆ ಆಯಾ ಶಾಲೆಗಳಲ್ಲಿ ವಿಶೇಷ ಗಮನ ನೀಡಲಾಗುತ್ತಿದೆ ಎಂದು ಅಧಿಕಾರಿ ಸಭೆಯಲ್ಲಿ ತಿಳಿಸಿದರು. ಕೇವಲ ಎಸೆಸೆಲ್ಸಿ ಉತ್ತೀರ್ಣರಾದರೆ ಸಾಲದು ಅವರು ಉನ್ನತ ಶಿಕ್ಷಣ ಪಡೆಯವಂತೆಯೂ ಅಧಿಕಾರಿಗಳು ಗಮನ ಹರಿಸಬೇಕು. ಮುಖ್ಯವಾಗಿ ಅಂಗನವಾಡಿಗೆ ಬರುವ ಮಕ್ಕಳ ಬಗ್ಗೆ ನಿಗಾ ಇರಿಸಬೇಕು. ಆ ಮಕ್ಕಳು ಅರ್ಧದಲ್ಲಿಯೇ ಶಾಲೆ ಬಿಡದಂತೆ ನೋಡಿಕೊಳ್ಳಬೇಕು ಎಂದು ಗಣೇಶ್ ಕುಂದಾಪುರ ತಿಳಿಸಿದರು.

ಸಭೆಯಲ್ಲಿ ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಕೊರಗ ಮುಖಂಡರಾದ ಸಂಜೀವ, ಗೌರಿ, ಇಲಾಖಾಧಿಕಾರಿಗಳು, ಮೊದಲಾದವರು ಹಾಜರಿದ್ದರು.

ಕಳೆದ ಬಾರಿ ನಡೆದ ಕೊರಗ ಸಮುದಾಯದ ಕುಂದುಕೊರತೆ ಸಭೆಗೆ ಸಂಬಂಧಿಸಿದ ನಿರ್ಣಯಗಳ ಯಾವುದೇ ದಾಖಲೆಗಳನ್ನು ಉಳಿಸಿಕೊಳ್ಳದ ಅಧಿಕಾರಿಗಳ ವಿರುದ್ಧ ಕೊರಗ ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

2025ರ ಜನವರಿಯಲ್ಲಿ ತಾಲೂಕು ಮಟ್ಟದ ಕುಂದು ಕೊರತೆ ಸಭೆ ನಡೆದಿದ್ದು, ಅದರ ಬಳಿಕ ನಡೆದ ಈ ಸಭೆಯಲ್ಲಿ ಹಿಂದಿನ ಸಭೆಯ ನಿರ್ಣಯವನ್ನು ಮುಖಂಡರು ಕೇಳಿದರು. ಅಂತಹ ಯಾವುದೇ ದಾಖಲೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಇದರಿಂದ ಕೆಂಡಮಂಡಲರಾದ ಕೊರಗ ಮುಖಂಡ ಬೊಗ್ರ ಕೊಕ್ಕರ್ಣೆ, ಅಧಿಕಾರಿಗಳಿಗೆ ನಮ್ಮ ಸಮುದಾಯದ ಬಗ್ಗೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಹೀಗೆ ಮಾಡಿದರೆ ನಮಗೆ ಹೇಗೆ ನ್ಯಾಯ ಸಿಗಲು ಸಾಧ್ಯ. ಇದರ ವಿರುದ್ಧ ಜಿಲ್ಲಾಧಿಕಾರಿ ಕಚೇರಿಯಲ್ಲ, ಆಯಾ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯಶ್ಪಾಲ್ ಸುವರ್ಣ, ಮುಗ್ಧ ಸಮುದಾಯ ಎಂಬ ಕಾರಣಕ್ಕೆ ಅಧಿಕಾರಿಗಳು ಇವರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಯಾವುದೇ ದಾಖಲೆ ಇಟ್ಟುಕೊಳ್ಳದೆ ಇರುವುದು ಎಷ್ಟು ಸರಿ. ಈ ಬಗ್ಗೆ ನೋಟೀಸ್ ಜಾರಿ ಮಾಡಬೇಕು ಎಂದು ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News