ಮತದಾರರ ಪಟ್ಟಿ ಪರಿಷ್ಕರಣೆ ಸಂವಿಧಾನ ವಿರೋಧಿ ನಡೆ: ಶಿವಸುಂದರ್
ಉಡುಪಿ: ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ಮತದಾರರ ನಾಗರಿಕತ್ವ ಪರಿಶೀಲನೆ ಸಂವಿಧಾನ ವಿರೋಧಿ ನಡೆಯಾಗಿದ್ದು, ಮತದಾರರ ಪಟ್ಟಿಯಲ್ಲಿರಲು, ಸೇರಲು ಶಿಕ್ಷಣ, ಆಸ್ತಿಯನ್ನು ಷರತ್ತಿಗೊಡ್ಡಲಾಗುತ್ತಿದೆ ಎಂದು ಹಿರಿಯ ಚಿಂತಕ ಶಿವಸುಂದರ್ ಆರೋಪಿಸಿದ್ದಾರೆ.
ಸಾಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ‘ವಕ್ಛ್ ಅಪಪ್ರಚಾರ ಮತ್ತು ವಾಸ್ತವ’ ಕೃತಿ ಬಿಡುಗಡೆ ಹಾಗೂ ಎಸ್ಐಆರ್(ಮತದಾರರ ಪಟ್ಟಿಯ ತೀವ್ರ ಪರಿಶೀಲನೆ) ಕುರಿತಂತೆ ಹೋಟೆಲ್ ಕಿದಿಯೂರಿನ ಮಾಧವಕೃಷ್ಣ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಸಂವಿಧಾನದ ಆಶಯದಂತೆ ನಡೆದ ಯಾವ ಪರಿಷ್ಕರಣೆಯನ್ನು ಯಾರೂ ವಿರೋಧಿಸಿಲ್ಲ. ಕಾಲ ಕಾಲಕ್ಕೆ ಪರಿಷ್ಕರಣೆ ನಡೆಯಲೇ ಬೇಕು. ನಾವು ಯಾರು ಕೂಡ ಪರಿಷ್ಕರಣೆಯ ವಿರೋಧಿಗಳಲ್ಲ. ಆದರೆ ಈ ವಿಶೇಷ ಪರಿಷ್ಕಣೆಯು ಸಂವಿಧಾನದ ಆಶಯದ ವಿರುದ್ಧ ಇರುವುದರಿಂದ ಇದರ ಕುರಿತು ಅಪಸ್ವರ ವ್ಯಕ್ತವಾಗುತ್ತಿದೆ. ಇದರಿಂದಾಗಿ ದೇಶದ ದುರ್ಬಲ ವರ್ಗದ ಜನ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ದೇಶದ ಚುನಾವಣೆಯನ್ನು ಸಂಘಟಿಸುವುದು, ನಿಯಂತ್ರಿಸುವುದು ಮತ್ತು ಮಾರ್ಗದರ್ಶನ ಮಾಡುವುದು ಚುನಾವಣಾ ಆಯೋಗದ ಪ್ರಮುಖ ಉದ್ದೇಶವಾಗಿದೆ. ಮುಕ್ತ ನಿರ್ಭೀತ ಚುನಾವಣೆ ನಡೆಸುವುದು ಸಹ ಆಯೋಗದ ಕರ್ತವ್ಯ. 18 ವರ್ಷ ತುಂಬಿದ ಎಲ್ಲರೂ ಈ ದೇಶದಲ್ಲಿ ಮತದಾನ ಮಾಡಲು ಅರ್ಹರು. ಯಾವುದೇ ಪಕ್ಷಪಾತ ಇಲ್ಲದೆ ಎಲ್ಲ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ವಾತಾವರಣವನ್ನು ಚುನಾವಣಾ ಆಯೋಗ ನಿರ್ಮಾಣ ಮಾಡ ಬೇಕಾಗಿದೆ. ಇದಕ್ಕೆ ಪೂರಕವಾದ ಕ್ರಮಗಳನ್ನು ಮಾತ್ರ ಮಾಡಲು ಅದಕ್ಕೆ ಅಧಿಕಾರವಿದೆ. ಈ ಉದ್ದೇಶವನ್ನು ಈಡೇರಿಸಲು ಚುನಾವಣಾ ಆಯೋಗ ಮತಪಟ್ಟಿಯನ್ನು ಪರಿಷ್ಕರಿಸಬಹುದಾಗಿದೆ ಎಂದವರು ಹೇಳಿದರು.
ಈ ದೇಶದಲ್ಲಿ ಹಿಂದೂ, ಮುಸ್ಲಿಮ್, ಬಡವ, ಶ್ರೀಮಂತ, ದಲಿತ ಯಾರೇ ಆದರೂ ಕೂಡ ಮತದಾನ ಮಾಡಲು, ಚುನಾವಣೆಯಲ್ಲಿ ಭಾಗವಹಿಸಲು ಅರ್ಹರು. ಇಂದು ಚುನಾವಣಾ ಆಯೋಗ ಹನ್ನೊಂದು ದಾಖಲಾತಿಗಳ ಪಟ್ಟಿಯನ್ನು ಒದಗಿಸಿ ಇದರಲ್ಲಿ ಯಾವುದಾದರೂ ಇರಬೇಕೆಂದು ಕಡ್ಡಾಯಗೊಳಿಸುತ್ತಿದೆ. ವಿಶೇಷ ಪರಿಷ್ಕೃರಣೆಯ ಹೆಸರಿನಲ್ಲಿ ದೊಡ್ಡ ಸಂಖ್ಯೆಯ ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ ಪಟ್ಟಿ ಮಾಡಿರುವ ದಾಖಲಾತಿಗಳು ಈ ದೇಶದ ಅರ್ಧದಷ್ಟು ಜನರ ಬಳಿ ಇಲ್ಲ. ಮುಖ್ಯವಾಗಿ ಬಡವರಲ್ಲಿ ಇಲ್ಲ. ಮತದಾರರಲ್ಲಿ ಇರೋ ದಾಖಲೆ ಬದಲು ಇಲ್ಲದಿರೋ ದಾಖಲೆಯನ್ನು ಅದು ಕೇಳುತ್ತಿದೆ. ಈ ವಿಶೇಷ ಪರಿಷ್ಕೃರಣೆಯಿಂದ ಅವರು ಅವರ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಶಿವಸುಂದರ್ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಜನರು ಸರಕಾರವನ್ನು ಚುನಾಯಿಸಬೇಕು. ಆದರೆ ಇಂದು ಸರಕಾರ ತನಗೆ ಯಾರು ಮತದಾನ ಮಾಡಬೇಕೆಂದು ಆಯ್ಕೆ ಮಾಡುತ್ತದೆ. ಈ ಪ್ರಕ್ರಿಯೆಯಿಂದ ಅಲ್ಪಸಂಖ್ಯಾತರು, ದುರ್ಬಲರು, ದಲಿತರು ವ್ಯಾಪಕ ಸಮಸ್ಯೆಗೀಡಾಗುತ್ತಾರೆ. ಈ ವಿಶೇಷ ಪರಿಷ್ಕೃರಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದವರು ನುಡಿದರು.
ಬಿಹಾರ ಚುನಾವಣೆಯಲ್ಲಿ ಇದು ಯಾವ ರೀತಿಯಲ್ಲಿ ಪರಿಣಾಮ ಬೀರಿದೆ ಎಂಬುದು ನಮ್ಮ ಮುಂದಿರುವಾಗ ಇದರ ಕುರಿತು ಜನ ಜಾಗೃತಿ ಅಗತ್ಯ. ಅನಗತ್ಯವಾಗಿ ಚುನಾವಣಾ ಆಯೋಗದ ಸಂವಿಧಾನ ಆಶಯದ ವಿರೋಧಿ ನೀತಿಗಳಿಂದ ಬಡವರು ತಮ್ಮ ಹಕ್ಕನ್ನು ಕಳೆದುಕೊಳ್ಳುವಂತಾಗಬಾರದು ಎಂದರು.
ವಕ್ಛ್ ಪ್ರಕರಣ ಸುಪ್ರೀಂಕೋರ್ಟಿನಲ್ಲಿದ್ದು ನ್ಯಾಯಾಲಯಗಳು ಗಾಯಕ್ಕೆ ಮುಲಾಮು ಹಚ್ಚೋದು ಬಿಟ್ಟರೆ ಸಾಂವಿಧಾನಿಕ ಪರಿಹಾರ ನೀಡದಂತಹ ಪರಿಸ್ಥಿತಿ ಉದ್ಭವವಾಗಿದೆ. ಮನೆ ಮನೆಗೆ ಬಂದು ಅರ್ಹರನ್ನು ಮತದಾರರ ಪಟ್ಟಿಯಲ್ಲಿ ಸೇರಿಸೋದು ಚುನಾವಣಾ ಆಯೋಗದ ಜವಾಬ್ದಾರಿ. ಆದರೆ ಈಗ ಯಾರು ಮತದಾರರಾಗಬೇಕೆಂಬುದನ್ನು ಸರಕಾರ/ಚುನಾವಣಾ ಆಯೋಗ ಆಯ್ಕೆ ಮಾಡುತ್ತಿದೆ. ಆಯೋಗ ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದವರು ಆರೋಪಿಸಿದರು.
ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕ ಎ.ಕೆ ಕುಕ್ಕಿಲ, ವಕ್ಫ್ ತಿದ್ದುಪಡಿ ಕಾಯಿದೆ, ಮುಂದಿನ ನಡೆಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮುಹಮ್ಮದ್ ಮೌಲಾ, ಫಾ.ವಿಲಿಯಂ ಮಾರ್ಟಿಸ್, ಸಾಲಿಡಾರಿಟಿ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ ಉಪಸ್ಥಿತರಿದ್ದರು. ಯಾಸೀನ್ ಕಾರ್ಯಕ್ರಮ ನಿರೂಪಿಸಿದರು.