ಶಿರಸಿ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿಗೆ ನಿರ್ಧಾರ
ಶಿರಸಿ: ಅತೀ ಸೂಕ್ಷ್ಮ ಪ್ರದೇಶವೆಂದು ಕಸ್ತೂರಿರಂಗನ್ ವರದಿಯ 7 ನೇ ಅಧಿಸೂಚನೆಗೆ ವ್ಯಾಪಕ ಆಕ್ಷೇಪಣೆ ಸಲ್ಲಿಸುವ ಹಿನ್ನಲೆಯಲ್ಲಿ , ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿಯೊಂದಿಗೆ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ ತಾಲೂಕಿನವರಿಂದ ಸೆ.5 ಕ್ಕೆ ಶಿರಸಿಯಲ್ಲಿ ಆಕ್ಷೇಪ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಶಿರಸಿಯ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನ ತೀವ್ರವಾಗಿ ವಿರೋಧಿಸಿ ಆಕ್ಷೇಪಿಸಿ ಆಕ್ಷೇಪಣ ಸಲ್ಲಿಸಲು ಮೇಲಿನಂತೆ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಪಶ್ಚಿಮ ಘಟ್ಟ ಪ್ರದೇಶವನ್ನ ರಕ್ಷಣೆ ಹಾಗೂ ಸಂರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನು, ನೀತಿ - ನಿಯಮ ಈಗಾಗಲೇ ಇರುವುದರಿಂದ ಹೊಸ ಮಾನದಂಡದ ಅವಶ್ಯಕತೆ ಇರುವುದಿಲ್ಲ ಎಂದು ಅವರು ಹೇಳದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಇಬ್ರಾಹೀಂ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ನಾಗರಾಜ ದೇವಸ್ಥಳಿ, ರಾಜು ನರೇಬೈಲ್, ಚಂದ್ರ ಶಾನಭಾಗ, ಚಂದ್ರು ನಾಯ್ಕ, ಕಿರಣ ಮರಾಠಿ ದೇವನಳ್ಳಿ, ರಫೀಕ ಗೌಡಳ್ಳಿ , ಪರಮೇಶ್ವರ ವಾನಳ್ಳಿ, ಜಯಶ್ರೀ ಪಟಗಾರ, ಕಲ್ಪನಾ ನರೇಬೈಲ್ , ಅಬ್ದುಲ್ ಮುನಾಫ್, ಪಂಪಾವತಿ, ಯಶವಂತ ಬಂಡಲ್, ಸುರೇಶ ಗೌಡ ಗುಡ್ನಾಪುರ, ಲಕ್ಷ್ಮಣ ಕೆ ಗೌಡ ಗುಡ್ನಾಪುರ, ಗೋಪಾಲ ಜಿ ನಾಯ್ಕ, ಫಕೀರಪ್ಪ , ಹುಲಿಯಾ ಗೌಡ, ಪ್ರಶಾಂತ್ ನಾಯ್ಕ, ಗಣಪತಿ ಮೊಗಳ್ಳಿ ಮುಂತಾದವರು ಉಪಸ್ಥಿತರಿದ್ದರು.
1 ಲಕ್ಷ ಕರಪತ್ರ :
ಕಸ್ತೂರಿ ರಂಗನ್ ವಿರೋಧಿ ವರದಿ ಜಾರಿ ವಿರೋಧದ ಕುರಿತು ಹಾಗೂ ಆಕ್ಷೇಪಣೆಗೆ ಕಾರಣಗಳ ಮಾಹಿತಿಯೊಂದಿಗೆ ಒಂದು ಲಕ್ಷ ಕರಪತ್ರವನ್ನ ಮುದ್ರಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಶಿರಸಿ - ಸಾಗರ 3 ನೇ ಸ್ಥಾನ:
ಕಸ್ತೂರಿ ರಂಗನ್ ವರದಿ 7 ನೇ ಅಧಿಸೂಚನೆಯಲ್ಲಿ ಕರ್ನಾಟಕದ 10 ಜಿಲ್ಲೆಯಲ್ಲಿನ 32 ತಾಲೂಕಿನಲ್ಲಿ 1502 ಹಳ್ಳಿಗಳನ್ನು ಸೂಕ್ಷ್ಮ ಪ್ರದೇಶವೆಂದು ಉಲ್ಲೇಖಿಸಲ್ಪಟ್ಟಿದೆ. ಅತೀ ಹೆಚ್ಚು 138 ಹಳ್ಳಿಗಳು ತೀರ್ಥಹಳ್ಳಿಯಲ್ಲಿ . ತಾಲೂಕಿ ನಲ್ಲಿ 2 ನೇ ಸ್ಥಾನ ಹೊಸನಗರ ತಾಲೂಕಿನಲ್ಲಿ 118 ಹಳ್ಳಿಗಳಿದ್ದರೆ, ಶಿರಸಿ ಮತ್ತು ಸಾಗರ ತಾಲೂಕಿನಲ್ಲಿ ತಲಾ 114 ಅತೀ ಸೂಕ್ಷ್ಮ ಹಳ್ಳಿಗಳೆಂದು ಗುರುತಿಸಿ ರಾಜ್ಯ ದಲ್ಲಿ ಅತೀ ಹೆಚ್ಚು ತಾಲೂಕಿನಲ್ಲಿ ಸೂಕ್ಷ್ಮ ಪ್ರದೇಶದ ಪಟ್ಟಿಯಲ್ಲಿ ಶಿರಸಿ ಮತ್ತು ಸಾಗರ 3 ನೇ ಸ್ಥಾನದಲ್ಲಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.