ಭಟ್ಕಳ: ವ್ಯಕ್ತಿಗತ, ಕೌಟುಂಬಿಕ ಹಾಗೂ ಸಾಮಾಜಿಕ ಜೀವನದ ಯಶಸ್ಸಿಗೆ ಪ್ರವಾದಿ ಮುಹಮ್ಮದ್ (ಸ) ಅವರ ಬೋಧನೆ ಹಾಗೂ ಆದರ್ಶಗಳನ್ನು ಅನುಸರಿಸುವುದೇ ಮಾರ್ಗ ಎಂದು ದಾರುಲ್ ಉಲೂಮ್ ನದ್ವತುಲ್ ಉಲಮಾ, ಲಖನೌನ ತಫ್ಸೀರ್ ಮತ್ತು ಹದೀಸ್ ಅಧ್ಯಾಪಕ ಮೌಲಾನಾ ಅಬ್ದುಲ್‌ಸುಬ್ಹಾನ್ ನಖುದಾ ನದ್ವಿ ಮದನಿ ಹೇಳಿದರು.

ಭಟ್ಕಳ ಮುಸ್ಲಿಂ ಯೂತ್ ಫೆಡರೇಷನ್ ವತಿಯಿಂದ ಇಲ್ಲಿನ ಆಮಿನಾ ಪ್ಯಾಲೇಸ್‌ನಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಸೀರತ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಚರಿತ್ರೆ ಎಲ್ಲ ಕಾಲದ ಜನರಿಗೆ ಮಾರ್ಗದರ್ಶನ ನೀಡುವಂತಹದ್ದಾಗಿದೆ. ಇಂದಿನ ನೈತಿಕ ಅಧಃಪತನ, ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪ್ರವಾದಿಯವರ ಆದರ್ಶಗಳ ಅನುಷ್ಠಾನ ಪರಿಹಾರ ಒದಗಿಸಬಲ್ಲದು ಎಂದು ಅವರು ಹೇಳಿದರು.

ಯುವಜನರು ತಮ್ಮ ಸಮಯ ಮತ್ತು ಸಾಮರ್ಥ್ಯವನ್ನು ವ್ಯರ್ಥ ಮಾಡದೆ ಉತ್ತಮ ಕಾರ್ಯಗಳಿಗೆ ಬಳಸಬೇಕು. ಸೀರತ್‌ ಕಾರ್ಯಕ್ರಮಗಳ ಉದ್ದೇಶ ಕೇವಲ ಪ್ರವಚನ, ನಾತ್‌ ಕೇಳುವುದಕ್ಕೆ ಸೀಮಿತವಾಗಬಾರದು. ಪ್ರವಾದಿಯವರ ಜೀವನಮೌಲ್ಯಗಳನ್ನು ತಮ್ಮ ನಡೆ, ಕುಟುಂಬ ಜೀವನ ಹಾಗೂ ದೈನಂದಿನ ವ್ಯವಹಾರಗಳಲ್ಲಿ ಅಳವಡಿಸಿಕೊಳ್ಳುವುದೇ ಮುಖ್ಯ ಎಂದು ತಿಳಿಸಿದರು.

ಧರ್ಮದ ವಿಚಾರದಲ್ಲಿಯೂ ಕೇವಲ ಆಶಯ ಮತ್ತು ಬಯಕೆ ಸಾಕಾಗುವುದಿಲ್ಲ. ದೃಢ ಸಂಕಲ್ಪ, ನಿರಂತರ ಪ್ರಯತ್ನ ಹಾಗೂ ಸತ್ಕಾರ್ಯಗಳ ಮೂಲಕ ಧಾರ್ಮಿಕ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಖಾರಿ ಅಹ್ಮದ್ ಅವರು ಕುರಾನ್ ಪಠಿಸಿದರು. ರಾಯಿದ್ ಖಾಜಿ ನಾತ್‌ ಪ್ರಸ್ತುತಪಡಿಸಿ ದರು. ಮೌಲವಿ ಬಶಾರ್ ರುಕ್ನುದ್ದೀನ್ ನದ್ವಿ ನಿರೂಪಿಸಿದರು. ಫೆಡರೇಷನ್ ಕಾರ್ಯದರ್ಶಿ ಮೌಲಾನಾ ಸಯ್ಯದ್ ಅಹ್ಮದ್ ಅಯ್ಯಾದ್ ಎಸ್.ಎಂ. ನದ್ವಿ ಸಂಸ್ಥೆಯ ಉದ್ದೇಶ ಹಾಗೂ ಚಟುವಟಿಕೆಗಳ ಕುರಿತು ಮಾತನಾಡಿದರು.

ಫೆಡರೇಷನ್ ಅಧ್ಯಕ್ಷ ಮೌಲಾನಾ ವಸೀಉಲ್ಲಾಹ್ ನದ್ವಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹುಸೇನ್ ಹಲ್ಲಾರೆ ಧನ್ಯವಾದ ಅರ್ಪಿಸಿದರು.

ಜಾಮಿಯಾ ಇಸ್ಲಾಮಿಯಾ ಭಟ್ಕಳದ ಪ್ರಾಂಶುಪಾಲ ಮೌಲಾನಾ ಮಕ್ಬೂಲ್ ಅಹ್ಮದ್ ನದ್ವಿ, ಜಮಾಅತುಲ್ ಮುಸ್ಲಿಮೀನ್ ಭಟ್ಕಳದ ಉಪಖಾಜಿ ಮೌಲಾನಾ ಮುಹಮ್ಮದ್ ಅನ್ಸಾರ್ ನದ್ವಿ ಮದನಿ, ಮಜ್ಲಿಸ್ ಇಸ್ಲಾಹ್-ವ-ತಂಝೀಮ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಜೀಝುರ್ರಹ್ಮಾನ್ ನದ್ವಿ ಸೇರಿದಂತೆ ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಯುವಕರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor