ಕುಮಟಾ: ಕೆರೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

Update: 2026-08-23 18:58 IST

ಕುಮಟಾ: ಕೆರೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಗಾಗಿ ನಡೆದ ಕಾರ್ಯಾಚರಣೆಯಲ್ಲಿ ಕುಮಟಾ ಠಾಣೆಯ ಪಿಎಸ್‌ಐ ಖಾದರ್ ಭಾಷಾ ಸ್ವತಃ ನೀರಿಗಿಳಿದು ಶೋಧ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರೊಂದಿಗೆ ಕೈಜೋಡಿಸಿದ ಅವರು, ಸತತ ಕಾರ್ಯಾಚರಣೆಯ ಬಳಿಕ ವಿದ್ಯಾರ್ಥಿಯ ಮೃತದೇಹ ಪತ್ತೆಹಚ್ಚಿ ಮೇಲಕ್ಕೆತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ತಾಲೂಕಿನ ವಾಲಗಳ್ಳಿ ಸಮೀಪದ ಜಡ್ಡಿಕೆರೆಯಲ್ಲಿ ಈ ಘಟನೆ ನಡೆದಿದೆ. ಹೆಗಡೆ ಗ್ರಾಮದ ಗುನಗನಕೊಪ್ಪ ನಿವಾಸಿ ಪ್ರಶಾಂತ ಕೇಶವ ಮುಕ್ರಿ (18) ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿದ್ದರು. ನೀರಿನ ಆಳ ಹಾಗೂ ಸೆಳೆತದ ಅರಿವಿಲ್ಲದೆ ಮುಳುಗಿದ ಅವರು ಬಳಿಕ ನಾಪತ್ತೆಯಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಕೆರೆಯ ಬಳಿ ಜಮಾಯಿಸಿ ಹುಡುಕಾಟ ಆರಂಭಿಸಿದ್ದರು. ಬಳಿಕ ಸ್ಥಳಕ್ಕೆ ಧಾವಿಸಿದ ಕುಮಟಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ಕೈಗೊಂಡರು. ವಿದ್ಯಾರ್ಥಿಯ ಮೃತದೇಹಕ್ಕಾಗಿ ಕೆರೆಯ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಲಾಯಿತು.

ಈ ವೇಳೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪಿಎಸ್‌ಐ ಖಾದರ್ ಭಾಷಾ ಅವರು ಸ್ವತಃ ನೀರಿಗಿಳಿದು ಶೋಧ ಕಾರ್ಯಕ್ಕೆ ಕೈಜೋಡಿಸಿದರು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರೊಂದಿಗೆ ಸೇರಿ ನೀರಿನಲ್ಲಿ ಹುಡುಕಾಟ ನಡೆಸಿದ ಅವರು, ಕೊನೆಗೂ ಪ್ರಶಾಂತ ಅವರ ಮೃತದೇಹವನ್ನು ಪತ್ತೆಹಚ್ಚಿ ಮೇಲಕ್ಕೆತ್ತುವ ಕಾರ್ಯದಲ್ಲಿ ಭಾಗಿಯಾದರು.

ಪಿಎಸ್‌ಐ ಸ್ವತಃ ನೀರಿಗಿಳಿದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದು ಸ್ಥಳೀಯರ ಗಮನ ಸೆಳೆಯಿತು. ಕರ್ತವ್ಯನಿಷ್ಠೆ ಹಾಗೂ ಧೈರ್ಯ ಪ್ರದರ್ಶಿಸಿದ ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News