×
Ad

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಸೃಷ್ಟಿಸಿದೆ : ಸಚಿವ ಭೈರತಿ ಸುರೇಶ್

Update: 2025-12-29 23:24 IST

ವಿಜಯನಗರ(ಹೊಸಪೇಟೆ) : ಕಳೆದ ಎರಡುವರೆ ವರ್ಷದಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ವಿಜಯನಗರ ಜಿಲ್ಲೆಗೆ 360 ಕೋಟಿ ರೂ., ರಾಜ್ಯಕ್ಕೆ 14 ಸಾವಿರ ಕೋಟಿ ರೂ.ಗಳ ಅನುದಾನ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯಾದ್ಯಾಂತ ಅಭಿವೃದ್ಧಿ ಪರ್ವ ಸೃಷ್ಟಿಸಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಭೈರತಿ ಸುರೇಶ್ ಹೇಳಿದರು.

ಹಗರಪನಹಳ್ಳಿ ಪಟ್ಟಣದ ಹಳೆಯ ಬಸ್ ನಿಲ್ದಾಣದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾಡಳಿತ, ನಗರಸಭೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಹರಪನಹಳ್ಳಿ ಪಟ್ಟಣಕ್ಕೆ ಸುಧಾರಿತ ಸಗಟು ನೀರು ಸರಬರಾಜು ಕಲ್ಪಿಸುವ ಯೋಜನೆ ಶಂಕುಸ್ಥಾಪನೆ ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.

ರಾಜ್ಯದಲ್ಲಿ ಪಂಚಗ್ಯಾರಂಟಿ ಯೋಜನೆಗೆ ಪ್ರತಿ ಬಜೆಟ್‌ನಲ್ಲಿ 60 ಸಾವಿರ ಕೋಟಿ ರೂ.ಗಳನ್ನು ನಿಗಧಿಪಡಿಸಿ ಜನಸಾಮಾನ್ಯರ ಆರ್ಥಿಕ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಅದರಲ್ಲೂ ಮಹಿಳೆಯರನ್ನು ಆರ್ಥಿಕವಾಗಿ ಸಧೃಡರನ್ನಾಗಿಸಲು ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.ಗಳು, ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣಕ್ಕೆ ಅನುಕೂಲ, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಪೂರೈಕೆ. ಅನ್ನಭಾಗ್ಯದ ಮೂಲಕ ಪ್ರತಿ ಮನೆಗೆ ಉಚಿತ ಅಕ್ಕಿ ವಿತರಣೆ ಮಾಡುವ ಮೂಲಕ ಮದ್ಯಮ ವರ್ಗದ ಜನರಿಗೆ ಅರ್ಥಿಕ ಸಶಕ್ತರನ್ನಾಗಿಸಿದೆ ಎಂದು ಹೇಳಿದರು.

ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಕಳೆದ ನಾಲ್ಕು ತಿಂಗಳ ಹಿಂದೆ ರಾಜ್ಯ ಸರ್ಕಾರ ಹರಪನಹಳ್ಳಿಯನ್ನು ಪುರಸಭೆಯಿಂದ ನಗರಸಭೆಯನ್ನಾಗಿ ಮೇಲ್ದರ್ಜಗೇರಿಸಲಾಗಿದೆ. ಇದೀಗ ಕ್ಷೇತ್ರದಲ್ಲಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಹರಪನಹಳ್ಳಿ ನಗರಕ್ಕೆ 43.36 ಕೋಟಿ ರೂ. ವೆಚ್ಚದಲ್ಲಿ ಸುಧಾರಿತ ಸಗಟು ನೀರು ಸರಬರಾಜು ಕಲ್ಪಿಸುವ ಯೋಜನೆಯ ಶಂಕುಸ್ಥಾಪನೆಯನ್ನು ನೇರವೇರಿಸಲಾಗಿದೆ. ನಗರದಲ್ಲಿ ಇನ್ನು ಹೊಸ ವಸತಿ ಬಡಾವಣೆ ಸೇರಿ 22 ಕಿಮೀ ನಷ್ಟು ಪೈಪ್‌ಲೈನ್ ಅಳವಡಿಸಬೇಕಿದೆ. ಜನಸಂಖ್ಯೆ ಹೆಚ್ಚಿರುವುದರಿಂದ 12.000 ಮನೆಗಳಿಗೆ ನೀರು ತಲುಪಿಸಲು ಸಾಧ್ಯವಾಗಿಲ್ಲ ಎಂದರು.

ಇದೇ ವೇಳೆ ವೇದಿಕೆಯಲ್ಲಿ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಹರಪನಹಳ್ಳಿ ನಗರಕ್ಕೆ 43.36 ಕೋಟಿ ರೂ. ವೆಚ್ಚದಲ್ಲಿ ಸುಧಾರಿತ ಸಗಟು ನೀರು ಸರಬರಾಜು ಕಲ್ಪಿಸುವ ಯೋಜನೆಯ ಶಂಕುಸ್ಥಾಪನೆ, ಚನ್ನಹಳ್ಳಿ ತಾಂಡಾ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಜಿನುಗು ಕೆರೆಯ ನಿರ್ಮಾಣ ಶಂಕುಸ್ಥಾಪನೆ, ಹರಪನಹಳ್ಳಿ ನಗರದಲ್ಲಿ 4.56 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟದ ಶಂಕುಸ್ಥಾಪನೆ, ನಿಚ್ಚವ್ವನಹಳ್ಳಿ, ಕಡಬಗೆರೆ ಮತ್ತು ಮಾಡ್ಲಗೆರೆ ಗ್ರಾಮಗಳಲ್ಲಿ ತಲಾ 60 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಮತ್ತು ಕ್ಷೇಮಕೇಂದ್ರಗಳ ಉದ್ಘಾಟನೆ, ನಗರದಲ್ಲಿ 2.30 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ, ವಿವಿಧ ಗ್ರಾಮಗಳಲ್ಲಿ ಕೆಕೆಆರ್ ಡಿಬಿ ಯೋಜನೆಯಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ, ನರೇಗಾ ಯೋಜನೆಯಡಿ 2 ಘನತ್ಯಾಜ್ಯ ವಿಲೇವಾರಿ ಘಟಕಗಳ ಉದ್ಘಾಟನೆ, 87 ಸ್ಮಶಾನಗಳು ಮತ್ತು ಭೋಜನ ಶಾಲೆ ಉದ್ಘಾಟನೆ, ಕಾರ್ಮಿಕ ಇಲಾಖೆಯಿಂದ 25 ಫಲಾನುಭವಿಗಳಿಗೆ ಮನೆಗಳ ಆದೇಶ ಪತ್ರ ವಿತರಣೆ, ಹರಪನಹಳ್ಳಿ ಕ್ಷೇತ್ರದ 20 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2 ಕೋಟಿರೂ ವೆಚ್ಚದ ಸ್ಮಾರ್ಟ್ ಕ್ಲಾಸ್ ಅಳವಡಿಸುವ ಕಾಮಗಾರಿಯ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಸಮಾರಂಭದಲ್ಲಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಉದಯ ಶಂಕರ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮನೋಹರ, ಕ.ನ.ನೀ.ಸ ಮತ್ತು ಒ.ಚ.ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಡಿ.ಮಂಜುನಾಥ, ಕಾರ್ಯಪಾಲಕ ಅಭಿಯಂತರರಾದ ದೀಪಾ, ನಗರಸಭೆ ಪೌರಾಯುಕ್ತರಾದ ರೇಣುಕಾ ಎಸ್.ದೇಸಾಯಿ, ತಹಶೀಲ್ದಾರ್ ಬಿ.ವಿ.ಗೀರಿಶ್ ಬಾಬು ವೇದಿಕೆಯಲ್ಲಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News