ನ.8ರಂದು ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ‘ತಾಯಿಹಾಲು ಬ್ಯಾಂಕ್’ ಸ್ಥಾಪನೆ
ವಿಜಯಪುರ: ತಾಯಿ ಹಾಲಿನ ಕೊರತೆ ಯಿಂದ ಅನೇಕ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದನ್ನು ತಪ್ಪಿಸಲು ಸರಕಾರಿ ಆಸ್ಪತ್ರೆಯಲ್ಲಿ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ತಾಯಿಹಾಲು ಬ್ಯಾಂಕ್ ಸ್ಥಾಪನೆಯಾಗಲಿದೆ.
ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನ.8 ರಂದು ನೂತನ ಕೇಂದ್ರ ಆರಂಭಗೊಳ್ಳಲಿದ್ದು, ವಾರ್ಷಿಕ 2 ಸಾವಿರ ನವಜಾತ ಶಿಶುಗಳಿಗೆ ಸೇವೆ ಒದಗಿಸುವ ಗುರಿ ಹೊಂದಿದೆ.
ಸುಶೇನಾ ಹೆಲ್ತ್ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಡಾ.ಸಂತೋಷ್ ಕರ್ಲೆಟ್ಟಿ ನೇತೃತ್ವದಲ್ಲಿ ಎದೆ ಹಾಲು ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದ್ದು, ಅಕಾಲಿಕ ಮತ್ತು ಅನಾರೋಗ್ಯದ ಶಿಶುಗಳ ಪೌಷ್ಠಿಕಾಂಶದ ಅಗತ್ಯಗಳನ್ನು ಪರಿಹರಿಸುವ ಗುರಿ ಹೊಂದಲಾಗಿದೆ.
ಜಾಗತಿಕವಾಗಿ ಅತಿ ಹೆಚ್ಚು ಅವಧಿಪೂರ್ವ ಜನನ ಭಾರತದಲ್ಲಿ ಆಗುತ್ತಿದ್ದು, ಎಲ್ಲ ಹೆರಿಗೆಗಳಲ್ಲಿ ಶೇ.12ರಷ್ಟು ಅವಧಿಪೂರ್ವ ಶಿಶುಗಳ ಜನನಕ್ಕೆ ಕಾರಣವಾಗುತ್ತಿದೆ. ಇಂತಹ ಹಲವು ನವಜಾತ ಶಿಶುಗಳು ವಿಶೇಷವಾಗಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಈ ಸಮಸ್ಯೆ ಅಧಿಕವಾಗಿ ಕಾಡುತ್ತಿದ್ದು, ಈ ಸಮಸ್ಯೆ ನಿವಾರಣೆ ಮಾಡಿ ನವಜಾತ ಶಿಶುಗಳ ಉತ್ತಮ ಆರೋಗ್ಯಕ್ಕಾಗಿ ಈ ವಿನೂತನ ಯೋಜನೆ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಲಿದೆ.
ಆರೋಗ್ಯ ಮತ್ತಿತತರ ಕಾರಣಗಳಿಂದಾಗಿ ತಾಯಿಯಂದರು ಎದೆಹಾಲು ನೀಡಲು ಸಾಧ್ಯವಾಗದಂತಹ ದುರ್ಬಲ ಮಕ್ಕಳಿಗೆ ಎದೆಹಾಲು ಒದಗಿಸುವ ಮೂಲಕ ನವಜಾತ ಶಿಶುಗಳ ಮರಣ ಕಡಿಮೆ ಮಾಡುವಲ್ಲಿ ಈ ಕೇಂದ್ರ ವರದಾನವಾಗಲಿದೆ.
ಆಸ್ಪತ್ರೆಯಲ್ಲಿ ಪ್ರತಿ ವರ್ಷ ಸುಮಾರು 10,000 ಹೆರಿಗೆಗಳನ್ನು ಮಾಡಲಾಗುತ್ತದೆ. ಸುಮಾರು 1,000 ಅವಧಿ ಪೂರ್ವ ಶಿಶುಗಳು ಸೇರಿದಂತೆ 2,000 ನವಜಾತ ಶಿಶುಗಳಿಗೆ ನವಜಾತ ತೀವ್ರ ಆರೈಕೆಯ ಅಗತ್ಯವಿರುತ್ತದೆ. ಅಂತಹ ಶಿಶುಗಳಿಗೆ ಎದೆ ಹಾಲು ಅತ್ಯುತ್ತಮ ಪೌಷ್ಠಿಕಾಂಶದ ಆಯ್ಕೆಯಾಗಿದೆ. ಇದು ಸೋಂಕಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಮರಣವನ್ನು ಶೇಕಡಾ 20ಕ್ಕಿಂತ ಕಡಿಮೆ ಮಾಡುತ್ತದೆ ಎಂದು ಡಾ.ಕಾರ್ಲೆಟ್ಟಿ ವಿವರಣೆ ನೀಡಿದರು.
ತಾಯಿಯ ಸಾವು, ಅನಾರೋಗ್ಯ ಅಥವಾ ಸಾಕಷ್ಟು ಪ್ರಮಾಣ ಹಾಲು ಉತ್ಪಾದನೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಸುಮಾರು ಶೇ.20ರಷ್ಟು ನವ ಶಿಶುಗಳಿಗೆ ದಾನಿ ತಾಯಿಯ ಹಾಲು ಅಗತ್ಯವಿದೆ. ಆಸ್ಪತ್ರೆಯಲ್ಲಿ ಹೆರಿಗೆ ಮಾಡುವ 900 ತಾಯಂದಿರಲ್ಲಿ 150 ತಾಯಂದಿರನ್ನು ಹಾಲು ದಾನ ಮಾಡಲು ಮನವೊಲಿಸುವುದು ಸಹ ಬ್ಯಾಂಕಿನ ಆರಂಭಿಕ ಗುರಿಗಳನ್ನು ಪೂರೈಸುತ್ತದೆ. ಉತ್ತರ ಕರ್ನಾಟಕ ಪ್ರದೇಶಗಳಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸುವ ನಿಟ್ಟಿನಲ್ಲಿ ಈ ಹಾಲಿನ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ಬೀದರ್ ಮತ್ತು ಕಲಬುರಗಿಯಂತಹ ಇತರ ಜಿಲ್ಲೆಗಳಿಗೆ ಹಾಲು ವಿತರಣೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
-ಡಾ.ಶಿವಾನಂದ ಮಾಸ್ತಿಹೊಳಿ, ವಿಜಯಪುರ ಸರಕಾರಿ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ
ದಾನ ಮಾಡಿದ ಎಲ್ಲ ಹಾಲು ಪ್ರಮುಖ ಪೋಷಕಾಂಶಗಳು ಮತ್ತು ಪ್ರತಿಕಾಯಗಳನ್ನು ಸಂರಕ್ಷಿಸಲು ಪಾಶ್ಚರೀಕರಣಕ್ಕೆ ಒಳಗಾಗುತ್ತದೆ. ಆರು ತಿಂಗಳವರೆಗೆ ಸಂರಕ್ಷಿಸಲಾಗುತ್ತದೆ. ಹಾಲನ್ನು ಮೈನಸ್ 20 ಡಿಗ್ರಿ ಸೆಲ್ಸಿಯಸ್ನಲ್ಲಿ ಸಂಗ್ರಹಿಸಲಾಗುತ್ತದೆ ಆರೋಗ್ಯವಂತ ತಾಯಂದಿರು ಮಾತ್ರ ಹಾಲನ್ನು ದಾನ ಮಾಡಬಹುದು. ಕ್ಯಾನ್ಸರ್ ಅಥವಾ ಎಚ್ಐವಿಯಂತಹ ಗಂಭೀರ ಕಾಯಿಲೆ ಇರುವವರು ಅನರ್ಹರು.
-ಡಾ.ಸಂತೋಷ್ ಕರ್ಲೆಟ್ಟಿ, ಸುಶೇನಾ ಹೆಲ್ತ್ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ