Photo: Windy

ಉಪಗ್ರಹ ಚಿತ್ರಗಳಲ್ಲಿ ಮೋಡಗಳು ಕಡಿಮೆಯಾಗಿರುವುದರಿಂದ ಮಳೆಯ ಚಟುವಟಿಕೆ ದುರ್ಬಲವಾಗಿದೆ. ಆದರೆ ಅಧಿಕೃತವಾಗಿ ಮುಂಗಾರು ಮುಗಿಯಲು ಇನ್ನೂ ಸಮಯವಿದೆ.

ಇತ್ತೀಚಿನ ಉಪಗ್ರಹ ಚಿತ್ರಣಗಳಲ್ಲಿ ಭಾರತದ ಮೇಲೆ ಮೋಡಗಳು ಕಾಣಿಸಿಕೊಳ್ಳದೆ ಇರುವುದು, ನೈಋತ್ಯ ಮುಂಗಾರು ಕೊನೆಗೂ ಹಿಂದೆ ಸರಿಯಲು ಪ್ರಾರಂಭಿಸಿದೆಯೇ ಎಂಬ ಪ್ರಶ್ನೆಗಳನ್ನು ಮೂಡಿಸಿದೆ. ಹೀಗೆ ದೇಶದ ಬಹುತೇಕ ಭಾಗಗಳಲ್ಲಿ ಮೋಡಗಳು ಅತಿ ಕಡಿಮೆಯಾಗಿರುವ ಹೊರತಾಗಿಯೂ, ಮುಂಗಾರು ಹಿಮ್ಮೆಟ್ಟುವಿಕೆ ಅಧಿಕೃತವಾಗಿ ಆರಂಭವಾಗಿಲ್ಲ.

ಉಪಗ್ರಹ ಚಿತ್ರಗಳು ಭಾರತದ ಮೇಲಿನ ಪ್ರದೇಶಗಳಲ್ಲಿ ಹೆಚ್ಚು ಮೋಡಗಳು ಇಲ್ಲದೆ ಇರುವುದನ್ನು ತೋರಿಸಿವೆ. ವಾಯುವ್ಯ ಮತ್ತು ದೇಶದ ಮಧ್ಯ ಭಾಗಗಳಲ್ಲಿ ಗಮನಾರ್ಹವಾಗಿ ಕಡಿಮೆ ಮೋಡಗಳಿವೆ. ಇಂತಹ ಮುಂಗಾರು ಹಿಮ್ಮೆಟ್ಟುವಿಕೆ ಪ್ರಕ್ರಿಯೆ ಕೇವಲ ಭಾರತೀಯ ಉಪಖಂಡಕ್ಕೆ ಮಾತ್ರ ಸೀಮಿತವಾಗಿಲ್ಲ. ಚೀನಾ, ಇಂಡೋನೇಷ್ಯಾ, ಸುಮಾತ್ರಾ ಮತ್ತು ದಕ್ಷಿಣ ಹಾಗೂ ಪೂರ್ವ ಏಷ್ಯಾದ ಇತರ ಪ್ರದೇಶಗಳು ಸೇರಿದಂತೆ ಅರಬ್ಬಿ ಸಮುದ್ರದಿಂದ ಪಶ್ಚಿಮ ಪೆಸಿಫಿಕ್‌ ವರೆಗೆ ವಿಸ್ತರಿಸಿರುವ ವಿಶಾಲ ಪ್ರದೇಶದಲ್ಲಿ ಮೋಡಗಳು ಕಣ್ಮರೆಯಾಗುತ್ತಿವೆ.

ಮೋಡ ಕವಿದ ವಾತಾವರಣ ದೊಡ್ಡ ಪ್ರಮಾಣದಲ್ಲಿ ಕುಸಿದಿರುವುದು ಪ್ರಬಲ ಎಲ್‌ನಿನೊ ಪ್ರಭಾವಕ್ಕೆ ಸಂಬಂಧಿಸಿದ ವಿಶಾಲ ವಾತಾವರಣದ ಪರಿಸ್ಥಿತಿಗಳೊಂದಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.

ಬದಲಾಗುತ್ತಿರುವ ಗಾಳಿಯ ಹರಿವುಗಳು ಪ್ರದೇಶದಾದ್ಯಂತ ಮುಂಗಾರು ಚಟುವಟಿಕೆಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿವೆ. ಹಾಗೆಂದು ಬಾಹ್ಯಾಕಾಶದಿಂದ ಗೋಚರಿಸುವ ಸ್ಪಷ್ಟ ಆಕಾಶವು ಭಾರತದಿಂದ ಮುಂಗಾರು ಅಧಿಕೃತವಾಗಿ ಹಿಂದೆ ಸರಿದಿದೆ ಎಂದು ಅರ್ಥವಲ್ಲ. ವಾಯುವ್ಯ ಭಾರತದ ಕೆಲವು ಭಾಗಗಳಿಂದ ಮುಂಗಾರು ಹಿಮ್ಮೆಟ್ಟುವಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 15ರ ಬಳಿಕವೇ ಪ್ರಾರಂಭವಾಗುವ ನಿರೀಕ್ಷೆಯಿದೆ.

ಹವಾಮಾನ ವರದಿಗಳು ಹೇಳುವಂತೆ, ಸೆಪ್ಟೆಂಬರ್ ದ್ವಿತೀಯಾರ್ಧದ ಬಳಿಕ ಮುಂಗಾರು ಹಿಂದೆ ಸರಿಯುವ ವಾತಾವರಣದ ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗಬಹುದು. ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್ಕಾಸ್ಟ್ಸ್‌ (ECMWF) ಮತ್ತು ಗ್ಲೋಬಲ್ ಫೋರ್ಕಾಸ್ಟ್ಸ್‌ ಸಿಸ್ಟಂನ (GFS) ಮುನ್ಸೂಚನೆಗಳ ಪ್ರಕಾರ, ವಾಯುವ್ಯ ಭಾರತದ ಮೇಲೆ ಮುಂಗಾರು ಹಿಂದೆ ಸರಿಯುವಂತಹ ಆಂಟಿಸೈಕ್ಲೋನ್ (ವಿರೋಧಿ ಚಂಡಮಾರುತ) ಕ್ರಮೇಣ ಬಲಗೊಳ್ಳುವ ಸಾಧ್ಯತೆಯಿದೆ.

ಆಂಟಿಸೈಕ್ಲೋನ್ ಹರಿವು ಸೆಪ್ಟೆಂಬರ್ 21ರ ಸುಮಾರಿಗೆ ಹೆಚ್ಚು ಬೆಳೆಯುವ ನಿರೀಕ್ಷೆಯಿದ್ದು, ಭಾರತ ಮತ್ತು ಸುತ್ತಮುತ್ತಲ ಪ್ರದೇಶದಿಂದ ನೈಋತ್ಯ ಮುಂಗಾರುವನ್ನು ಹೆಚ್ಚು ಸಂಘಟಿತವಾಗಿ ಹಿಂದೆ ಸರಿಸಲು ವೇದಿಕೆ ಸಿದ್ಧಪಡಿಸಲಿದೆ. ಈ ಪರಿವರ್ತನೆಯು ಭಾರತದ ವಾರ್ಷಿಕ ಹವಾಮಾನ ಚಕ್ರದಲ್ಲಿ ಒಂದು ಪ್ರಮುಖ ಹಂತವನ್ನು ಗುರುತಿಸುತ್ತದೆ.

ವಾಯುವ್ಯ ಭಾರತದಿಂದ ಮುಂಗಾರು ಹಿಂದೆ ಸರಿಯಲು ಪ್ರಾರಂಭಿಸಿದಾಗ ಮಳೆ ಚಟುವಟಿಕೆಯು ಸಾಮಾನ್ಯವಾಗಿ ಪ್ರದೇಶದ ವಿಸ್ತೃತ ಭಾಗಗಳಲ್ಲಿ ದುರ್ಬಲಗೊಳ್ಳುತ್ತದೆ. ಸ್ಪಷ್ಟ ಆಕಾಶ, ಕಡಿಮೆ ಆರ್ದ್ರತೆ ಮತ್ತು ಹೆಚ್ಚು ಶುಷ್ಕ ಪರಿಸ್ಥಿತಿಗಳು ಕಾಣಿಸಿಕೊಳ್ಳುತ್ತವೆ. ಹಾಗಿದ್ದರೂ, ಇದೀಗ ಬಹುತೇಕ ಮೋಡರಹಿತ ಭಾರತದ ಉಪಗ್ರಹ ನೋಟವು ಮುಂಗಾರು ಚಟುವಟಿಕೆ ದುರ್ಬಲಗೊಳ್ಳುತ್ತಿರುವ ಸೂಚನೆಯಾಗಿದೆ. ಅದರ ಅಧಿಕೃತ ಅಂತ್ಯವಲ್ಲ. ಹೀಗೆ ಅಧಿಕೃತವಾಗಿ ಹಿಂದೆ ಸರಿಯುವುದು ಮುಂಬರುವ ದಿನಗಳಲ್ಲಿ ವಾತಾವರಣದ ಪರಿಸ್ಥಿತಿಗಳ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor