ವಿಶ್ವ ಭೂಪಟ ತಿದ್ದುಪಡಿಗೆ ವಿಶ್ವಸಂಸ್ಥೆ ನಿರ್ಣಯ: ಭಾರತ ಬೆಂಬಲ ವ್ಯಕ್ತಪಡಿಸಿದ್ದೇಕೆ?
ನಿರ್ಣಯವನ್ನು ವಿರೋಧಿಸಿದ ಅಮೆರಿಕ; ಏನಿದು ‘ಭೂಪಟ ತಿದ್ದುಪಡಿ’ ನಿರ್ಣಯ?
Photo Credit : AP
ಸೆಪ್ಟೆಂಬರ್ 4ರಂದು ವಿಶ್ವಸಂಸ್ಥೆಯ ಮಹಾಸಭೆಯು (UNGA) "ಭೂಪಟವನ್ನು ಸರಿಪಡಿಸಿ: ಜಾಗತಿಕ ಕಾರ್ಟೋಗ್ರಾಫಿಕ್ ಪ್ರಾತಿನಿಧ್ಯದ ಮರುಸಂತುಲನ ಮತ್ತು ವಿಶ್ವದ ಪ್ರದೇಶಗಳ, ವಿಶೇಷವಾಗಿ ಆಫ್ರಿಕಾದ ಸಮಾನ ಪ್ರಾತಿನಿಧ್ಯವನ್ನು ಉತ್ತೇಜಿಸುವುದು" (Correct the Map: Rebalancing Global Cartographic Representation and Promoting Equitable Representation of the World’s Regions, Particularly Africa) ಎಂಬ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಿತು. ಆಫ್ರಿಕನ್ ಯೂನಿಯನ್ ಮುಂಚೂಣಿಯಲ್ಲಿದ್ದು, ಟೋಗೋ ದೇಶ ಪ್ರಾಯೋಜಿಸಿದ್ದ ಈ ಮಹತ್ವದ ನಿರ್ಣಯಕ್ಕೆ 164 ದೇಶಗಳು ಬೆಂಬಲ ವ್ಯಕ್ತಪಡಿಸಿದವು. ಈ ಮೂಲಕ ಶತಮಾನಗಳಷ್ಟು ಹಳೆಯದಾದ 'ಮರ್ಕೇಟರ್ ಪ್ರೊಜೆಕ್ಷನ್' (Mercator projection) ಬದಲು 2018ರ 'ಈಕ್ವಲ್ ಅರ್ಥ್' (Equal Earth) ಭೂಪಟದ ಬಳಕೆಯನ್ನು ಉತ್ತೇಜಿಸಲು ಜಾಗತಿಕ ಸಮುದಾಯ ನಿರ್ಧರಿಸಿದೆ.
ಈ ನಿರ್ಣಯವನ್ನು ಅಮೆರಿಕ ಒಂದೇ ವಿರೋಧಿಸಿದ್ದು, ಎಸ್ಟೋನಿಯಾ, ಜಾರ್ಜಿಯಾ, ಲಿಥುವೇನಿಯಾ, ಮೊಲ್ಡೊವಾ, ಸರ್ಬಿಯಾ ಮತ್ತು ಉಕ್ರೇನ್ ದೇಶಗಳು ಮತದಾನದಿಂದ ದೂರ ಉಳಿದವು.
►ಏನಿದು ‘ಭೂಪಟ ತಿದ್ದುಪಡಿ’ ನಿರ್ಣಯ?
ಕಾನೂನುಬದ್ಧವಾಗಿ ಇದು ಕಡ್ಡಾಯವಲ್ಲದಿದ್ದರೂ, ಯೂರೋಪ್ ಕೇಂದ್ರಿತ ಭೂಪಟ ರಚನೆಯ ಮಾನಸಿಕ ಹಾಗೂ ಸಾಂಸ್ಥಿಕ ಶೇಷಗಳನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಬದ್ಧತೆಯನ್ನು ತೋರಿಸುತ್ತದೆ. ಅಧಿಕಾರ ಮತ್ತು ಭೂಗೋಳವನ್ನು ಪ್ರಪಂಚವು ನೋಡುವ ರೀತಿಯನ್ನು ಸವಾಲಿಗೆ ಒಡ್ಡುವ ಮೂಲಕ, ಜಾಗತಿಕ ಚಿಂತನೆಯನ್ನು ವಸಾಹತುಶಾಹಿ ಪ್ರಭಾವದಿಂದ ಮುಕ್ತಗೊಳಿಸುವ ಪ್ರಕ್ರಿಯೆಗೆ ವಿಶ್ವಸಂಸ್ಥೆ ಚಾಲನೆ ನೀಡಿದೆ.
►‘ಮರ್ಕೇಟರ್ ಪ್ರೊಜೆಕ್ಷನ್’ನಲ್ಲಿರುವ ದೋಷಗಳೇನು?
ಕಳೆದ 450ಕ್ಕೂ ಹೆಚ್ಚು ವರ್ಷಗಳಿಂದ ಫ್ಲೆಮಿಶ್ ಕಾರ್ಟೋಗ್ರಾಫರ್ ಗೆರಾರ್ಡಸ್ ಮರ್ಕೇಟರ್ 1569ರಲ್ಲಿ ರೂಪಿಸಿದ ಭೂಪಟವೇ ಜಗತ್ತಿನಲ್ಲಿ ಪ್ರಮುಖವಾಗಿ ಬಳಕೆಯಾಗುತ್ತಿದೆ. ಮೂಲತಃ ಸಮುದ್ರಯಾನದ ದಿಕ್ಸೂಚಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಇದು ಕೋನಗಳು ಮತ್ತು ದಿಕ್ಕುಗಳನ್ನು ಸರಿಯಾಗಿ ತೋರಿಸುತ್ತದೆಯಾದರೂ, ಧ್ರುವ ಪ್ರದೇಶಗಳಿಗೆ ಹತ್ತಿರವಾದಂತೆ ಭೂಭಾಗಗಳ ನೈಜ ಗಾತ್ರವನ್ನು ತೀವ್ರವಾಗಿ ವಿರೂಪಗೊಳಿಸುತ್ತದೆ. ಶೋಧನೆಗಳ ಯುಗದಲ್ಲಿ ಯೂರೋಪ್ ಹಡಗುಯಾನಿಗಳಿಗೆ ಇದು ಉಪಯುಕ್ತವಾಗಿದ್ದರೂ, ಶಿಕ್ಷಣ ಕ್ಷೇತ್ರದಲ್ಲಿ ಇದರ ಸುದೀರ್ಘ ಬಳಕೆಯು ತಪ್ಪಾದ ಜಾಗತಿಕ ದೃಷ್ಟಿಕೋನವನ್ನು ಸೃಷ್ಟಿಸಿತ್ತು.
ಈ ಭೂಪಟ ವಿನ್ಯಾಸದ ಅತ್ಯಂತ ದೊಡ್ಡ ಪರಿಣಾಮವೆಂದರೆ ಜಾಗತಿಕ ದಕ್ಷಿಣದ ದೇಶಗಳ, ಅದರಲ್ಲೂ ಮುಖ್ಯವಾಗಿ ಆಫ್ರಿಕಾದ ಗಾತ್ರವನ್ನು ತೀವ್ರವಾಗಿ ಸಣ್ಣದಾಗಿ ತೋರಿಸಿರುವುದು. ಸಾಮಾನ್ಯ ಮರ್ಕೇಟರ್ ಭೂಪಟದಲ್ಲಿ ಆಫ್ರಿಕಾ ಮತ್ತು ಗ್ರೀನ್ಲ್ಯಾಂಡ್ ಒಂದೇ ಗಾತ್ರದಲ್ಲಿ ಕಾಣಿಸುತ್ತವೆ. ವಾಸ್ತವದಲ್ಲಿ ಆಫ್ರಿಕಾ ಖಂಡವು ಗ್ರೀನ್ಲ್ಯಾಂಡ್ಗಿಂತ 15 ಪಟ್ಟು ದೊಡ್ಡದಾಗಿದೆ.
ಸಂಪೂರ್ಣ ಆಫ್ರಿಕಾ ಖಂಡವು ಸುಮಾರು 3.03 ಕೋಟಿ ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಅಮೆರಿಕ, ಚೀನಾ, ಭಾರತ, ಜಪಾನ್ ಮತ್ತು ಯೂರೋಪ್ನ ಬಹುತೇಕ ದೇಶಗಳನ್ನು ಒಟ್ಟಾಗಿ ತನ್ನೊಳಗೆ ಅಡಗಿಸಿಕೊಳ್ಳುವಷ್ಟು ವಿಶಾಲವಾದ ಭೂಭಾಗವಿದು. ಆಫ್ರಿಕಾವನ್ನು ಸಣ್ಣದಾಗಿ ಮತ್ತು ಉತ್ತರದ ಶ್ರೀಮಂತ ದೇಶಗಳನ್ನು ದೊಡ್ಡದಾಗಿ ತೋರಿಸುವ ಮೂಲಕ, ಮರ್ಕೇಟರ್ ಭೂಪಟವು ವಸಾಹತುಶಾಹಿ ಕಾಲದ ಮೇಲು-ಕೀಳು ಭಾವನೆಯನ್ನು ಪೋಷಿಸಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ನೈಜ ಭೌಗೋಳಿಕ ವಿಸ್ತಾರ ಮತ್ತು ಭೌಗೋಳಿಕ ರಾಜಕೀಯ ಪ್ರಾಮುಖ್ಯತೆಯನ್ನು ದೃಶ್ಯರೂಪದಲ್ಲಿ ಕುಗ್ಗಿಸಿದೆ.
►ಅಧಿಕಾರದ ಅಸ್ತ್ರವಾಗಿ ಕಾರ್ಟೋಗ್ರಫಿ
ಭೂಪಟಗಳು ಕೇವಲ ಭೌಗೋಳಿಕ ಸತ್ಯವನ್ನು ಬಿಂಬಿಸುವ ಚಿತ್ರಗಳಲ್ಲ, ಚಾರಿತ್ರಿಕವಾಗಿ ಅವು ರಾಜಕೀಯ ಸಿದ್ಧಾಂತಗಳಾಗಿಯೂ ಕೆಲಸ ಮಾಡಿವೆ. 'ಆಫ್ರಿಕಾ ನೋ ಫಿಲ್ಟರ್' ಮತ್ತು 'ಸ್ಪೀಕ್ ಅಪ್ ಆಫ್ರಿಕಾ'ದಂತಹ ನಾಗರಿಕ ಸಮಾಜ ಸಂಸ್ಥೆಗಳು ಆರಂಭಿಸಿದ ‘Correct the Map’ (ಭೂಪಟ ತಿದ್ದುಪಡಿ) ಅಭಿಯಾನವು, ಭೂಪಟದಲ್ಲಿನ ಲೋಪಗಳು ಮಾನಸಿಕವಾಗಿ ತಾರತಮ್ಯದ ಭಾವನೆಯನ್ನು ಬೆಳೆಸುತ್ತವೆ ಎಂದು ಸುದೀರ್ಘ ಕಾಲದಿಂದ ವಾದಿಸುತ್ತಾ ಬಂದಿವೆ. ಯೂರೋಪ್ ಮತ್ತು ಉತ್ತರ ಅಮೆರಿಕಗಳು ಜಗತ್ತಿನ ಉಳಿದ ಭಾಗಗಳಿಗಿಂತ ದೊಡ್ಡದಾಗಿ ಕಾಣುವ ಭೂಪಟಗಳನ್ನು ನೋಡುತ್ತ ಬೆಳೆಯುವ ಶಾಲಾ ಮಕ್ಕಳು, ಆ ದೇಶಗಳೇ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯವಾಗಿ ಶ್ರೇಷ್ಠ ಎಂಬ ತಪ್ಪು ಕಲ್ಪನೆಗೆ ಒಳಗಾಗುತ್ತಾರೆ.
ಈ ಹಳೆಯ ಪದ್ಧತಿಯನ್ನು ಪ್ರಶ್ನಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಮಹಾಸಭೆ ಅಂಗೀಕರಿಸುವ ಮೂಲಕ, ಭೌಗೋಳಿಕ ಸಮಾನತೆಯು ಮಾನವ ಗೌರವ ಮತ್ತು ರಾಜತಾಂತ್ರಿಕ ಸಮಾನತೆಯೊಂದಿಗೆ ಬೆಸೆದುಕೊಂಡಿದೆ ಎಂಬುದನ್ನು ಒಪ್ಪಿಕೊಂಡಿದೆ. ಫ್ರಾನ್ಸ್, ಬ್ರಿಟನ್ನಂತಹ ಸಾಂಪ್ರದಾಯಿಕ ಪಾಶ್ಚಿಮಾತ್ಯ ದೇಶಗಳು ಹಾಗೂ ಭಾರತದಂತಹ ಉದಯೋನ್ಮುಖ ರಾಷ್ಟ್ರಗಳು ಈ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದು, ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸುವ ಜಾಗತಿಕ ಇಚ್ಛಾಶಕ್ತಿಯನ್ನು ತೋರಿಸುತ್ತದೆ.
►'ಈಕ್ವಲ್ ಅರ್ಥ್' ಭೂಪಟ ಹೇಗೆ ಪರಿಹಾರ ಒದಗಿಸುತ್ತದೆ?
ಈ ಕಾರ್ಟೋಗ್ರಾಫಿಕ್ ಕ್ರಾಂತಿಗೆ 'ಈಕ್ವಲ್ ಅರ್ಥ್' ಭೂಪಟದ ಮಾದರಿ ಅಡಿಪಾಯವಾಗಿದೆ. 2018ರಲ್ಲಿ ಅಂತರರಾಷ್ಟ್ರೀಯ ಕಾರ್ಟೋಗ್ರಾಫರ್ಗಳ ತಂಡವೊಂದು ಇದನ್ನು ಅಭಿವೃದ್ಧಿಪಡಿಸಿತು. 'ರಾಬಿನ್ಸನ್ ಪ್ರೊಜೆಕ್ಷನ್' ಮಾದರಿಯಿಂದ ಪ್ರೇರಣೆ ಪಡೆದಿರುವ ಈ ಭೂಪಟವು, ಖಂಡಗಳ ನೈಜ ಪ್ರಮಾಣ ಮತ್ತು ವಿಸ್ತೀರ್ಣವನ್ನು ನಿಖರವಾಗಿ ತೋರಿಸುತ್ತದೆ.
ಈ ಭೂಪಟದ ಬಳಕೆ ಕೇವಲ ಸೈದ್ಧಾಂತಿಕ ಗೆಲುವಾಗಿ ಉಳಿದಿಲ್ಲ. ಆಫ್ರಿಕನ್ ಯೂನಿಯನ್ ಈಗಾಗಲೇ ತನ್ನ ಅಧಿಕೃತ ಚೌಕಟ್ಟಿನಲ್ಲಿ ಈಕ್ವಲ್ ಅರ್ಥ್ ಮಾದರಿಯನ್ನು ಅಳವಡಿಸಿಕೊಂಡಿದ್ದು, ಸದಸ್ಯ ದೇಶಗಳ ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಸಿದ್ಧತೆ ನಡೆಸಿದೆ. ಈಗ ವಿಶ್ವಸಂಸ್ಥೆಯ ಜಾಗತಿಕ ಬೆಂಬಲ ಸಿಕ್ಕಿರುವುದರಿಂದ ಅಂತರರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳು, ಡಿಜಿಟಲ್ ಮ್ಯಾಪಿಂಗ್ ಸೇವೆಗಳು, ಮಾಧ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳು ಮರ್ಕೇಟರ್ ಮಾದರಿಯನ್ನು ಕೈಬಿಟ್ಟು ಹೊಸ ಭೂಪಟವನ್ನು ಅಳವಡಿಸಿಕೊಳ್ಳಲಿವೆ.
►ವಿಶ್ವಸಂಸ್ಥೆಯ ಈ ನಿರ್ಣಯವನ್ನು ಭಾರತ ಬೆಂಬಲಿಸಿದ್ದು ಯಾಕೆ?
ತಂತ್ರಜ್ಞಾನದ ತಟಸ್ಥತೆಯನ್ನು ಎತ್ತಿಹಿಡಿಯುವ ಜೊತೆಗೆ, ಜಾಗತಿಕ ಭೂಭಾಗಗಳ ಹೆಚ್ಚು ನಿಖರ ಮತ್ತು ಸಮಾನ ಪ್ರಾತಿನಿಧ್ಯವನ್ನು ಬೆಂಬಲಿಸುವ ಉದ್ದೇಶದಿಂದ ಭಾರತವು ವಿಶ್ವಸಂಸ್ಥೆಯ ‘ಭೂಪಟ ತಿದ್ದುಪಡಿ’ ನಿರ್ಣಯಕ್ಕೆ ಪರವಾಗಿ ಮತ ಚಲಾಯಿಸಿತು. 16ನೇ ಶತಮಾನದ ಸಾಂಪ್ರದಾಯಿಕ ಮರ್ಕೇಟರ್ ಭೂಪಟವು ಧ್ರುವ ಪ್ರದೇಶಗಳ ಬಳಿಯ ಭೂಭಾಗಗಳನ್ನು ದೊಡ್ಡದಾಗಿ ಮತ್ತು ಸಮಭಾಜಕ ವೃತ್ತದ ಬಳಿಯ ಭೂಭಾಗಗಳನ್ನು ಸಣ್ಣದಾಗಿ ತೋರಿಸುತ್ತದೆ. ಇದರಿಂದಾಗಿ ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದ ನೈಜ ವಿಸ್ತೀರ್ಣಕ್ಕೆ ಅನ್ಯಾಯವಾಗುತ್ತಿದೆ. 'ಈಕ್ವಲ್ ಅರ್ಥ್' ಮಾದರಿಯನ್ನೇ ಕಾನೂನುಬದ್ಧವಾಗಿ ಕಡ್ಡಾಯಗೊಳಿಸುವುದಕ್ಕಿಂತ ಹೆಚ್ಚಾಗಿ, ಸಾಮಾನ್ಯ ಸಮಾನ ವಿಸ್ತೀರ್ಣ ಭೂಪಟ ತತ್ವಗಳನ್ನು ಉತ್ತೇಜಿಸಲು ಮಾತ್ರ ತನ್ನ ಬೆಂಬಲ ಸೀಮಿತವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.
ಈ ನಿರ್ಣಯದ ಪರ ಮತ ಚಲಾಯಿಸಿರುವುದು ಭಾರತದ ದೀರ್ಘಕಾಲದ ರಾಜತಾಂತ್ರಿಕ ನಿಲುವಿಗೆ ಪೂರಕವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಾಗುವ ಐತಿಹಾಸಿಕ ಭೌಗೋಳಿಕ ತಾರತಮ್ಯವನ್ನು ಸರಿಪಡಿಸುವುದು ಮತ್ತು ಸಮಾನ ಪ್ರಾತಿನಿಧ್ಯವನ್ನು ಬೆಂಬಲಿಸುವುದು ಭಾರತದ ಮುಖ್ಯ ಉದ್ದೇಶ. ಭಾರತದ ನೈಜ ಗಾತ್ರವನ್ನು ಮರ್ಕೇಟರ್ ಭೂಪಟವು ವಿರೂಪಗೊಳಿಸಿರುವುದು ಈ ಹಳೆಯ ವಿನ್ಯಾಸದ ಪ್ರಮುಖ ಲೋಪವಾಗಿದೆ.
1569ರಲ್ಲಿ ಸಮುದ್ರಯಾನದ ದಿಕ್ಸೂಚಿಗಾಗಿ ಈ ಭೂಪಟವನ್ನು ತಯಾರಿಸಲಾಗಿತ್ತು. ಇದು ನೇರ ದಿಕ್ಸೂಚಿಯನ್ನು ಸರಿಯಾಗಿ ತೋರಿಸುತ್ತದೆಯಾದರೂ, ನೈಜ ವಿಸ್ತೀರ್ಣವನ್ನು ತೀವ್ರವಾಗಿ ವಿರೂಪಗೊಳಿಸುತ್ತದೆ. ಭಾರತವು ಸಮಭಾಜಕ ವೃತ್ತಕ್ಕೆ ಹತ್ತಿರದಲ್ಲಿರುವುದರಿಂದ, ಈ ಭೂಪಟದಲ್ಲಿ ಭಾರತದ ಗಾತ್ರದಲ್ಲಿ ಹೆಚ್ಚಿನ ಬದಲಾವಣೆಯಾಗುವುದಿಲ್ಲ ಮತ್ತು ನೈಜ ಗಾತ್ರಕ್ಕೆ ಹತ್ತಿರವಾಗಿ ಕಾಣಿಸುತ್ತದೆ. ಆದರೆ ಧ್ರುವ ಪ್ರದೇಶಗಳಿಗೆ ಹತ್ತಿರವಿರುವ ಗ್ರೀನ್ಲ್ಯಾಂಡ್, ರಷ್ಯಾ ಮತ್ತು ಉತ್ತರ ಅಮೆರಿಕದಂತಹ ದೇಶಗಳು ಮತ್ತು ಖಂಡಗಳು ಅತ್ಯಂತ ದೊಡ್ಡದಾಗಿ ಕಾಣಿಸುತ್ತವೆ. ಇದರಿಂದಾಗಿ ಭಾರತವು ಯೂರೋಪ್ ಅಥವಾ ರಷ್ಯಾಕ್ಕಿಂತ ತೀರಾ ಸಣ್ಣದಾಗಿ ಕಾಣಿಸುತ್ತದೆ. ಪರಿಣಾಮವಾಗಿ ಭಾರತದ ನೈಜ ಭೌಗೋಳಿಕ ವಿಸ್ತಾರ ಮತ್ತು ಜಾಗತಿಕ ಪ್ರಮಾಣವನ್ನು ಕಡಿಮೆ ಅಂದಾಜಿಸುವಂತೆ ಮಾಡುತ್ತದೆ.
►ಪ್ರಾಯೋಗಿಕವಾಗಿ ಈ ನಿರ್ಣಯ ಏನನ್ನು ಬದಲಾಯಿಸಬಹುದು?
'ಭೂಪಟ ತಿದ್ದುಪಡಿ' ನಿರ್ಣಯಕ್ಕೆ ಅಂತರರಾಷ್ಟ್ರೀಯ ಕಾನೂನಿನಂತೆ ಕಡ್ಡಾಯ ಅನುಷ್ಠಾನದ ಅಧಿಕಾರವಿಲ್ಲದಿದ್ದರೂ, ಇದರ ಸಾಂಕೇತಿಕ ಮೌಲ್ಯವು ಸಂಸ್ಥೆಗಳ ನಡವಳಿಕೆಯನ್ನು ಬದಲಾಯಿಸಬಲ್ಲದು. ಜಗತ್ತು ಹೇಗಿರಬೇಕು ಎಂಬುದನ್ನು ವಿಶ್ವಸಂಸ್ಥೆ ಮರುವ್ಯಾಖ್ಯಾನಿಸಿದಾಗ, ಅದು ಸಂಪನ್ಮೂಲಗಳು, ಪ್ರಭಾವ ಮತ್ತು ಪ್ರಾತಿನಿಧ್ಯದ ಹಂಚಿಕೆಯನ್ನು ಮರುಪರಿಶೀಲಿಸುವಂತೆ ಪ್ರೇರೇಪಿಸುತ್ತದೆ. ವಿಶ್ವದ ಪ್ರದೇಶಗಳನ್ನು ಅವುಗಳ ನೈಜ ಪ್ರಮಾಣದಲ್ಲಿ ತೋರಿಸುವುದು ಜಾಗತಿಕ ದಕ್ಷಿಣದ ದೇಶಗಳಲ್ಲಿರುವ ಜನಸಂಖ್ಯೆ, ಪರಿಸರ ವೈವಿಧ್ಯತೆ ಮತ್ತು ಆರ್ಥಿಕ ಸಾಮರ್ಥ್ಯದ ನೈಜ ವಿಸ್ತಾರವನ್ನು ನೆನಪಿಸುತ್ತದೆ.
ಅಂತಿಮವಾಗಿ, ಸೆಪ್ಟೆಂಬರ್ 4ರಂದು ಅಂಗೀಕಾರಗೊಂಡ ಈ ನಿರ್ಣಯವು ಯೂರೋಪ್ ಕೇಂದ್ರಿತ ಚೌಕಟ್ಟನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. 'ಭೂಪಟ ತಿದ್ದುಪಡಿ' ಮಾಡಲು ನಿರ್ಧರಿಸುವ ಮೂಲಕ, ಸಮಾನ ಪ್ರಾತಿನಿಧ್ಯ ಎಂಬುದು ನಾವು ಪರಸ್ಪರರನ್ನು ಹೇಗೆ ನೋಡುತ್ತೇವೆ ಎಂಬುದರಿಂದಲೇ ಪ್ರಾರಂಭವಾಗುತ್ತದೆ ಎಂಬುದನ್ನು ಅಂತರರಾಷ್ಟ್ರೀಯ ಸಮುದಾಯ ಪ್ರತಿಪಾದಿಸಿದೆ. 'ಈಕ್ವಲ್ ಅರ್ಥ್' ಭೂಪಟವು ಪ್ರಪಂಚದಾದ್ಯಂತದ ತರಗತಿಗಳು ಮತ್ತು ಸಭಾಂಗಣಗಳನ್ನು ತಲುಪುತ್ತಿದ್ದಂತೆ, ಅದು ಮುಂದಿನ ಪೀಳಿಗೆಗೆ ಒಂದು ಮೂಲಭೂತ ಸತ್ಯವನ್ನು ಬೋಧಿಸಲಿದೆ. ಅದೇನೆಂದರೆ ಹಳೆಯ, ದೋಷಪೂರಿತ ದೃಷ್ಟಿಕೋನಕ್ಕೆ ಹೊಂದಿಕೊಳ್ಳಲು ಯಾವುದೇ ಪ್ರದೇಶ ಅಥವಾ ಜನರನ್ನು ಕೃತಕವಾಗಿ ಕುಗ್ಗಿಸಬಾರದು.
( Firstpost ನಲ್ಲಿ ಪ್ರಕಟವಾಗಿರುವ ಈ ಲೇಖನದ ಲೇಖಕ ಪ್ರಭು ದಯಾಲ್ ಅವರು ನಿವೃತ್ತ ಭಾರತೀಯ ರಾಜತಾಂತ್ರಿಕರಾಗಿದ್ದು, ಹಿಂದೆ ಕುವೈತ್ ಮತ್ತು ಮೊರಾಕ್ಕೋದಲ್ಲಿ ರಾಯಭಾರಿಯಾಗಿ ಹಾಗೂ ನ್ಯೂಯಾರ್ಕ್ನಲ್ಲಿ ಕಾನ್ಸುಲ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಲೇಖನದಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ವಿಚಾರಗಳಾಗಿವೆ.)
ಕೃಪೆ: firstpost.com