×
Ad

ಮರಗಳಲ್ಲಿ ವಾಸಿಸುವ ಏಕೈಕ ಏಡಿ ಪ್ರಭೇದ ಆಗುಂಬೆಯಲ್ಲಿ ಪತ್ತೆ

‘ಕನಿ ಮರಂಜಂಡು’ ಏಡಿಯ ಸಮಗ್ರ ಅಧ್ಯಯನದಲ್ಲಿ ಸಂಶೋಧಕರ ತಂಡ

Update: 2026-07-13 09:42 IST

ಉಡುಪಿ : ಆಗುಂಬೆಯ ಅರಣ್ಯ ದಲ್ಲಿ ಮರಗಳಲ್ಲಿ ವಾಸಿಸುವ ಅಪರೂಪದ ಏಡಿ ಪ್ರಭೇದವೊಂದು ಪತ್ತೆಯಾಗಿದೆ. ಭಾರತದಲ್ಲಿ ಸಂಪೂರ್ಣವಾಗಿ ಮರಗಳಲ್ಲೇ ವಾಸ ಮಾಡುವ ಏಕೈಕ ಪ್ರಭೇದ ಎನಿಸಿರುವ ಈ ಏಡಿಯು ಪಶ್ಚಿಮ ಘಟ್ಟದ ಜೀವವೈವಿಧ್ಯ ಅಧ್ಯಯನದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಭಾರತದಲ್ಲಿ ಸಂಪೂರ್ಣ ಮರಗಳಲ್ಲೇ ವಾಸಿಸುವ ಏಕೈಕ ವಿಶಿಷ್ಟ ಸಿಹಿನೀರಿನ ಏಡಿ ಪ್ರಭೇದ ‘ಕನಿ ಮರನಂಡು’ ಇದೇ ಮೊದಲ ಬಾರಿಗೆ ಆಗುಂಬೆಯಲ್ಲಿ ಪತ್ತೆಯಾಗುವ ಮೂಲಕ ಕರ್ನಾಟಕದ ಪರಿಸರ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಈವರೆಗೆ ಈ ಅಪರೂಪದ ಏಡಿ ಕೇವಲ ಕೇರಳ ರಾಜ್ಯದ ಅಗಸ್ತ್ಯ ಮಲೆ ಜೈವಿಕ ವಲಯದಲ್ಲಿ ಮಾತ್ರ ದಾಖಲಾಗಿತ್ತು. ಇದೀಗ ಅಲ್ಲಿಂದ ಉತ್ತರದ ಸುಮಾರು 566 ಕಿಲೋ ಮೀಟರ್ ದೂರದ ಆಗುಂಬೆಯಲ್ಲಿ ಈ ಪ್ರಭೇದ ಪತ್ತೆಯಾಗಿರುವುದು ಇದರ ವ್ಯಾಪ್ತಿ ಇನ್ನಷ್ಟು ವಿಸ್ತಾರಗೊಂಡಿದೆ.

ವನ್ಯಜೀವಿ ಸಂಶೋಧಕ ಜೋಯೆಲ್ ಕೊರೆಯ, ಪವನ್ ಚಿಕ್ಕ ನಾರಾಯಣಸ್ವಾಮಿ, ವಿಜಯ್ ಕುಮಾರ್ ಜಂಟಿಯಾಗಿ ಈ ಅಧ್ಯಯನ ನಡೆಸಿದ್ದು, ಇವರ ಸಂಶೋಧನೆಗೆ ಕೇರಳ ವಿವಿಯ ಪ್ರೊಫೆಸರ್ ಎ.ಬಿಜು ಕುಮಾರ್, ಸಿಂಗಾಪುರ ವನ್ಯಜೀವಿ ಸಂಶೋಧಕ ಪ್ರೊ.ಪೀಟರ್ ಕೆ.ಎಲ್. ಎನ್.ಜಿ. ತಾಂತ್ರಿಕ ಮಾರ್ಗ ದರ್ಶನ ನೀಡಿದ್ದಾರೆ.

ಸಂಪೂರ್ಣ ಮರ ವಾಸಿ :

ಕನಿ ಮರಂಜಂಡು ಎಂಬುದು ಗೆಕಾರ್ಸಿನುಸಿಡೆ ಎಂಬ ಕುಟುಂಬಕ್ಕೆ ಸೇರಿದ ಸಿಹಿನೀರಿನ ಏಡಿ ಪ್ರಭೇದವಾಗಿದೆ. ಸಾಮಾನ್ಯ ಏಡಿಗಳು ಹಳ್ಳ, ಗದ್ದೆ ಅಥವಾ ನದಿ ಬದಿಯ ಮಣ್ಣಿನಲ್ಲಿ ಬಿಲ ತೋಡಿ ವಾಸಿಸಿದರೆ, ಈ ‘ಕನಿ ಮರಜಂಡು’ ಮಾತ್ರ ಸಂಪೂರ್ಣ ಮರಗಳ ಮೇಲೆಯೇ ಬದುಕುತ್ತದೆ.

ಈ ಪ್ರಭೇದವನ್ನು ಮೊದಲ ಬಾರಿಗೆ 2017ರಲ್ಲಿ ಕೇರಳ ರಾಜ್ಯದ ದಕ್ಷಿಣ ಪಶ್ಚಿಮ ಘಟ್ಟದಲ್ಲಿರುವ ಅಗಸ್ತ್ಯ ಮಲೆ ಎಂಬ ಜೈವಿಕ ಉದ್ಯಾನವನದಲ್ಲಿ ಪತ್ತೆ ಮಾಡಲಾಗಿತ್ತು. ಈ ಏಡಿಯು ಬೃಹತ್ ಮರಗಳ ಕಾಂಡಗಳಲ್ಲಿ ನೀರು ಸಂಗ್ರಹವಾಗುವ ನೈಸರ್ಗಿಕ ಕುಳಿಗಳಲ್ಲಿ ವಾಸಿಸುತ್ತದೆ.

ನೆಲಮಟ್ಟದಿಂದ ಸುಮಾರು 10 ಮೀಟರ್ ಎತ್ತರದವರೆಗೂ ಮರಗಳ ಮೇಲೆ ಕಂಡುಬರುತ್ತದೆ. ಇದರ ಮರಿಗಳು ಹೆಚ್ಚಾಗಿ ಮರಗಳ ಮೇಲ್ಭಾಗದ ಎಲೆಗಳ ದಟ್ಟ ಭಾಗಗಳಲ್ಲಿ ಆಶ್ರಯ ಪಡೆಯುತ್ತವೆ. ಈ ಪ್ರಭೇದವು ನಿತ್ಯ ಹರಿದ್ವರ್ಣ ಹಾಗೂ ಅರೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ 160 ರಿಂದ 1,100 ಮೀಟರ್ ಎತ್ತರದ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಎಲೆಗಳು, ಬೀಜಗಳು, ಹುಳುಗಳು, ಕೀಟಗಳು ಮತ್ತು ಸ್ಲಗ್‌ಗಳು ಇದರ ಆಹಾರವಾಗಿವೆ.

ಇವು ಮರ ಹತ್ತಲು ಅನುವಾಗುವಂತೆ ಉದ್ದನೆಯ ಕಾಲುಗಳು ಹಾಗೂ ಚೂಪಾದ ಉಗುರುಗಳನ್ನು ಹೊಂದಿವೆ. ಅಂಡಾಕಾರದ ಕವಚ, ನೀಲಿ ಮಿಶ್ರಿತ ಕಪ್ಪು ದೇಹ ಮತ್ತು ಹಳದಿ-ಕಿತ್ತಳೆ ಬಣ್ಣದ ಕೊಕ್ಕುಗಳು ಇವುಗಳ ಪ್ರಮುಖ ಗುರುತಾಗಿವೆ.

ಏಡಿಯ ಸಮಗ್ರ ಅಧ್ಯಯನ :

ಈ ಅಧ್ಯಯನವನ್ನು ರಾಜ್ಯದ ಮಧ್ಯ ಪಶ್ಚಿಮಘಟ್ಟದ ಆಗುಂಬೆ ಪ್ರದೇಶದಲ್ಲಿ ನಡೆದ ಎರಡು ಸ್ವತಂತ್ರ ಕ್ಷೇತ್ರ ವೀಕ್ಷಣೆಗಳ ಆಧಾರದ ಮೇಲೆ ಸಿದ್ಧಗೊಳಿಸಲಾಗಿದೆ.

2023ರ ಆ.19ರಂದು ಆಗುಂಬೆಯ ಸದಾ ಹಸಿರು ಮಳೆಕಾಡಿನಲ್ಲಿ ಸಣ್ಣ ಹುಲ್ಲುಗಾವಲಿನ ಮಧ್ಯೆ ಇರುವ ಕೆಸರಿನ ಹಾದಿಯಲ್ಲಿ ಈ ಏಡಿ ಮೊದಲ ಬಾರಿಗೆ ನೆಲದ ಮೇಲೆ ಸಂಚರಿಸುತ್ತಿರುವುದು ದಾಖಲಾಗಿತ್ತು. ಎರಡನೇ ಬಾರಿ 2025ರ ಮಾ.28ರಂದು ಜೌಗು ಪ್ರದೇಶದ ಕಾಡುಮಾವಿನ ಮರದ ನೀರು ತುಂಬಿದ ಕುಳಿಯಲ್ಲಿ ಮತ್ತೊಂದು ಏಡಿ ಪತ್ತೆಯಾಗಿದ್ದು, ಛಾಯಾ ಚಿತ್ರಗಳ ಆಧಾರದ ಮೇಲೆ ಅದನ್ನು ಇದೇ ಪ್ರಭೇದ ಎಂದು ದೃಢಪಡಿಸಲಾಗಿತ್ತು.

ಕೆಲವು ವಾರಗಳ ಬಳಿಕ, 2025ರ ಎ.17ರಂದು ಮತ್ತೆ ಅದೇ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಲಾಯಿತು. ಅಲ್ಲಿ ಗಂಡು ಏಡಿಯು ಪತ್ತೆಯಾಗಿದ್ದು, ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅಧ್ಯಯನ ನಡೆಸಲಾಯಿತು. ಅಧ್ಯಯನಗಳ ಪ್ರಕಾರ ಈ ಪ್ರಭೇದವು ಹೊಳೆಗಳು ಹಾಗೂ ನೀರಿನ ಮೂಲ ಗಳಿರುವ ಪ್ರದೇಶ ಗಳನ್ನು ಹೆಚ್ಚು ಇಷ್ಟಪಡುತ್ತದೆ. ಆಗುಂಬೆಯಲ್ಲಿ ಕಂಡುಬಂದ ಈ ವಾಸಸ್ಥಳವೂ ಇದೇ ರೀತಿಯ ಪರಿಸರ ಹೊಂದಿದ್ದವು.

ಈ ಏಡಿಯು ಕೇವಲ ಒಂದು ಪ್ರದೇಶಕ್ಕೆ ಸೀಮಿತ ವಾಗಿರದೆ, ಇಡೀ ಪಶ್ಚಿಮ ಘಟ್ಟದಾದ್ಯಂತ ಹರಡಿರುವ ಸಾಧ್ಯತೆಯನ್ನು ಈ ಸಂಶೋಧನೆ ಸಾಬೀತುಪಡಿಸಿದೆ. ಆದರೆ, ಹವಾಮಾನ ಬದಲಾವಣೆ, ಅರಣ್ಯ ನಾಶ ಹಾಗೂ ಹಳೆಯ ಮರಗಳ ಕಡಿತದಿಂದಾಗಿ ಮರಗಳಲ್ಲಿನ ನೀರಿನ ಕುಳಿಗಳು ಒಣಗುತ್ತಿರುವುದು ಇದರ ಉಳಿವಿಗೆ ಕಂಟಕವಾಗಿದೆ. ಹೀಗಾಗಿ ಪಶ್ಚಿಮ ಘಟ್ಟದಾದ್ಯಂತ ಸಮಗ್ರ ಸಮೀಕ್ಷೆ ನಡೆಸಿ, ಇವುಗಳ ಸಂರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ವನ್ಯಜೀವಿ ಸಂಶೋಧಕ ಜೋಯೆಲ್ ಕೊರೆಯ ಅಭಿಪ್ರಾಯಪಟ್ಟಿದ್ದಾರೆ.

ನೆಲದ ಮೇಲೆಯೂ ನಡೆಯುವ ಏಡಿ! :

ಇದುವರೆಗೆ ಲಭ್ಯವಿರುವ ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಕನಿ ಮರಂಜಂಡು ಸಂಪೂರ್ಣವಾಗಿ ಮರಗಳ ಮೇಲೆಯೇ ವಾಸಿಸುವ ಏಡಿ ಎಂದೇ ಪರಿಗಣಿಸಲಾಗಿತ್ತು. ಆದರೆ ಆಗುಂಬೆಯ ಮೊದಲ ವೀಕ್ಷಣೆಯಲ್ಲಿ ಈ ಏಡಿ ನೆಲದ ಮೇಲೆ ಸಂಚರಿಸುತ್ತಿರುವುದು ದಾಖಲಾಗಿರುವುದು ಹೊಸ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಿತು.

ಇದು ಯಾಕೆ ನೆಲದ ಮೇಲೆ ನಡೆಯುತ್ತದೆ ಎಂಬುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೂ ಸಂಶೋಧಕರು ಕಂಡುಕೊಂಡಂತೆ, ಅವು ಸಂಗಾತಿಯನ್ನು ಹುಡುಕುವ ಉದ್ದೇಶದಿಂದ ನೆಲದ ಮೇಲೆ ಸಂಚರಿಸುತ್ತಿರಬಹುದು ಅಥವಾ ಹೊಸ ವಾಸಸ್ಥಳವನ್ನು ಹುಡುಕುವ ಅಥವಾ ಸ್ಥಳಾಂತರಗೊಳ್ಳುವ ಪ್ರಕ್ರಿಯೆಯ ಭಾಗವಾಗಿರಬಹುದು ಎಂದು ತಿಳಿದು ಬಂದಿದೆ. ಈ ಎರಡೂ ಸಾಧ್ಯತೆಗಳು ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕೇರಳದ ಬುಡಕಟ್ಟು ಸಮುದಾಯದ ಕನಿ ಜನಾಂಗದ ಸ್ಥಳೀಯ ಜ್ಞಾನದ ಪ್ರಕಾರ ಈ ಏಡಿಯು ಸಾಮಾನ್ಯವಾಗಿ ಮಳೆಗಾಲದ ನಂತರದ ಅವಧಿಯಲ್ಲಿ(ಸೆಪ್ಟಂಬರ್-ಅಕ್ಟೋಬರ್) ಸಂತಾನೋತ್ಪತ್ತಿ ಮಾಡುತ್ತದೆ. ಆದುದರಿಂದ ಆಗುಂಬೆಯಲ್ಲಿ ಮೊದಲ ಬಾರಿ ಕಂಡು ಬಂದ ಅವಧಿ ಸಂಗಾತಿಯನ್ನು ಹುಡುಕಲು ನೆಲದ ಮೇಲೆ ಬರುತ್ತದೆ ಎಂಬುದಕ್ಕೆ ಬಲ ನೀಡಿದೆ. ಶ್ರೀಲಂಕಾದಲ್ಲಿ ಕಂಡುಬರುವ ಸಂಪೂರ್ಣ ಮರವಾಸಿ ಏಡಿ ಕೂಡ ಕೆಲವೊಮ್ಮೆ ಕಾಡಿನ ನೆಲದ ಮೇಲೆ ಸಂಚರಿಸುವುದು ವರದಿಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News