ಯಾದಗಿರಿ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಪ್ರತಿಭಟನೆ
ಯಾದಗಿರಿ: ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಇಲ್ಲ, ಸಲ್ಲದ ಆರೋಪಗಳನ್ನು ಮಾಡಿ ದೇವರ ಮತ್ತು ಗುರುವಿನ ಹೆಸರಿಗೆ ಕಳಂಕ ತರಲು ಸತತವಾಗಿ ಯತ್ನಿಸುತ್ತಿರುವ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆಯೇ ಒತ್ತಾಯಿಸಿ ಜಿಲ್ಲೆಯಲ್ಲಿನ ಧರ್ಮಸ್ಥಳದ ಸಾವಿರಾರು ಭಕ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನೇತಾಜಿ ಸರ್ಕಲ್ ದಿಂದ ಮೆರವಣಿಗೆ ಮೂಲಕ ಹೊರಟ ಅಪಾರ ಭಕ್ತರು ಸುಮಾರು ಎರಡು ಕಿಮೀ ದೂರದವರೆಗೆ ಸಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೇ ಜಮಾಯಿಸಿದರು.
ಈ ವೇಳೆ ಸೇರಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷೆ ನಾಗರತ್ನ ಅನಪುರ, ವೀರ ಭಾರತಿ ಪ್ರತಿಷ್ಠಾನದ ಅಧ್ಯಕ್ಷರಾದ ಪತ್ರಕರ್ತ ವೈಜನಾಥ ಹಿರೇಮಠ, ಯುವ ವಕೀಲ ನಾಗರಾಜ ಬಿರನೂರ ಅವರು, ಸೌಜನ್ಯಾಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ದಾಳಿಗೆ ಹೊರಟ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸಮೀರ್ ಎಂಡಿ, ಸಂತೋಷ ಶೆಟ್ಟಿ, ಜಯಂತ್ ಟಿ., ಅಯಜ್ ಅಂಚನ್ ಅವರುಗಳು ಸುಳ್ಳು ಷಡ್ಯಂತ್ರ ರೂಪಿಸಿ, ಅಪಪ್ರಚಾರ ಮಾಡುತ್ತಿರುವುದು ಏಕೆ? ಈ ತಂಡಕ್ಕೆ ಹಣಕಾಸಿನ ನೆರವು ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಸೂಕ್ತ ನಡೆಯಬೇಕೆಂದರು.
ಅನಾಮಿಕ ವ್ಯಕ್ತಿಯೋರ್ವ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿರುವುದು ಸ್ವಾಗತ, ಆದರೆ ಈ ತಂಡಕ್ಕೆ ಏನಾದರೂ ಸಿಕ್ಕಿದೆಯೇ? ಹಾಗಾದರೇ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ಧಿ ಹರಿಬಿಡುತ್ತಿರುವವರ ಬಗ್ಗೆ ಕ್ರಮ ಏಕಿಲ್ಲ, ಕೂಡಲೇ ಇದನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಲು ಮುಂದಾಗಬೇಕೆಂದು ಅವರುಗಳು ಸರ್ಕಾರವನ್ನು ಒತ್ತಾಯಿಸಿದರು.
ಕೋಟ್ಯಾಂತರ ಭಕ್ತರ ಭಾವನೆಗಳಿಗೆ ದಕ್ಕೆಯಾಗುತ್ತಿದ್ದರೂ ಮೌನಕ್ಕೆ ಶರಣರಾಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶಾಂತಿ ಭಂಗ ಮಾಡಿ ಅಶಾಂತಿ ಹುಟ್ಟುಹಾಕುತ್ತಿದೆ ಎಂದು ದೂರಿದರು. ಕಾರಣ ಇಷ್ಟೇಲ್ಲ ರಾದ್ಧಂತಗಳಿಗೆ ಕಾರಣರಾದ ಕಲುಷಿತ ಮನಸ್ಸಿನ ಆ ವ್ಯಕ್ತಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ನಾಗರತ್ನ, ಬಿರನೂರ, ಹಿರೇಮಠ್ ಆಗ್ರಹಿಸಿದರು.
ಡಿಸಿ ಹರ್ಷಲ್ ಭೊಯರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಭಕ್ತರಾದ ಶಾಂತಪ್ಪ ಕಾನಳ್ಳಿ, ಸ್ವಾಮಿದೇವ ದಾಸನಕೇರಿ, ವೀರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ದೀಪಾ, ದುರ್ಗಾಬಾಯಿ, ನಮೀತಾ, ರೇಣುಕಾ, ಭಾನುಬೇಗಂ, ಶಬಾನಾ ಆಫ್ರಿನ್, ಸೂಗುರೇಶ ವಾರದ, ಪ್ರಕಾಶ ಅಂಗಡಿ ಸೇರಿದಂತೆಯೇ ಇತರರಿದ್ದರು.