ಸೈದಾಪುರ | ಪೊಲೀಸ್ ಇಲಾಖೆ ವತಿಯಿಂದ ಕುರಿಗಾಹಿಗಳ ಸಮಸ್ಯೆಗಳು, ಕಾನೂನು ಅರಿವು ಕಾರ್ಯಕ್ರಮ
ಯಾದಗಿರಿ/ ಸೈದಾಪುರ: ಕಳ್ಳತನ ಪ್ರಕರಣಗಳನ್ನು ತಡೆಯಲು ಪೊಲೀಸ್ ಇಲಾಖೆ ಪ್ರಾಮಾಣಿಕ ಪ್ರಯತ್ನದೊಂದಿಗೆ ಸದಾ ಸಿದ್ಧವಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಶಂಕರ ಅಭಿಪ್ರ್ರಾಯಪಟ್ಟರು.
ಪಟ್ಟಣದ ಕನಕ ಭವನದಲ್ಲಿ ಸೋಮುವಾರ ಜಿಲ್ಲಾ ಮತ್ತು ಸೈದಾಪುರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಕುರಿಗಾಹಿಗಳ ಸಮಸ್ಯೆಗಳು ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾರ್ವಜನಿಕರಿಗೆ ಕಾನೂನಡಿಯಲ್ಲಿ ನ್ಯಾಯ ಕಲ್ಪಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ ಹೀಗಾಗಿ ಜನ ಭಯ, ಆತಂಕ ಪಡದೆ ನೇರವಾಗಿ ಹತ್ತಿರದ ಠಾಣೆಗೆ ಬಂದು ದೂರು ದಾಖಲಿಸಬೇಕು. ಅಲ್ಲಿ ನಿಮಗೆ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ನೇರವಾಗಿ ಕಚೇರಿ ಸಮಯದಲ್ಲಿ ನನ್ನನ್ನು ಭೇಟಿ ಮಾಡಿ. ಇಲ್ಲಿ ಯಾವ ಮುಖಂಡನ ಮದ್ಯಸ್ಥಿಕೆಯೂ ಬೇಡ. ಇದರ ಜೊತೆಗೆ ಕುರಿಗಾಹಿಗಳಿಗೆ ಕಾನೂನಿನ ಅರಿವು ಮತ್ತು ಜಾಗೃತಿ ಅತ್ಯಗತ್ಯವಾಗಿದೆ. ಅದನ್ನು ಸಮರ್ಪಕವಾಗಿ ತಿಳಿದುಕೊಂಡು ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಇದಕ್ಕೂ ಮೊದಲು ಜಿಲ್ಲಾ ಕುರುಬ ಸಮಾಜದ ಮಾಜಿ ಅಧ್ಯಕ್ಷ ಕೆ. ವಿಶ್ವನಾಥ ನೀಲಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕುರಿ ಕಳ್ಳತನ ಪ್ರಕರಣಗಳು ಹಿಂದಿನಿಂದಲೂ ನಿರಂತವಾಗಿ ನಡೆಯುತ್ತಿದ್ದು, ಅದನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿ, ಬಡ ಕುರಿಗಾಹಿಗಳ ಕುಟುಂಬದ ರಕ್ಷಣೆ ಮಾಡಬೇಕು. ಕುರಿಗಳು ಸತ್ತ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಹಾಗೂ ವರದಿಯೊಂದಿಗೆ ಸರ್ಕಾರದ ಪರಿಹಾರಕ್ಕೆ ಅವಕಾಶ ಮಾಡಿಕೊಡಬೇಕು. ಆದರೆ ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಎಂಬ ಬೇಸರ ಕಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಸುರೇಶ ನಾಯಕ, ಉಪ ತಹಸೀಲ್ದಾರ ದಸ್ತಗಿರಿ ನಾಯಕ, ಪೊಲೀಸ್ಇನ್ ಸ್ಪೆಕ್ಟರ್ ಶಿವಾನಂದ ಎಂ ಮರಡಿ, ಅರಣ್ಯ ಇಲಾಖೆಯ ಅಧಿಕಾರಿ ಮಂಜುನಾಥ, ಪಶುಸಂಗೋಪನೆ ಇಲಾಖೆಯ ಅಧಿಕಾರಿ ಡಾ. ಆಕಾಶ, ಡಾ. ಸುರಜಿತ್ ಕುಮಾರ್, ಪಿಡಿಓ ವಿಜಯಲಕ್ಷ್ಮಿ, ಕುರುಬ ಸಮಾಜದ ಹಿರಿಯ ಮುಖಂಡರಾದ ಚಂದ್ರಶೇಖರ ವಾರದ, ಸಿದ್ದಣ್ಣಗೌಡ ಕಾಡಂನೋರ, ಭೀಮಶಪ್ಪ ಜೇಗರ, ಪ್ರಭುಲಿಂಗ ವಾರದ, ಶೇಷಪ್ಪ ಜೇಗರ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಣ್ಣ ಐಕೂರು, ಸಾಬರೆಡ್ಡಿ, ವೆಂಕೋಬ ತುರುಕಾನದೊಡ್ಡಿ, ವಲಯಾಧ್ಯಕ್ಷ ರವೀಂದ್ರ ಕಡೇಚೂರು, ಸಿದ್ದು ಪೂಜಾರಿ, ವಿಜಯ ಕಂದಳ್ಳಿ, ಪುಂಡಲಿಕ, ರಾಚೋಟಿ ಕಣೇಕಲ್, ಮಹೇಶ ಜೇಗರ್ ಸೇರಿದಂತೆ ಇತರರಿದ್ದರು.
ಬಾಲಚೇಡ ಮತ್ತು ದುಪ್ಪಲ್ಲಿ ಗ್ರಾಮಗಳ ಕುರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಪಸ್ವಲ್ಪ ಹಣ ಮಾತ್ರ ದೂರುದಾರರಿಗೆ ತಲುಪಿಸಿದ್ದು, ಪೂರ್ಣ ಪ್ರಮಾಣದ ಹಣ ಕೊಡಿಸಲು ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು.
-ಕೆ.ವಿಶ್ವನಾಥ ನೀಲಹಳ್ಳಿ, ಕುರುಬ ಸಮಾಜದ ಹಿರಿಯ ಮುಖಂಡ