ಯಾದಗಿರಿ | ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ: ಕರುಣೇಶ್ವರ ಶಿವಾರ್ಚಾಯರು
ವಡಗೇರಾದಲ್ಲಿ ಉಚಿತ ಆರೋಗ್ಯ ಶಿಬಿರ
ಯಾದಗಿರಿ :ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಸಂಗಮದ ಕರುಣೇಶ್ವರ ಶಿವಾರ್ಚಾಯರು ಹೇಳಿದರು.
ಲಯನ್ಸ್ ಕ್ಲಬ್, ವಿಬಿಆರ್ ಆಸ್ಪತ್ರೆ ಹಾಗೂ ಮಹಿಬೂಬನಗರದ ಲಯನ್ಸ್ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ವಡಗೇರಾ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಸಚಿವ ವಿಶ್ವನಾಥ ರೆಡ್ಡಿ ಮುದ್ನಾಳ ಹಾಗೂ ಡಾ.ವೀರಬಸವಂತರೆಡ್ಡಿ ಮುದ್ನಾಳ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಧನರೇಖೆ ಇದ್ದು ಆರೋಗ್ಯದ ರೇಖೆ ಇಲ್ಲದಿದ್ದರೆ ಜೀವನವೇ ವ್ಯರ್ಥ ಎಂದು ಅಭಿಪ್ರಾಯಪಟ್ಟ ಅವರು, ಇಂದಿನ ದಿನಗಳಲ್ಲಿ ಅನೇಕರು ಆರೋಗ್ಯದ ಕಡೆ ಗಮನ ಕೊಡದೆ ದುಷ್ಚಟಗಳಿಗೆ ದಾಸರಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಲಯನ್ಸ್ ಕ್ಲಬ್ನ ಹಿರಿಯ ಸದಸ್ಯ ರಾಚಣ್ಣಗೌಡ ಮುದ್ನಾಳ್ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವ ಬದಲಾಗಿ ಈ ಮೂವರು ಆದರ್ಶ ವ್ಯಕ್ತಿಗಳ ಜನ್ಮದಿನವನ್ನು ಉಚಿತ ಆರೋಗ್ಯ ಶಿಬಿರದ ಮೂಲಕ ಆಚರಿಸಿರುವುದು ಬಹುದೊಡ್ಡ ಸಾಮಾಜಿಕ ಸೇವೆ ಎಂದು ಶ್ಲಾಘಿಸಿದರು.
ಸರ್ವ ಅಂಗಗಳಲ್ಲಿ ನೇತ್ರ ಅಂಗ ಅತ್ಯಂತ ಮುಖ್ಯವಾಗಿದ್ದು, ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡು ಕಣ್ಣುಗಳ ರಕ್ಷಣೆ ಮಾಡಿಕೊಳ್ಳಬೇಕೆಂದು ಕರುಣೇಶ್ವರ ಸ್ವಾಮಿಗಳು ಸಲಹೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಕೊಡಲ್ ಹಾಗೂ ನೀರಡಗಂಬದ ಪಂಚಮಸಿದ್ದಲಿಂಗ ಸ್ವಾಮಿಗಳು, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳು ಇನ್ನೂ ಹೆಚ್ಚು ನಡೆಯಬೇಕೆಂದು ಹೇಳಿದರು.
ರಾಚಣ್ಣಗೌಡ ಮುದ್ನಾಳ್ ಅವರು ಅಪರೂಪದ ಮೂರು ಮಹನೀಯರ ಜನ್ಮದಿನವನ್ನು ಲಯನ್ಸ್ ಕ್ಲಬ್ ಮೂಲಕ ಆಚರಿಸಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿರುವುದು ಇತರರಿಗೆ ಮಾದರಿಯಾಗಿದೆ ಎಂದು ವಕ್ತಾರರು ಅಭಿಪ್ರಾಯಪಟ್ಟರು.
ಲಯನ್ಸ್ ಕ್ಲಬ್ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ರಾಚಣ್ಣಗೌಡ ಮುದ್ನಾಳ್, ಡಾ.ಜಗನ್ನಾಥ ರೆಡ್ಡಿ, ಡಾ.ಜಗದೀಶ ಹೀರೆಮಠ್, ಡಾ.ನಾಗರಾಜ (ಮಹಿಬೂಬನಗರ), ಡಾ.ಅಮೋಘ ಸಿದ್ದೇಶ, ವೆಂಕಟರೆಡ್ಡಿ ತಂಗಡಗಿ, ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ್, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಲ್ಲಯ್ಯಸ್ವಾಮಿ ಇಟಗಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಒಟ್ಟು 350 ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಗಿದ್ದು, 50 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಗುರುತಿಸಲಾಯಿತು. ಇದರಲ್ಲಿ 30 ಜನರಿಗೆ ಮಹಿಬೂಬನಗರದಲ್ಲಿ ಆಯೋಜಕರಿಂದಲೇ ಉಚಿತ ಶಸ್ತ್ರಚಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು, ಉಳಿದ 20 ಜನರಿಗೂ ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಆಯೋಜಕರು ತೀರ್ಮಾನಿಸಿದ್ದಾರೆ.
ಶಿಬಿರದಲ್ಲಿ ವಿವಿಧ ತಜ್ಞ ವೈದ್ಯರು, ಸಿಬ್ಬಂದಿ ಹಾಗೂ ಲಯನ್ಸ್ ಕ್ಲಬ್ ಸದಸ್ಯರಾದ ಮಲ್ಲಣ್ಣಗೌಡ ಕೌಳೂರು, ಸೋಮನಾಥ ಜೈನ, ಹಣಮಾನ ಶೇಟ್, ಮಲ್ಲಿಕಾರ್ಜುನ ಶಿರಗೋಳ್, ಸಿದ್ದು ತಿಪ್ಪಾರೆಡ್ಡಿ, ವೀರೇಶ ಮೊಸಂಬಿ, ಬಸವರಾಜ ಚಂಡರಕಿ, ಹೇಮಂತ್ ಕುಮಾರ್, ಸೂಗಣ್ಣಗೌಡ ಪಾಟೀಲ್, ಸುರೇಶ ಜಾಕಾ, ಸಚಿನ್ ಪಾಟೀಲ್ ಸೇರಿದಂತೆ ಇತರರು ಸೇವೆ ಸಲ್ಲಿಸಿದರು.