ಯಾದಗಿರಿ | ನಗರವನ್ನು ಸುಂದರವಾಗಿಸಲು ಸಹಕರಿಸಿ : ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ
ಯಾದಗಿರಿ : ರಸ್ತೆ ಬದಿ ವ್ಯಾಪಾರಸ್ಥರು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವ್ಯಾಪಾರ ವಹಿವಾಟು ನಡೆಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು, ನಮ್ಮ ಯಾದಗಿರಿ ನಗರ ಸುಂದರವಾಗಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪೂರ ಮನವಿ ಮಾಡಿದ್ದಾರೆ.
ನಗರಸಭೆ, ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ಜೀವನೋಪಾಯ ಇಲಾಖೆ ( ಡೇ- ನಲ್ಮಾ ಶಾಖೆ) ವತಿಯಿಂದ ನಗರದ ವಾಲ್ಮೀಕಿ ಭವನದ ಸಭಾಂಗಣದಲ್ಲಿ ಬೀದಿ ವ್ಯಾಪಾರಸ್ಥರಿಗೆ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೀದಿಬದಿ ವ್ಯಾಪಾರಿಗಳಿಂದ ಟ್ರಾಫಿಕ್ ಸಮಸ್ಯೆಯಾಗಿ ಪ್ರಮುಖ ಬೀದಿಗಳಲ್ಲಿ ಮತ್ತು ಇತರೆ ಕಡೆ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ ಎಂದು ಜನರು ನಗರಸಭೆಗೆ ದೂರು ಸಲ್ಲಿಸುತ್ತಿದ್ದಾರೆ. ಪಾದಚಾರಿಗಳಿಗೆ ಮತ್ತು ವಾಹನ ಚಾಲಕರಿಗೆ ಸರಳ ಸಂಚಾರಕ್ಕೆ ಅನೂಕೂಲ ಮಾಡಿಕೊಟ್ಟರೆ ಅಪಘಾತಗಳು ಸಂಭವಿಸುವುದು ನಿಲ್ಲುತ್ತದೆ. ಹೀಗಾಗಿ ನಗರಸಭೆ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯೊಂದಿಗೆ ಎಲ್ಲರೂ ಸಹಕಾರ ನೀಡಬೇಕು. ಬೀದಿ ಬದಿ ವ್ಯಾಪಾರಿಗಳು ನಮ್ಮ ಕುಟುಂಬವಿದ್ದಂತೆ, ಅಲ್ಲದೇ ವ್ಯಾಪಾರಿಗಳು ಯಾರಿಗೂ ದುಡ್ಡು ಕೊಡುವ ಅವಶ್ಯಕತೆ ಇರುವುದಿಲ್ಲ. ಒಂದು ವೇಳೆ ಯಾರಾದರೂ ದುಡ್ಢು ತೆಗೆದುಕೊಂಡರೆ ನಮ್ಮ ಗಮನಕ್ಕೆ ತರಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಪ್ಲಾಸ್ಟಿಕ್ ಮುಕ್ತ ನಗರವಾಗಿಸಬೇಕು ಮತ್ತು ಮನೆಯ ಸುತ್ತಮುತ್ತಲು ಸ್ವಚ್ಛತೆ ಕಾಪಾಡಿಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕು. ಪಿ .ಎಂ. ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಮೊದಲನೆ ಹಂತದಲ್ಲಿ 1,358 ಫಲಾನುಭವಿಗಳಿಗೆ ಒಟ್ಟು 10 ಸಾವಿರ ರೂ.ಗಳಂತೆ , ಎರಡನೇ ಹಂತದಲ್ಲಿ 636 ಫಲಾನುಭವಿಗಳಿಗೆ 20 ಸಾವಿರ ರೂ.ಗಳಂತೆ, ಮೂರನೇ ಹಂತದಲ್ಲಿ213 ಫಲಾನುಭವಿಗಳಿಗೆ 50 ಸಾವಿರ ರೂ.ಗಳಂತೆ ಸಾಲ ಕೊಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ಕೆ. ವೈದ್ಯ, ನಗರಸಭೆ ಉಪಾಧ್ಯಕ್ಷೆ ರುಖಿಯಾಬೇಗಂ, ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ನಾಮನಿರ್ದೇಶಿತ ಸದಸ್ಯ ವೆಂಕಟೇಶ, ಪೊಲೀಸ್ ಇಲಾಖೆಯ ರವಿ ರಾಠೋಡ್, ಆರೋಗ್ಯ ಇಲಾಖೆಯ ಡಾ.ಅನಿಲಕುಮಾರ, ಸಿ ಆರ್ ಪಿ ಗಳಾದ ಸಾಬಮ್ಮ, ಅವ್ವಮ್ಮ, ಪ್ರೇಮಾ ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.