ಯಾದಗಿರಿ | ಬಳಿಚಕ್ರ ಗ್ರಾಮದಲ್ಲಿ ನಾಡಕಚೇರಿ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ ಶಾಸಕ ಶರಣಗೌಡ ಕಂದಕೂರ
ಯಾದಗಿರಿ : ಜನರು ನಾಡಕಚೇರಿಗೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಮಸ್ಯೆಗಳನ್ನು ತೆಗೆದುಕೊಂಡು ಬಂದಾಗ ಅವರಿಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಬಳಿಚಕ್ರ ಗ್ರಾಮದಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನಾಡಕಚೇರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮಾನವೀಯತೆ ಆಧಾರದ ಮೇಲೆ ಕಚೇರಿಗೆ ಬಂದಂತವರಿಗೆ ಕೆಲಸ ಮಾಡಿಕೊಡಬೇಕು, ಇಲ್ಲಿಗೆ ಬರುವವರು ಬಡವರು, ರೈತರು ಇರುತ್ತಾರೆ ಅವರಿಗೆ ಕಷ್ಟಕಾಲದಲ್ಲಿ ಕೈ ಹಿಡಿದು ಅವರ ಕೆಲಸ ಮಾಡಿಕೊಟ್ಟಾಗ ನಿಮಗೆ ಪುಣ್ಯಸಿಗುತ್ತದೆ, ಅವರು ನಿಮ್ಮಿಂದ ಬೇರೆನು ನಿರೀಕ್ಷೆ ಮಾಡಲ್ಲ ಎಂದು ಹೇಳಿದರು.
ಕಂದಾಯ ಇಲಾಖೆಯು ಜನಸಾಮಾನ್ಯರ, ರೈತ ಸ್ನೇಹಿ ಇಲಾಖೆಯಾಗಿದೆ. ಈ ಇಲಾಖೆ ಸೇವೆಗಳ ಸುಧಾರಣೆಗೆ ಸರಕಾರ ಆಧ್ಯತೆ ನೀಡಿದೆ. ಬಳಿಚಕ್ರ ನಾಡಕಚೇರಿಗೆ ಅತ್ಯುತ್ತಮವಾದ ನೂತನ ಕಟ್ಟಡ ನಿರ್ಮಾಣ ಮಾಡಿ ಜನಸೇವೆಗೆ ಸಮರ್ಪಿಸಲಾಗಿದೆ, ಅರ್ಜಿ ಹಿಡಿದು ಬರುವ ನಾಗರಿಕರು ಬಿಸಿಲಲ್ಲಿ ನಿಲ್ಲಬಾರದು ಎನ್ನುವ ಕಾರಣಕ್ಕೆ ತಂಪಾದ ನೆರಳು ಸಿಗಲಿ ಎನ್ನುವ ಸದುದ್ದೇಶದಿಂದ ಸರತಿ ನಿಲ್ಲುವ ಜಾಗಕ್ಕೆ ಕೋಣೆ ನಿರ್ಮಾಣ ಮಾಡಲಾಗಿರುವುದು ಒಳ್ಳೆಯ ಸಂಗತಿಯಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಶರಣಬಸ್ಸಪ್ಪ ಕೋಟೆಪ್ಪಗೋಳ್ ಮಾತನಾಡಿ, ಕಂದಾಯ ಇಲಾಖೆ ಎಲ್ಲರಿಗೂ ಸೇವೆ ನೀಡುತ್ತದೆ. ಕೆಲಸದ ಒತ್ತಡವಿದ್ದರೂ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ, ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಜಿಲ್ಲೆಯ ಎಲ್ಲರಿಗೂ ಜನಸ್ನೇಹಿ ಆಡಳಿತ ನೀಡಲು ಎಲ್ಲರೂ ಬದ್ಧವಾಗಿದ್ದು, ಸಾರ್ವಜನಿಕರು ಸಹಕಾರವೂ ಮುಖ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಇರುವ ಗ್ರಾಮ ಆಡಳಿತ ಅಧಿಕಾರಿಗಳಿಗೆ, ಕಂದಾಯ ನಿರೀಕ್ಷಕರಿಗೆ, ಉಪ ತಹಶಿಲ್ದಾರರಿಗೆ ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಳಿಚಕ್ರ ಗ್ರಾಮಸ್ಥರು ಶಾಸಕ ಶರಣಗೌಡ ಕಂದಕೂರ ರವರಿಗೆ ಸನ್ಮಾನಿಸಿ, ಅಹವಾಲುಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಗ್ರಾಪಂ ಅಧ್ಯಕ್ಷರು, ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಇದ್ದರು.
ಕಂದಾಯ ಅಧಿಕಾರಿಗಳು ಕಚೇರಿಯಲ್ಲಿರಿ :
ನಾಡಕಚೇರಿಯಲ್ಲಿ ಕಂದಾಯ ಅಧಿಕಾರಿಗಳು ಯಾವಾಗಲೂ ಸದಾ ಇರಬೇಕು, ಕಚೇರಿಯಲ್ಲಿದ್ದು, ಬಂದಂತಹ ನಾಗರೀಕರಿಗೆ ಸೌಮ್ಯರೀತಿಯಿಂದ ವರ್ತಿಸಿ ಕೆಲಸ ಮಾಡಿಕೊಡಬೇಕು, ಯಾರೂ ಮೇಲಾಧಿಕಾರಿಗಳಿಗೆಯಾಗಲಿ, ನಮಗಾಗಲಿ ದೂರು ನೀಡುವಂತಹ ವಾತಾವರಣ ಉಂಟಾಗಬಾರದು.
ನಾನು ಭಾಷಣ ಮಾಡಲು ಬಂದಿಲ್ಲ, ನಿಮ್ಮೂರಿಗೆ ಬರುವಷ್ಟರಲ್ಲಿ ಕಾಮಗಾರಿಗೆ ಅನುದಾನ ತೆಗೆದುಕೊಂಡು ಬಂದಿದ್ದೇನೆ, ಬಳಿಚಕ್ರ ಗ್ರಾಮಸ್ಥರು ಬಹಳ ದಿನಗಳಿಂದ ಕೇಳುತ್ತಿರುವ ಮೂರು ಮಾರ್ಗರಸ್ತೆಗಳನ್ನು ಅಭಿವೃದ್ಧಿ ಪಡಿಸಲು, ಸುಮಾರು 70 ಲಕ್ಷ ರೂ. ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಿದ್ದೇನೆ, ನೀವು ಸಹಕಾರ ನೀಡಿ ರಸ್ತೆ ಅಭಿವೃದ್ದಿಗೆ ಸ್ಪಂದಿಸಬೇಕು, ಅದರ ಜೊತೆಗೆ ಕುಡಿಯುವ ನೀರಿಗಾಗಿ ಎಷ್ಟು ಹಣಬೇಕಾದರೂ ಶಾಸಕರ ಅನುದಾನದಲ್ಲಿ ನೀಡುತ್ತೇನೆ, ಗ್ರಾಮ ಪಂಚಾಯತಿಯವರು ಕೂಡಲೇ ಕೆಲಸ ಆರಂಭಿಸಬೇಕು, ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಕುಡಿಯುವ ನೀರಿನ ವಿಷಯದಲ್ಲಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
- ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್