ಯಾದಗಿರಿ | ಯಕ್ಷಗಾನ ಕಲೆ ಇಂದು ವಿಶ್ವವ್ಯಾಪಿ ಪಸರಿಸಿದೆ : ಹೆಡಗಿಮದ್ರಾ ಶ್ರೀ
ಯಾದಗಿರಿ: ಯಕ್ಷಗಾನ ಕಲೆ ಇಂದು ವಿಶ್ವವ್ಯಾಪಿ ಪಸರಿಸಿದ್ದು, ಇದನ್ನು ಪ್ರತಿಯೊಬ್ಬರೂ ಕಲಿಯಬೇಕು ಎಂದು ಹೆಡಗಿಮದ್ರಾ ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.
ನಗರದ ಹೋಟೆಲ್ ಮತ್ತು ಬೇಕರಿ ಸಂಘಟನೆಯಿಂದ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿಶ್ವನಾಥರಡ್ಡಿ ಮುನ್ನಾಳ ಸಭಾಂಗಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡ ಯಕ್ಷಗಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಜನರು ಶ್ರಮಜೀವಿಗಳು. ವಿಶ್ವದ ಎಲ್ಲಡೆ ತಮ್ಮ ಕಾಯಕದೊಂದಿಗೆ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಚೆನ್ನಾರೆಡ್ಡಿಗೌಡ ಪಾಟೀಲ್ ತೂನ್ನೂರ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಕಲಾ ಸಂಸ್ಕೃತಿ ವಿಶಾಲವಾಗಿದೆ. ಯಕ್ಷಗಾನ ಇದೊಂದು ಅದ್ಭುತ ಕಲೆಯಾಗಿದ್ದು, ಇದನ್ನು ನೋಡುವುದರಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದರು.
ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಕಾಂಗ್ರೆಸ್ ಯುವ ಮುಖಂಡ ಬಸ್ಸುಗೌಡ ಬಿಳಾರ, ದೇವೇಂದ್ರನಾಥ ನಾದ್, ಹೋಟೆಲ್ ಬೇಕರಿ ಸಂಘಟನೆಗಳ ಪದಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿ, ಸಂತೋಷ ಶೆಟ್ಟಿ, ರವಿಗೌಡ ಗುರುಸುಣಗಿ, ಸುಶಾಂತ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಗುರುಪ್ರಸಾದ ವೈದ್ಯ ನಿರೂಪಿಸಿದರು. ಕರುಣಾಕರ ಸ್ವಾಗತಿಸಿದರು.