ಯಾದಗಿರಿ | ವಿದ್ಯುತ್ ಸಮಸ್ಯೆ ಬಗ್ಗೆ ನಿಷ್ಕಾಳಜಿತನ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅಂಬೇಡ್ಕರ್ ಸೇವಾ ಸಮಿತಿ ಮನವಿ
ಯಾದಗಿರಿ: ವಿದ್ಯುತ್ ಕಂಬಗಳು ಹಾಗೂ ನಗರದಲ್ಲಿ ದಿನನಿತ್ಯ ಆಗುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ಬಗ್ಗೆ ನಿಷ್ಕಾಳಜಿತನ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತು ಜೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ಅಂಬೇಡ್ಕರ್ ಸೇವಾ ಸಮಿತಿ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಯಾದಗಿರಿ ನಗರದ ಕೋಟೆಗಾರವಾಡಾದಲ್ಲಿ ಸ.ಹಿ.ಪ್ರಾ. ಶಾಲೆ ಮುಂದುಗಡೆ ಕಂಬ ಮತ್ತು ವೈರ್ ಜೋತು ಬಿದ್ದಿದ್ದು, ಇದರಿಂದ ಶಾಲಾ ಮಕ್ಕಳಿಗೆ, ಇಲ್ಲಿನ ನಿವಾಸಿಗಳಿಗೆ ಬಹಳ ತೊಂದರೆ ಆಗಿದ್ದು, ಏನಾದರೂ ಜೀವಕ್ಕೆ ಅಪಾಯವಾದರೆ ಯಾರೂ ಹೊಣೆಗಾರರು, ಚಿಕ್ಕ ಮಕ್ಕಳು ಅಪಾಯದಲ್ಲಿ ಕಾಲ ಕಳೆಯುತ್ತಿದ್ದಾರೆ, ಬಸವರಾಜ ಮಾಚನೂರ ಮನೆ ಪಕ್ಕದಲ್ಲಿ ಕಂಬ ಹಾಕಿದ್ದು, ಕಂಬದೊಳಗಿನ ರಾಡ್ಗಳು ಹೊರಗಡೆ ಬಂದಿದ್ದು, ಬೀಳುವ ಸ್ಥಿತಿಯಲ್ಲಿದೆ, ಅಲ್ಲದೇ ಈ ಕಂಬದಲ್ಲಿ ಅರ್ಥಿಂಗ್ ಬರುತ್ತಿದ್ದು, ಸಾರ್ವಜನಿಕರು ಜೀವ ಭಯದಲ್ಲಿ ಬದುಕುತ್ತಿದ್ದಾರೆ.
ಯಾದಗಿರಿ ನಗರದ ಕೋಟೆಗಾರವಾಡಾದಲ್ಲಿ ಆಶ್ರಯ ಮನೆಗಳಿವೇ 10 ವಿದ್ಯುತ್ ಕಂಬಗಳ ವ್ಯವಸ್ಥೆ ಹಾಗೂ ಡಿ.ಟಿ.ಹೆಚ್. ಶಾಲೆಯಿಂದ ಕೋಟೆಗಾರವಾಡಾದ ಸ.ಹಿ.ಪ್ರಾ. ಶಾಲೆವರೆಗೆ ಎಲ್.ಟಿ. ಲೈನ್ ಅಳವಡಿಸಬೇಕೆಂದು ಮನವಿ ಸಲ್ಲಿಸಲಾಗಿದೆ.
ಒಂದು ವಾರದಲ್ಲಿ ಸದರಿ ಅಧಿಕಾರಿಗಳನ್ನು ಅಮಾನತು ಮಾಡಿ ಸಮಸ್ಯೆ ಬಗೆಹರಿಸದೇ ಹೋದಲ್ಲಿ ತಮ್ಮ ಕಚೇರಿಗೆ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ಮಾಡಲಾಗುವುದು ಎಂದು ಜಿಲ್ಲಾಧಕ್ಷರಾದ ರಾಹುಲ್ ಕೊಲ್ಲೂರಕರ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮೋನಪ್ಪ ಮುನೇಪ್ಪಾನೋರ್, ಆಂಜನೇಯ ಭಂಡಾರಿ, ರಮೇಶ್ ಕೌಳೂರ್, ಹಸೇನ್ ನಾಧಫ್, ರಾಮು ಗಣಪುರ, ಹಣಮಂತ ಕೊಲ್ಲೂರ್, ಉಪಸ್ಥಿತರಿದ್ದರು.