×
Ad

ಯಾದಗಿರಿ | ವಕ್ಫ್ ತಿದ್ದುಪಡಿ ಮಸೂದೆ ರದ್ದತಿಗೆ ಆಗ್ರಹ

Update: 2025-06-11 17:56 IST

ಯಾದಗಿರಿ: ಸಂಸತ್ತಿನಲ್ಲಿ ಅಂಗೀಕರಿಸಲಾದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ರದ್ದುಪಡಿಸುವಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಯಾದಗಿರಿ ಜಂಟಿ ಕ್ರಿಯಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಮಾಡಿದ್ದಾರೆ.

ಸಂಸತ್ತಿನಲ್ಲಿ ಅಂಗೀಕರಿಸಲಾದ ವಕ್ಫ್ (ತಿದ್ದುಪಡಿ) ಮಸೂದೆಯು ಸಂವಿಧಾನ ವಿರೋಧಿಯಾಗಿದ್ದು, ಇದು ಸಂವಿಧಾನ ಮೂಲತತ್ವಗಳಾದ ಸಮಾನತೆ, ಧರ್ಮದ ಆಧಾರದ ಮೇಲೆ ತಾರತಮ್ಯದ ನಿಷೇಧ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಹೀಗಾಗಿ, ಈ ಮಸೂದೆಯನ್ನು ಕಾನೂನು ಆಗಿ ಮಾಡಲು ಅವಕಾಶ ಕೊಡಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಇತ್ತೀಚೆಗೆ 1995ರ ವಕ್ಸ್ ಕಾಯ್ದೆಗೆ ಅಂಗೀಕರಿಸಲಾದ ತಿದ್ದುಪಡಿಗಳು ತಾರತಮ್ಯದಿಂದ ಕೂಡಿದ್ದು, ಭಾರತದ ಸಂವಿಧಾನದಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಈ ತಿದ್ದುಪಡಿಗಳು ಸಂವಿಧಾನದ 14, 25, 26 ಮತ್ತು 29 ನೇ ವಿಧಿಗಳಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಹಿಂದೂ, ಸಿಖ್, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯಗಳು ಅಂತಹ ರಕ್ಷಣೆಗಳನ್ನು ಅನುಭವಿಸುತ್ತಿದ್ದು ಕೇವಲ ವಕ್ಫ್‌ ರಕ್ಷಣೆ ಮತ್ತು ಆಸ್ತಿಗಳಿಗೆ ಲಭ್ಯವಿರುವ ನಿಬಂಧನೆಗಳನ್ನು ಕೊನೆ ಗೊಳಿಸುವ ಮೂಲಕ ಅದು ಮುಸ್ಲಿಮರೊಂದಿಗೆ ತಾರತಮ್ಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಇದು ಲಾ ಆಫ್ ಲಿಮಿಟೇಷನ್ ಕಾನೂನಿನಿಂದ ಲಭ್ಯವಿರುವ ವಿನಾಯಿತಿಯನ್ನು ರದ್ದುಗೊಳಿಸುತ್ತದೆ ಮತ್ತು ಮುಸ್ಲಿಮರ ನಿರ್ವಹಿಸುವ ಮತ್ತು ನಿಯಂತ್ರಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ. ಸರ್ಕಾರವು ವಕ್ಫ್‌ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದರೆ, ಈ ತಿದ್ದುಪಡಿಗಳ ಅಡಿಯಲ್ಲಿ ಅದು ಈಗ ಅದರ ಮಾಲಕರಾಗಬಹುದು ಏಕೆಂದರೆ ವಿವಾದವನ್ನು ಸರ್ಕಾರ ನೇಮಿತ ಅಧಿಕಾರಿ ನಿರ್ಧರಿಸುತ್ತಾರೆ. ವಕ್ಫ್‌ ಮಂಡಳಿ ಮತ್ತು ಕೇಂದ್ರ ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮರು ಮಾತ್ರ ಸದಸ್ಯರಾಗಿರಬೇಕು ಎಂಬ ನಿಯಮವನ್ನು ಕೊನೆಗೊಳಿಸಲಾಗಿದೆ. ಕೇಂದ್ರ ವಕ್ಫ್‌ ಮಂಡಳಿ ಮತ್ತು ವಕ್ಫ್‌ ಮಂಡಳಿಗಳಿಗೆ ಚುನಾವಣೆಗಳನ್ನು ನಾಮನಿರ್ದೇಶನಗಳ ಮೂಲಕ ಬದಲಾಯಿಸಲಾಗಿದೆ.

ಈ ಎಲ್ಲಾ ತಿದ್ದುಪಡಿಗಳು ಮುಸ್ಲಿಮರು ತಮ್ಮದೇ ಆದ ಸಂಸ್ಥೆಗಳನ್ನು ಸ್ಥಾಪಿಸುವುದು, ನಡೆಸುವುದು ಮತ್ತು ನಿರ್ವಹಿಸುವುದನ್ನು ತಡೆಯುವುದಕ್ಕೆ ಸಮಾನವಾಗಿವೆ. ಆದ್ದರಿಂದ, ಕೆಳಗೆ ಸಹಿ ಮಾಡಿರುವ ನಾವು, ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ ಈ ಎಲ್ಲಾ ವಿವಾದಾತ್ಮಕ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ನಿಮ್ಮನ್ನು ಗೌರವದಿಂದ ವಿನಂತಿಸುತ್ತೇವೆ. ನಮ್ಮ ಈ ವಿನಮ್ರ ವಿನಂತಿಯನ್ನು ನೀವು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಗುಲಾಂ ಸಮ್ದಾನಿ ಮೂಸಾ, ವಹೀದ್ ಮಿಯಾನ್, ಜಿಲಾನಿ ಅಫಘಾನ್, ಮುಹಮ್ಮದ್ ಜಾಮಿ, ಹಫೀಜ್ ಪಟೇಲ್, ಇನಾಯತ್ ಉರ್ ರೆಹಮಾನ್, ಮನ್ಸೂರ್ ಅಹ್ಮದ್ ಅಫಘಾನ್, ಇಬ್ರಾಹಿಂ ಗೋಗಿ, ಸಲೀಂ ಪಟೇಲ್, ಖಾಸಿಂ ಬಡೇಘರ್, ಸಲಾವುದ್ದೀನ್ ಜಾಗೀರದಾರ, ಅನ್ವರ್ ಪಟೇಲ್, ಶಫೀಕ್ ಜಮಾನ್, ಸನಾವುಲ್ಲಾ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News