ಜನಪರ ಕಾಳಜಿಯ ಪ್ರಗತಿಪರ ಆಶಯಗಳ ದೈನಿಕ - ವಾರ್ತಾಭಾರತಿ 24ನೇ ವಾರ್ಷಿಕೋತ್ಸವ ಆಚರಿಸುತ್ತಿರುವುದು ಸಂತೋಷದ ವಿಷಯ. ಅದಕ್ಕಾಗಿ ಇಡೀ ಪತ್ರಿಕಾ ಬಳಗಕ್ಕೆ ಅಭಿನಂದನೆ.

ಕಡಲತೀರ ಮಂಗಳೂರಿನಿಂದ ಆರಂಭವಾದ ಪತ್ರಿಕೆ ಐದೇ ವರ್ಷದಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಆವೃತ್ತಿ ಆರಂಭಿಸಿ ಹಂತಹಂತವಾಗಿ ಓದುಗರ ಸಂಖ್ಯೆ ಹಿಗ್ಗಿಸುತ್ತ, ಪ್ರಗತಿಪರ ಹಾಗೂ ಜನಪರ ಹೋರಾಟಗಾರರು, ಲೇಖಕರು, ರಾಜಕಾರಣಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು ಹೆಮ್ಮೆಯ ವಿಚಾರ.

‘ವಾರ್ತಾ ಭಾರತಿ’ ಪ್ರಚಲಿತದಲ್ಲಿರುವ ದೈನಿಕಗಳಿಗಿಂತ ಭಿನ್ನ. ಸುದ್ದಿ, ಲೇಖನ, ಸಂಪಾದಕೀಯ, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆಗಳಿಂದ ಬೇಗ ಆಕರ್ಷಿಸುತ್ತದೆ. ಹೊಸ ಓದುಗ ಒಂದೆರಡು ದಿನ ಓದಿದರೆ, ಅದರಲ್ಲಿನ ಬರಹಗಳ ರುಚಿಗೆ ಮನ ಸೋಲದೆ ಇರುವುದಿಲ್ಲ.

‘ವಾರ್ತಾಭಾರತಿ’ಯಲ್ಲಿ ಓದುವುದು, ತಿಳಿಯುವುದು ಸಾಕಷ್ಟಿದೆ. ನಮ್ಮ ಜ್ಞಾನ ದಿನವೂ ಹೊಸತು ಹೊಸತಾಗಿ ಚಿಗುರುತ್ತದೆ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿರುವ ಯುವಜನಾಂಗಕ್ಕಂತೂ ಈ ಪತ್ರಿಕೆ ಅಗತ್ಯ ಹೂರಣ ಒದಗಿಸುತ್ತದೆ. ವಾರದಲ್ಲಿ 16ಕ್ಕೂ ಹೆಚ್ಚು ವೈವಿಧ್ಯಮಯ ಅಂಕಣಗಳು, ಇತರೆ ಮೌಲಿಕ ಬರಹಗಳ ವಿಶ್ಲೇಷಣೆಗಳು ಮೆದುಳಿಗೆ ಮೇವು ನೀಡುತ್ತವೆ. ಹೊಸ ವಿಚಾರಗಳನ್ನು ಗ್ರಹಿಸುತ್ತ ನಮ್ಮ ಬೌದ್ಧಿಕ ಆಲೋಚನೆ ಹೆಚ್ಚಿಸಬಹುದು. ಪತ್ರಿಕೆಯ ಪುಟಗಳಲ್ಲಿ ವೈವಿಧ್ಯಮಯ ಸುದ್ದಿ, ಬರಹಗಳಿಗೆ ವಿಶೇಷ ಹೆಸರುಗಳಿವೆ. ಅವು ಆಕರ್ಷಕವೂ ಹೌದು. ಸಂಪಾದಕೀಯ ಬರಹದ ‘ವಿಚಾರ ಭಾರತಿ’ ವಿಶಿಷ್ಟ ಪುಟ. ಒಂದು ಪತ್ರಿಕೆಯ ಜೀವನಾಡಿಯೇ ಸಂಪಾದಕೀಯ ಪುಟ. ನನಗೆ ವಾರ್ತಾಭಾರತಿಯಲ್ಲಿನ ದೀರ್ಘ (ಒಂದೇ) ಸಂಪಾದಕೀಯ ಇಷ್ಟ. ಅದು ಅಷ್ಟೊಂದು ಅರ್ಥಪೂರ್ಣವಾಗಿರುತ್ತೆ. ಓದಿದ ನಂತರ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ. ಇದೇ ಪುಟದಲ್ಲಿ ‘ವಾಚಕರ ಭಾರತಿ’ಕೂಡ ಓದುಗರ ಸಮಸ್ಯೆ ವಿಚಾರಗಳಿಗೆ ತೆರೆದುಕೊಂಡಿದೆ. ಪತ್ರಿಕೆಯ ಸಂಪಾದಕೀಯ ಬರಹಗಳ ಪುಸ್ತಕವನ್ನು ಪತ್ರಿಕೆ ವ್ಯವಸ್ಥಾಪಕರು ಹೊರತಂದಿರುವುದಿಂದ ಈ ಪತ್ರಿಕೆಯ ಬದ್ಧತೆಯನ್ನು ಅದು ದಾಖಲಿಸುತ್ತದೆ. ಇದು ಪತ್ರಿಕೋದ್ಯಮ ಅಭ್ಯಾಸಿಗಳಿಗೆ ಕೈಗನ್ನಡಿಯಂತಿದೆ.

ಪತ್ರಿಕೆಯ ಸಂಪಾದಕೀಯ - ವಿಚಾರ ಭಾರತಿ ಪುಟದ ಪಕ್ಕದ ‘ವೈವಿಧ್ಯ ಭಾರತಿ’ ಪುಟ ಅಂಕಣ ಹಾಗೂ ಸಾಮಾನ್ಯ ಲೇಖನಗಳನ್ನು ಹೊತ್ತು ತರುವುದರಿಂದ ಓದುಗನಿಗೆ ಆಯ್ಕೆಯೂ ಸುಲಭವಾಗುತ್ತದೆ. ಸುದ್ದಿಗಳಿಗಾಗಿ ಪ್ರದೇಶ ಭಾರತಿ, ವಿವಿಧ ಭಾರತಿ, ವಿದೇಶ ಭಾರತಿ, ಕ್ರೀಡಾ ಭಾರತಿ ವಿಭಾಗಗಳು ಇಷ್ಟವಾಗುತ್ತವೆ. ದೈನಿಕ ಅಂಕಣಗಳಲ್ಲಿ ಬಹುತೇಕ ಬರಹಗಳು ಬಹು ದೀರ್ಘ ಅನ್ನಿಸುತ್ತದೆ. ಅಲ್ಲಿನ ವಿಚಾರಗಳಲ್ಲಿ ಶೇ. 25 ಕಡಿತ ಮಾಡಿ ಮತ್ತೊಂದು ಬರಹಕ್ಕೆ ಅನುವು ಮಾಡಿ ಕೊಡಬಹುದು. ವಾರದ ಪೂರ್ತಿ ಹರಿದು ಬರುವ ‘ಬಹುವಚನ’, ‘ಬಯಲು ಬುತ್ತಿ’, ‘ಜವಾರಿ ಮಾತು’, ‘ಅನುಗಾಲ’, ‘ನೆಲದನಿ’, ‘ಕಾಲಂ-9’, ‘ದಿಗಂತ ನೋಟ’, ’ಜನಚರಿತೆ’, ‘ಮುಟ್ಟಲಾರದವರು...’, ‘ಪಿಟ್ಕಾಯಣ’, ‘ಮನೋ ಚರಿತ್ರ’, ‘ಮನೋ ಭೂಮಿಕೆ’, ’ಪ್ರಚಲಿತ’, ’ಆನ್ ರೆಕಾರ್ಡ್’, ‘ಗಾಳಿ ಬೆಳಕು’, ‘ರಂಗ ಪ್ರಸಂಗ’ ಮೊದಲಾದ ಅಂಕಣ ಬರಹಗಳ ಗರ್ಭದಲ್ಲಿಂದ ಹೊರ ಬರುವ ವೈವಿಧ್ಯಮಯ ಬರಹಗಳು ಪತ್ರಿಕೆಯನ್ನು ಶ್ರೀಮಂತಗೊಳಿಸಿವೆ. ಎಲ್ಲವನ್ನೂ ಒಂದೇಬಾರಿ ಓದಲಾಗದಿದ್ದರೂ ಬಿಡುವು ಮಾಡಿಕೊಂಡು ಓದಬಹುದಾದ ಬರಹಗಳು ಇಲ್ಲಿವೆ. ನಾಡಿನ ಜನಪರ ಹೋರಾಟದಲ್ಲಿರುವವರು, ಹೆಸರಾಂತ ಲೇಖಕರು, ಸಮಾಜದ ಬಗ್ಗೆ ಕಾಳಜಿ ಇರುವವರು, ಬದಲಾವಣೆಗೆ ತುಡಿಯುವವರು, ಜಾತ್ಯತೀತ ಭಾವನೆ ಹೊಂದಿದವರು ಈ ಬರಹಗಳ ಹಿಂದಿನ ಶಕ್ತಿಯಾಗಿದ್ದಾರೆ. ಪತ್ರಿಕೆಯ ಬೆಳವಣಿಗೆಗೆ, ಓದುಗರ ಮನಸ್ಸಿನ ತೃಪ್ತಿಗೆ ಪ್ರಚಲಿತ ಸುದ್ದಿಯಂತೆ ಲೇಖನಗಳೂ ಅಗತ್ಯ. ಅದನ್ನು ‘ವಾರ್ತಾ ಭಾರತಿ’ ಒದಗಿಸುತ್ತಿದೆ. ನಾಲ್ಕು ಪತ್ರಿಕಾ ಆವೃತ್ತಿಗಳು ಮುಂದಿನ ದಿನಗಳಲ್ಲಿ ದ್ವಿಗುಣಗೊಂಡು, ನಾಡಿನ ಮೂಲೆಮೂಲೆಗೆ ಪ್ರಸಾರವಾಗಲಿ ಎಂದು ಆಶಿಸುವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್.ಜಿ. ಹಳ್ಳಿ ನಾಗರಾಜ

contributor

ಲೇಖಕರು