ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಇಫ್ತಾರ್ ಕೂಟ
ಮಂಗಳೂರು, ಮಾ.9: ಎಲ್ಲರ ಮನಸ್ಸು ಒಗ್ಗೂಡಿದರೆ ಸಮಾಜದಲ್ಲಿ ಶಾಂತಿ ತನ್ನಿಂದ ತಾನೆ ಬರುತ್ತದೆ ಮಾಣಿಲ ಶ್ರೀಧಾಮದ ಶ್ರೀ ಮೋಹನ್ ದಾಸ್ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ನೇತೃತ್ವದಲ್ಲಿ ನಡೆದ ಇಫ್ತಾರ್ ಸೌಹಾರ್ಧ ಕೂಟದಲ್ಲಿ ಮಾತನಾಡಿ ದರು. ಶಾಂತಿ ಸೌಹಾರ್ದತೆ ಮತ್ತು ಸಹೋದರತೆ ಎಲ್ಲರೊಂದಿಗೆ ಪ್ರತಿ ವಿಶ್ವಾಸದಿಂದ ಬಾಳಿದಾಗ ಮಾತ್ರ ಸಾಧ್ಯ ಇದಕ್ಕೆ ಇಂತಹ ಸೌಹಾರ್ಧ ಕೂಟಗಳು ಸಾಕ್ಷಿಯಾಗಲಿವೆ ಎಂದರು.
ಕಳೆದ 10 ವರ್ಷಗಳಿಂದ ಇಫ್ತಾರ್ ಕೂಟ, ದೀಪಾವಳಿ, ಕ್ರಿಸ್ಮಸ್ ಸೇರಿದಂತೆ ಎಲ್ಲ ಹಬ್ಬಗಳನ್ನು ಆಚರಿಸುವ ಐವನ್ ಡಿ ಸೋಜ ಪ್ರಯತ್ನ ಶ್ಲಾಘನೀಯ. ಅವರ ಈ ಕಾರ್ಯ ಮಾದರಿಯಾಗಿದೆ ಎಂದು ನುಡಿದರು.
ಕುದ್ರೋಳಿ ನಡುಪಳ್ಳಿ ಜುಮಾ ಮಸೀದಿಯ ರಿಯಾಜ್ ಫೈಝಿ ಕಕ್ಕಿಂಜೆ ಮಾತನಾಡಿ ಸಮಾಜದಲ್ಲಿ ಎಲ್ಲರನ್ನು ಒಗ್ಗೂಡಿಸಿದಕ್ಕೆ ನಾವು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ನುಡಿದರು.
ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ. ಜೆ.ಬಿ. ಸಲ್ದಾನಾ ಇವರು ಮಾತನಾಡಿ ಎಲ್ಲ ಧರ್ಮಗಳ ಸಾರಗಳು ಒಂದೇ ಆಗಿದ್ದು ಪ್ರತಿಯೊಬ್ಬರೂ ಎಲ್ಲ ಧರ್ಮಗಳನ್ನು ಪ್ರೀತಿಸಬೇಕು ಪರಸ್ಪರ ಪ್ರೀತಿಯ ಮೂಲಕ ಸಮಾಜನ್ನು ಗೆಲ್ಲಬಹುದು ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಮಾತನಾಡಿ ನಾವು ಎಲ್ಲ ಧರ್ಮದವರು ಒಗ್ಗಟ್ಟಾಗಿದ್ದರೆ ಮಾತ್ರ ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಯಾಗುತ್ತದೆ ಎಂದು ತಿಳಿಸಿದರು. ಮಾಜಿ ಶಾಸಕ ಕೃಷ್ಣ ಜೆ ಪಾಲೇಮಾರ್ ಶ್ಲಾಘಿಸಿದರು. ವಿಧಾನ ಪರಿಷತ್ ಐವನ್ ಡಿ ಸೋಜ ಸ್ವಾಗತಿಸಿದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಸಂಘಟನೆಯ ಪ್ರಮುಖ ಪಾತ್ರವನ್ನು ವಹಿಸಿದ ಮಹಮ್ಮದ್ ಗುಲಾಂರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಭಾಸ್ಕರ್ ಶೆಟ್ಟಿ, ರೋಹನ್ ಕಾರ್ಪೊರೇಷನ್ನ ಮುಖ್ಯಸ್ಥ ರೋಹನ್ ಮಾಂತೆರೋ, ಮೂಡಾ ಕಮಿಷನರ್ ಮುಹಮ್ಮದ್ ನಜೀರ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೈಕಲ್ ಡಿ ಸೋಜ , ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಅಹ್ಮದ್ ಮುದಾಸ್ಸರ್, ಬಿಸಿಸಿಐ ಅಧ್ಯಕ್ಷ ರಶೀದ್ ಹಾಜಿ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸರಕಾರಿ ಪ್ಲೀಡರ್ ಹಾಗೂ ಹಿರಿಯ ವಕೀಲ ಎಂ.ಪಿ. ನೊರೊನ್ಹಾ, ಜೆರೋಸಾ ಶಿಕ್ಷಣ ಸಂಸ್ಥೆಯ ಸಿಸ್ಟರ್ ಅರ್ಪಿತಾ, ಪ್ರಮುಖರಾದ ಅಬ್ದುಲ್ ಸಲೀಂ, ಶಾಹುಲ್ ಹಮೀದ್, ಸಿ.ಎಂ. ಮುಸ್ತಾಫಾ ಸುಳ್ಯ, ನಾರಾಯಣ್ ಕೋಟ್ಯಾನ್ ರಿಚರ್ಡ್ ಬೆಳಗಂ ಮತ್ತಿತರರು ಉಪಸ್ಥಿತರಿದ್ದರು.