×
Ad

ದೇರಳಕಟ್ಟೆ: "ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ ಸೀಸನ್-3” ಉದ್ಘಾಟನೆ

Update: 2026-03-09 20:30 IST

ಕೊಣಾಜೆ: ದೇರಳಕಟ್ಟೆಯ ನಿಟ್ಟೆ ಮೈದಾನದಲ್ಲಿ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವತಿಯಿಂದ ಆಯೋಜಿಸಲಾದ “ಶ್ರೀ ಎನ್.ವಿ. ಹೆಗ್ಡೆ ಸ್ಮಾರಕ ಕ್ರಿಕೆಟ್ ಟೂರ್ನಮೆಂಟ್ – ನಿಟ್ಟೆ ಫಿಸಿಯೋ ಪ್ರೀಮಿಯರ್ ಲೀಗ್ ಸೀಸನ್-3” ಅಂತರ್ ಕಾಲೇಜು ದಕ್ಷಿಣ ಭಾರತ ಮಟ್ಟದ ಫಿಸಿಯೋಥೆರಪಿ ಕ್ರಿಕೆಟ್ ಚಾಂಪಿಯನ್‌ಶಿಪ್‌ ಅನ್ನು ಭಾರತೀಯ ಕ್ರಿಕೆಟಿಗ ಶಿಖರ್ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿ ಭಾರತೀಯ ಕ್ರಿಕೆಟ್‌ನಲ್ಲಿ ಯುವ ಆಟಗಾರರಿಗೆ ಅವಕಾಶ ದೊರಕಲು ರಾಜ್ಯ ಮಟ್ಟದ ಟೂರ್ನಮೆಂಟ್‌ಗಳು ಬಹಳ ಮುಖ್ಯ. ಕರ್ನಾಟಕದಲ್ಲಿ ನಡೆಯುವ ನಂದಿ ಟ್ರೋಫಿ ಸ್ಪರ್ಧೆಗಳು ಯುವ ಪ್ರತಿಭೆಗಳನ್ನು ಗುರುತಿಸಿ ದೊಡ್ಡ ಮಟ್ಟದ ಕ್ರಿಕೆಟ್‌ಗೆ ದಾರಿ ತೋರಿಸುತ್ತವೆ. ನಾನು ಕೂಡ ಇಂತಹ ಟೂರ್ನಮೆಂಟ್‌ಗಳ ಮೂಲಕವೇ ಮುಂದಿನ ಹಂತಕ್ಕೆ ಸಾಗುವ ಅವಕಾಶ ಪಡೆದೆ. ವಿದ್ಯಾರ್ಥಿಗಳು ಕ್ರೀಡೆಯ ಜೊತೆಗೆ ಶಿಸ್ತಿನ ಅಭ್ಯಾಸ, ತಂಡದ ಮನೋಭಾವ ಮತ್ತು ನಿರಂತರ ಅಭ್ಯಾಸವನ್ನು ಬೆಳೆಸಿದರೆ, ಭವಿಷ್ಯದಲ್ಲಿ ರಾಜ್ಯ ಹಾಗೂ ದೇಶದ ಪರವಾಗಿ ಆಡಲು ಸಾಧ್ಯವಾಗುತ್ತದೆ ಎಂದರು.

ಗೌರವ ಅತಿಥಿಗಳಾಗಿ ಸಹಕುಲಾಧಿಪತಿ (ಆಸ್ಪತ್ರೆ ಆಡಳಿತ ಮತ್ತು ಪಿಜಿ ಅಧ್ಯಯನ) ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ ಮಾತನಾಡಿ ಸಂಸ್ಥೆಯ ಸ್ಥಾಪಕರು ಅಗಲಿದ ನಂತರ ಅವರ ಸ್ಮರಣಾರ್ಥ ಈ ಟೂರ್ನಮೆಂಟ್ ಆಯೋಜಿಸಿರು ವುದು ತುಂಬಾ ಅರ್ಥಪೂರ್ಣವಾಗಿದೆ. ತುಂಬಾ ನೋವಿನ ನಡುವೆಯೂ ಅವರ ಹೆಸರಿನಲ್ಲಿ ಈ ಟೂರ್ನಮೆಂಟ್‌ಗೆ ಹೆಸರು ನೀಡಿ ಅವರ್ ಇಚ್ಛೆಯಂತೆ ಇಷ್ಟದ ಕ್ರಿಕೆಟ್ ಆಯೋಜಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಫಿಸಿಯೋಥೆರಪಿ ವಿಭಾಗ ಪಂದ್ಯಾಟಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ದಕ್ಷಿಣ ಭಾರತದ ವಿವಿಧ ಕಾಲೇಜುಗಳ ಕ್ರೀಡಾಪಟುಗಳನ್ನು ಒಂದೇ ವೇದಿಕೆಗೆ ತರಲು ಈ ರೀತಿಯ ಟೂರ್ನಮೆಂಟ್‌ಗಳು ಉತ್ತಮ ಅವಕಾಶ ಒದಗಿಸುತ್ತವೆ. ಯುವ ಪ್ರತಿಭೆಗಳು ಇಂತಹ ಸ್ಪರ್ಧೆಗಳ ಮೂಲಕವೇ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೀಗ ಭಾರತದಲ್ಲಿ ಕ್ರಿಕೆಟ್ ಜ್ವರ ಹೆಚ್ಚಾಗಿದೆ. ಇತ್ತೀಚೆಗೆ ನಡೆದ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದು, ನಿನ್ನೆ ನಡೆದ ಪಂದ್ಯದಲ್ಲಿಯೂ ಜಯ ಸಾಧಿಸಿರುವುದು ಕ್ರೀಡಾಭಿಮಾನಿಗಳಿಗೆ ಮತ್ತಷ್ಟು ಉತ್ಸಾಹ ತಂದಿದೆ ಎಂದು ಹೇಳಿದರು.

ಉಪಕುಲಪತಿ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ , ನಿಟ್ಟೆ ಸೆಟಲೈಟ್ ಸೆಂಟರ್ ನ ಉಪಾಧ್ಯಕ್ಷ ಡಾ.ಸತೀಶ್ ಕುಮಾರ್ ಭಂಡಾರಿ, ಕ್ಷೇಮ ಡೀನ್ ಡಾ. ಸಂದೀಪ್ ರೈ, ಡೀನ್ ಜಯಪ್ರಕಾಶ್ ಉಪಸ್ಥಿತರಿದ್ದರು. ಟೂರ್ನಮೆಂಟ್‌ನ್ನು ಆಯೋಜನಾ ಅಧ್ಯಕ್ಷ ಹಾಗೂ ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಪ್ರೊ. ಡಾ. ಧನೇಶ್ ಕುಮಾರ್ ಕೆ.ಯು. ಸ್ವಾಗತಿಸಿದರು. ಆಯೋಜನಾ ಕಾರ್ಯದರ್ಶಿ ಜಯೇಶ್ ಚಂದ್ರನ್ ವಂದಿಸಿದರು.

‘ಗಣ್ಯರು ಕ್ರೀಡೆ ವಿದ್ಯಾರ್ಥಿಗಳಲ್ಲಿ ತಂಡಭಾವನೆ, ಶಿಸ್ತು ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸು ತ್ತದೆ ಎಂದು ಅಭಿಪ್ರಾಯಪಟ್ಟರು. ನಿಟ್ಟೆ ವಿಶ್ವವಿದ್ಯಾಲಯದ ಸಲಹೆಗಾರ ವಿನಯ ಹೆಗ್ಡೆ ಅವರ ದೃಷ್ಟಿಯಿಂದ ದಕ್ಷಿಣ ಭಾರತದ ಕ್ರೀಡಾಪಟುಗಳನ್ನು ಒಂದೇ ವೇದಿಕೆಗೆ ತರಬೇಕೆಂಬ ಉದ್ದೇಶದಿಂದ ಈ ಟೂರ್ನಮೆಂಟ್ ಆರಂಭಿಸಲಾಗಿದೆ.

ಕ್ರಿಕೆಟ್ ಮೇಲಿನ ಅಪಾರ ಆಸಕ್ತಿ ಮತ್ತು ಕ್ರೀಡಾಭಿಮಾನವನ್ನು ಸ್ಮರಿಸಿ ಈ ಟೂರ್ನಮೆಂಟ್‌ಗೆ ಶ್ರೀ ಎನ್.ವಿ. ಹೆಗ್ಡೆ ಸ್ಮಾರಕ ಎಂದು ಹೆಸರಿಡಲಾಗಿದೆ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಈ ಪಂದ್ಯಾವಳಿಯಲ್ಲಿ ಈ ಬಾರಿ ದಕ್ಷಿಣ ಭಾರತದ ವಿವಿಧ ಫಿಸಿಯೋಥೆರಪಿ ಕಾಲೇಜುಗಳಿಂದ ಒಟ್ಟು 16 ತಂಡಗಳು ಭಾಗವಹಿಸುತ್ತಿವೆ’ .

-ಪ್ರೊ. ಡಾ. ಧನೇಶ್ ಕುಮಾರ್ ಕೆ.ಯು., ಆಯೋಜಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News