×
Ad

ಕ್ಯಾಂಪ್ಕೋ ಸಂಸ್ಥೆಗೆ 51.85 ಕೋಟಿ ರೂ. ಲಾಭ: ಕಿಶೋರ್ ಕುಮಾರ್ ಕೊಡ್ಗಿ

51ನೇ ವಾರ್ಷಿಕ ಮಹಾಸಭೆ

Update: 2025-09-13 19:43 IST

ಮಂಗಳೂರು, ಸೆ.13: ಪ್ರತಿಷ್ಠಿ ಕ್ಯಾಂಪ್ಕೋ ಸಂಸ್ಥೆ 2024-25ನೇ ಸಾಲಿನಲ್ಲಿ 3,632 ಕೋಟಿ ರೂ.ಗಳ ವಹಿವಾಟು ನಡೆಸಿ 51.85 ಕೋಟಿ ರೂ ಲಾಭ ದಾಖಲಿಸಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.

ಮಂಗಳೂರು ಹೊರ ವಲಯದ ಅಡ್ಯಾರು ಗಾರ್ಡನ್‌ನಲ್ಲಿ ಶನಿವಾರ ನಡೆದ 51ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು

ಸದಸ್ಯ ಗ್ರಾಹಕರಿಗೆ ಶೇ.8 ಲಾಭಾಂಶ ನೀಡಲಾಗುವುದು ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾಹಿತಿ ನೀಡಿದರು.

ಸದಸ್ಯ ಗ್ರಾಹಕರಿಗೆ ಅಡಕೆ ಕೇಜಿಗೆ 2 ರೂ, ಕೊಕ್ಕೋ ಹಸಿ ಬೀಜ ಕೇಜಿಗೆ 4 ರೂ. ಮತ್ತು ಒಣ ಕೋಕ್ಕೋ ಕೇಜಿಗೆ 6 ರೂ.ನಂತೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಕ್ಯಾಂಪ್ಕೋ ಸಿಬ್ಬಂದಿಗೆ ಶೇ.14ರ ಉದಾರ ಭತ್ಯೆ ನೀಡಲು ಸಮ್ಮತಿಸಲಾಗಿದೆ ಎಂದರು.

ಕ್ಯಾಂಪ್ಕೊ 2,825.77 ಕೋಟಿ ರೂ. ಮೌಲ್ಯದ 65,675.39 ಮೆಟ್ರಿಕ್ ಟನ್ ಅಡಕೆ ಮಾರಾಟ ಮಾಡಿದೆ ಎಂದರು.

ಸಾವಯವ ಗೊಬ್ಬರ: ಅಡಕೆ ಬೆಳೆೆಗಾರರಿಗೆ ಅನುಕೂಲವಾಗಲು ಅಂತರ್‌ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಸಾವಯವ ಗೊಬ್ಬರ ಉತ್ಪಾದನೆಗೆ ಮುಂದಾಗಿದೆ.

ಕೃಷಿಕರಿಗೆ ಬೇಕಾದ ಪೋಷಕಾಂಶ ಗೊಬ್ಬರಗಳ ಕಚ್ಚಾವಸ್ತುಗಳನ್ನು ಪ್ರಸಕ್ತ ಕ್ಯಾಂಪ್ಕೋ ಹೊರಗಿನಿಂದ ಖರೀದಿಸಿ ಕ್ಯಾಂಪ್ಕೊ ಬ್ರ್ಯಾಂಡ್‌ನ ಲ್ಲಿ ನೀಡುತ್ತಿದೆ. ಇನ್ನು ಮುಂದೆ ಸ್ವತಃ ಕ್ಯಾಂಪ್ಕೋ ಸಂಸ್ಥೆ ಸಾವಯವ ಗೊಬ್ಬರ ಉತ್ಪಾದಿ ಸುವ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಚಿತ್ರದುರ್ಗದ ಹಿರಿಯೂರಿನಲ್ಲಿ 18 ಎಕರೆ ಜಾಗ ಖರೀದಿಗೆ ನಿರ್ಧರಿ ಸಿದೆ ಎಂದು ತಿಳಿಸಿದರು.

ಅಡಕೆ ಅಡಮಾನ ಯೋಜನೆ: ಸದಸ್ಯ ಗ್ರಾಹಕರು ಅಡಕೆಯನ್ನು 2 ಕ್ವಿಂಟಾಲ್ ವರೆಗೆ ಅಡಮಾನವಾಗಿ ಕ್ಯಾಂಪ್ಕೋ ದಲ್ಲಿ ಇರಿಸಲು ಅವಕಾಶ ಇದೆ. ಹಿಂದೆ ಇದು 10 ಕ್ವಿಂಟಾಲ್ ಮಿತಿಯನ್ನು ಹೊಂದಿತ್ತು. ಸಾಮಾನ್ಯ ಅಡಕೆ ಬೆಳೆಗಾರ ರಿಗೆ ಅನುಕೂಲವಾಗಲು ಅದನ್ನು ಈಗ 200 ಕಿಲೋಗೆ ಮಿತಿ ನಿಗದಿಪಡಿಸಲಾಗಿದೆ. ಧಾರಣೆ ಹೆಚ್ಚಳವಾದಾಗ ಅಥವಾ ತಮಗೆ ಬೇಕೆನಿಸಿದಾಗ ಆ ಅಡಕೆಯನ್ನು ಮಾರಾಟ ಮಾಡಲು ಅವಕಾಶ ಇದೆ. ನೈಟ್ರೋಜನ್ ಸ್ಟೋರೇಜ್ ವ್ಯವಸ್ಥೆ ಮೂಲಕ ಅಡಕೆ ದಾಸ್ತಾನು ಹಾಗೂ ಅಡಮಾನ ಸೌಲಭ್ಯವನ್ನು ಎಲ್ಲ ಶಾಖೆಗಳಿಗೆ ವಿಸ್ತರಿಸಲು ಚಿಂತಿಸಲಾಗಿದೆ ಎಂದರು.

* ತೇವಾಂಶ ಅಧ್ಯಯನ: ಪ್ರಸಕ್ತ ಅಡಿಕೆಗೆ ಇರುವ ಶೇ.7.1ರ ತೇವಾಂಶ ಪ್ರಮಾಣವನ್ನು ಶೇ.11ರ ವರೆಗೆ ನಿಗದಿಪಡಿಸುವುದಕ್ಕೆ ಸಂಬಂಧಿಸಿ ಅಡಿಕೆ ಮಹಾಮಂಡಲ 14.84 ಲಕ್ಷ ರೂ. ಮೊತ್ತವನ್ನು ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ(ಸಿಪಿಸಿಆರ್‌ಐ) ಬಿಡುಗಡೆ ಮಾಡಿದೆ. ದೇಶ, ವಿದೇಶಗಳಿಂದ ನಾನಾ ವಿಧದ ತಲಾ 5 ಕಿಲೋ ಅಡಕೆಯ ಸ್ಯಾಂಪಲ್‌ನ್ನು ತರಿಸಿಕೊಂಡು ಸಿಪಿಸಿಆರ್‌ಐಗೆ ನೀಡಿದೆ. ಅದು ಶೀಘ್ರವೇ ಅಧ್ಯಯನ

ನಡೆಸಿ ಅಡಕೆಯಲ್ಲಿನ ಈಗಿನ ತೇವಾಂಶ ಪ್ರಮಾಣದ ಬಗ್ಗೆ ಸಂಶೋಧನಾ ವರದಿಯನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಸಲ್ಲಿಸಲಿದೆ ಎಂದು ಮಾಹಿತಿ ನೀಡಿದರು.

ಕೃಷಿಕರಿಗೆ ನೆರವಾಗಲು ಕ್ಯಾಂಪ್ಕೊ ವತಿಯಿಂದ ಪುತ್ತೂರಿನಲ್ಲಿ ಅತ್ಯಾಧುನಿಕ ಮಾದರಿಯ ಮಣ್ಣು ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಇದನ್ನು ಕ್ಯಾಂಪ್ಕೊದ ಎಲ್ಲ ಶಾಖೆಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.

ಜಿಎಸ್ಟಿ ತೆರಿಗೆ ಇಳಿಕೆಗೆ ಪ್ರಯತ್ನ: ಅಡಕೆ ಮೇಲೆ ಕೇಂದ್ರ ಸರ್ಕಾರ ಶೇ.18ರ ಜಿಎಸ್ಟಿ ತೆರಿಗೆ ವಿಧಿಸುತ್ತಿದೆ. ಇದನ್ನು ಶೇ 5ಕ್ಕೆ ಇಳಿಕೆ ಮಾಡುವಂತೆ ಕೇಂದ್ರ ಹಣಕಾಸು ಸಚಿವರನ್ನು ಕ್ಯಾಂಪ್ಕೊ ನಿಯೋಗ ಜನಪ್ರತಿನಿಧಿಗಳ ಜೊತೆ ತೆರಳಿ ಮನವರಿಕೆ ಮಾಡಿದೆ. ಆದರೆ ಇತ್ತೀಚೆಗೆ ನಡೆದ ಜಿಎಸ್ಟಿ ಸಭೆಯಲ್ಲಿ ಈ ತೆರಿಗೆ ಇಳಿಕೆ ಮಾಡಿಲ್ಲ. ಹಾಗಾಗಿ ಮತ್ತೊಮ್ಮೆ ವಿತ್ತ ಸಚಿವರ ಮೇಲೆ ಒತ್ತಡ ತರುವ ಅನಿವಾರ್ಯತೆ ಇದೆ. ದುಬಾರಿ ಜಿಎಸ್ಟಿ ತೆರಿಗೆಯಿಂದಾಗಿ ಅಡಕೆ ಬೆಳೆಗಾರರಿಗೆ ದರದಲ್ಲಿ ಹೊಡೆತ ಉಂಟಾಗುತ್ತಿದೆ ಎಂದು ಅವರು ಹೇಳಿದರು.

ಕ್ಯಾಂಪ್ಕೋ ತನ್ನದೇ ಆದ ಆ್ಯಪ್‌ನ ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ಮಾರ್ಚ್ ವೇಳೆಗೆ ಸದಸ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಅದರಲ್ಲಿ ಕ್ಯಾಂಪ್ಕೋ ಉತ್ಪನ್ನಗಳ ದೈನಂದಿನ ಧಾರಣೆ, ಷೇರು ಮಾರುಕಟ್ಟೆ ವಿವರಗಳು ಅಪ್ಡೇಟ್ ಆಗಲಿವೆ ಎಂದರು.

*ಕೊಳೆರೋಗ ಪರಿಹಾರಕ್ಕೆ ಮನವಿ: ಅಡಕೆ ಬೆಳೆಗೆ ಕೊಳೆರೋಗ ಮಾತ್ರವಲ್ಲ ಮಹಾಳಿ, ಎಲೆಚುಕ್ಕಿ ಮುಂತಾದ ರೋಗಗಳು ಬಾಧಿಸಿ ಬೆಳೆಗಾರರು ಕಂಗೆಟ್ಟಿದ್ದಾರೆ. ಈ ಬಾರಿ ಕೊಳೆರೋಗ ವ್ಯಾಪಕವಾಗಿ ಕಂಡುಬಂದಿದ್ದು,ಶೇ.40 ರ ವರೆಗೂ ಫಸಲು ನಷ್ಟ ಹೇಳಲಾಗುತ್ತಿದೆ. ಆದ್ದರಿಂದ ಅಡಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸಲಾಗಿದೆ ಎಂದು ವಿವರಿಸಿದರು.

*ಪಾನ್‌ಮಸಾಲದಲ್ಲಿ ಶೇ 96 ಅಡಕೆ: ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಸರಿಯಲ್ಲ. ಅದನ್ನು ಸರಿಪಡಿಸಲು ಸರಿಯಾದ ದಾಖಲೆಗಳನ್ನು ಒದಗಿಸಲು ಸಿಪಿಸಿಆರ್‌ಐ ಸೇರಿದಂತೆ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಸಂಶೋಧನೆ ನಡೆಯುತ್ತಿದೆ. ಪಾನ್‌ಮಸಾಲೆ (ಗುಟ್ಕಾ-ತಂಬಾಕು ಅಲ್ಲ)ದಲ್ಲಿ ಶೇ 96ರಷ್ಟು ಅಡಕೆಯೇ ಇದೆ. ಉಳಿದ ಶೇ 4 ಭಾಗ ಇತರೆ ಉತ್ಪನ್ನಗಳ ಮಿಶ್ರಣ ಇದೆ. ಇದು ಆರೋಗ್ಯಕ್ಕೆ ಹಾನಿಕಾರಕ ಅಲ್ಲ. ಇದೇ ವೇಳೆ ಪಾನ್‌ಮಸಾಲೆ ಮೇಲಿನ ಜಿಎಸ್ಟಿಯನ್ನು ಶೇ 28ರಿಂದ ಶೇ40ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಭವಿಷ್ಯದಲ್ಲಿ ಅಡಕೆ ಉತ್ಪನ್ನಗಳಿಗೂ ಹೊಡೆತ ಬೀಳುವ ಸಾಧ್ಯತೆ ಇದೆ ಎಂದರು.

ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣ ಪ್ರಸಾದ್ ಮಡ್ತಿಲ, ಶಂಭುಲಿಂಗ ಜಿ.ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ್ ಪಟ್ಟಾಜೆ, ಎಂ.ಮಹೇಶ್ ಚೌಟ, ರಾಘವೇಂದ್ರ ಭಟ್ ಪಿ., ಜಯಪ್ರಕಾಶ್ ನಾರಾಯಣ, ರಾಧಾಕೃಷ್ಣನ್, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ರಾಘವೇಂದ್ರ ಎಚ್.ಎಂ., ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ, ಪ್ರಧಾನ ವ್ಯವಸ್ಥಾಪಕ ರೇಷ್ಮಾ ಮಲ್ಯ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News