ಜು.14: ಮರಳು ನೀತಿ, ಕೆಂಪು ಕಲ್ಲು ಪರವಾನಗಿ ನಿಯಮ ಸಡಿಲಿಕೆ ಆಗ್ರಹಿಸಿ ಪ್ರತಿಭಟನೆ
ಉಳ್ಳಾಲ: ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ಕೆಂಪುಕಲ್ಲು ಕೋರೆ ಹಾಗೂ ಮರಳು ಸರಬರಾಜು ಸಂಪೂರ್ಣ ಸ್ಥಬ್ಧಗೊಂಡ ಪರಿಣಾಮ, ಜನಸಾಮಾನ್ಯರು, ಕೂಲಿಕಾರ್ಮಿಕರು, ಕಟ್ಟಡ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರಕಾರದ ಕಠಿಣ ನಿಯಮಗಳಿಂದ ಜನಸಾಮಾನ್ಯರು ತೊಂದರೆ ಎದುರಿಸುವಂತಾಗಿದ್ದು, ಈ ಹಿನ್ನೆಲೆಯಲ್ಲಿ ಜು.14ರಂದು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಬಿಜೆಪಿ ಪ್ರತಿಭಟನೆ ನಡೆಸಲಿದ್ದು, ಅಂದು ಬೆಳಿಗ್ಗೆ 10ಕ್ಕೆ ತೊಕ್ಕೊಟ್ಟು ಪ್ಲೈ ಓವರ್ ಕೆಳಭಾಗದಲ್ಲಿ ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ, ಮರಳು ಮತ್ತು ಕೆಂಪುಕಲ್ಲು ವಿಚಾರದಲ್ಲಿ ನಿಯಮ ಸರಳೀಕರಣಕ್ಕೆ ಆಗ್ರಹಿಸಿ ಜನಾಕ್ರೋಶ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಹೇಳಿದರು.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ಶನಿವಾರದಂದು ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಚುನಾವಣೆ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷವು ಸರಳ ಮರಳು ನೀತಿಯನ್ನು ಜಾರಿಗೊಳಿ ಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದರೂ ಅದನ್ನು ಈ ವರೆಗೂ ಈಡೇರಿಸಿಲ್ಲ. ಜಿಲ್ಲೆಯಲ್ಲಿ ಘಟಾನು ಗಟಿ ರಾಜಕೀಯ ನಾಯಕರಿದ್ದರೂ ಮರಳು ಮತ್ತು ಕೆಂಪು ಕಲ್ಲಿನ ಸಮಸ್ಯೆಯನ್ನು ಕಾನೂನು ರೀತಿ ಪರಿಹರಿಸದ್ದು ದುರದೃಷ್ಟ.ಕೆಂಪು ಇಟ್ಟಿಗೆ ಕಲ್ಲು ತೆಗೆಯುವ ಉದ್ಯಮಿಗೆ ಪಂಚಾಯತ್ ಮಟ್ಟದಲ್ಲಿ ಪರವಾ ನಿಗೆ ಸಿಗುವಂತ ನಿಟ್ಟಿನಲ್ಲಿ ನಿಬಂಧನೆಗಳನ್ನು ಸರಳೀಕರಣಗೊಳಿಸಬೇಕಿದೆ. ಇದರಿಂದ ರಾಜಧನ ಸಂಗ್ರಹದ ಮೂಲಕ ಸರಕಾರಕ್ಕೆ ದೊಡ್ಡ ಮೊತ್ತದ ಆದಾಯ ಬರುತ್ತದೆ.ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟು ಸೋಮವಾರ ಪ್ರತಿಭಟನೆ ನಡೆಯಲಿದೆ ಎಂದರು.
ಬಿಜೆಪಿ ಮಂಗಳೂರು ಮಂಡಲ ರೈತ ಮೋರ್ಚದ ಪ್ರಧಾನ ಕಾರ್ಯದರ್ಶಿ ರವಿ ರೈ ಪಜೀರು ಮಾತನಾಡಿ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಜಿಲ್ಲೆಯಲ್ಲಿ 3ಎ ಅಡಿ 257 ಕೆಂಪು ಕಲ್ಲಿನ ಪರವಾನಿಗೆ ಇತ್ತು.ಈಗ ಊರ್ಜಿತವಾಗಿ ಜಿಲ್ಲೆಯಲ್ಲಿ ಕೆಂಪು ಕಲ್ಲಿಗೆ ಕೇವಲ ನಾಲ್ಕು ಪರವಾನಿಗೆ ಇದೆ.ಯಾಕೆಂದರೆ ಕಳೆದ 2024 ರಲ್ಲಿ 3ಎ ಪರವಾನಿಗೆಯಲ್ಲಿ ಹೊಸ ನಿಯಾಮವಳಿಯನ್ನ ರಾಜ್ಯ ಸರಕಾರ ತಂದ ಕಾರಣ ಈಗ ಯಾವುದೇ ಪರವಾನಿಗೆ ಆಗುತ್ತಿಲ್ಲ. ಬಿಜೆಪಿ ಸರಕಾರ ಇದ್ದಾಗ 3ಎ ಪರವಾನಿಗೆಗೆ ಒಂದು ಟನ್ ಕೆಂಪು ಮುರ ಇಟ್ಟಿಗೆ ಪೂರೈಕೆಗೆ ಕೇವಲ 72 ರೂಪಾಯಿ ರಾಜಧನ ಸಂದಾಯ ಮಾಡಬೇಕಿತ್ತು.ಈಗ ಒಂದು ಟನ್ಗೆ 2ಡಿ ಒಳಪಟ್ಟು 282 ರೂಪಾಯಿ ರಾಜಧನ ನೀಡಬೇಕಿದೆ.
ನಮ್ಮ ಜಿಲ್ಲೆಯ ಪಕ್ಕದ ಕೇರಳ ರಾಜ್ಯದಲ್ಲಿ ಒಂದು ಟನ್ಗೆ ಕೇವಲ 32 ರೂಪಾಯಿ ರಾಜಧನ ಇದೆ.ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಸುಮಾರು ಒಂಭತ್ತು ಪಟ್ಟು ಜಾಸ್ತಿ ರಾಜಧನ ತೆರಬೇಕಿದೆ.ಜಿಲ್ಲೆಗೆ ತಾಗಿ ಕೊಂಡಿರುವ ಕೇರಳದಿಂದ ದಿನಕ್ಕೆ ಸುಮಾರು ಇಪ್ಪತ್ತೈದು ಸಾವಿರಕ್ಕೂ ಅಧಿಕ ಟನ್ ಕೆಂಪು ಮುರ ಇಟ್ಟಿಗೆ ಮಂಗಳೂರಿಗೆ ಆಮದು ಆಗುತ್ತಿದ್ದು,ನಮಗೆ ಇಲ್ಲಿ ಇಷ್ಟೊಂದು ರಾಜಧನ ಕಟ್ಟಿ ಕೇರಳದವರೊಂದಿಗೆ ಪೈಪೋಟಿ ನಡೆಸಿ ವ್ಯವಹಾರ ನಡೆಸಲು ಆಗುತ್ತಿಲ್ಲ.ಜನಸಾಮಾನ್ಯರ ಕಷ್ಟವನ್ನು ಅರಿಯದೆ ರಾಜ್ಯ ಸರಕಾರವು ತೆರಿಗೆ ದುಪ್ಪಟ್ಟು ಏರಿಸಿ ತೊಂದರೆ ನೀಡುತ್ತಿದೆ.ಕಳೆದ ಒಂದು ವರುಷದಿಂದ ಗಣಿ ಇಲಾಖೆ ಸಚಿವರು ಮತ್ತು ಸಂಬಂಧಿಸಿದ ಅಧಿಕಾರಿಗಳಲ್ಲಿ 3ಎ ಪರವಾನಿಗೆಯನ್ನ ಸರಳೀಕರಣಗೊಳಿಸುವಂತೆ ಮನವಿ ಮಾಡುತ್ತಾ ಬಂದಿದ್ದು,ಈ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ ತಾಳಿದೆ.ಪರವಾನಿಗೆ ಇಲ್ಲದೆಯೇ ಕೆಲವರು ಕೆಂಪು ಮುರ ಇಟ್ಟಿಗೆ ವ್ಯವಹಾರ ಮಾಡುತ್ತಿದ್ದರು.ಅಧಿಕಾರಿಗಳು ಇಂತಹ ಅನಧಿಕೃತ ಕೋರೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ನಮಗೂ ಇಲ್ಲಿ ತಕ್ಷಣಕ್ಕೆ ಕೆಂಪು ಮುರ ಇಟ್ಟಿಗೆ ಪರವಾನಿಗೆ ಸಿಗದೇ ಇರುವುದರಿಂದ ದುಡಿಯುವ ವರ್ಗದವರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಪ್ರಧಾನಕಾರ್ಯದರ್ಶಿಗಳಾದ ಮೋಹನ್ ರಾಜ್.ಕೆ.ಆರ್ ,ದಯಾನಂದ ತೊಕ್ಕೊಟ್ಟು,ಮಂಡಲ ಕಾರ್ಯದರ್ಶಿ ರಮೇಶ್ ಬೆದ್ರೋಳಿಕೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.