×
Ad

ಧರ್ಮಸ್ಥಳ 'ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ನಗರ': ಸಚಿವ ಈಶ್ವರ್ ಖಂಡ್ರೆ ಘೋಷಣೆ

Update: 2024-02-05 14:36 IST

ಬೆಳ್ತಂಗಡಿ, ಫೆ.5: ಪ್ಲಾಸ್ಟಿಕ್ ಅತ್ಯಂತ ಅಪಾಯಕಾರಿ ತ್ಯಾಜ್ಯವಾಗಿದ್ದು, ಅದರಿಂದ ಪರಿಸರವನ್ನು ರಕ್ಷಿಸುವ ಅಗತ್ಯವಿದೆ. ಅದಕ್ಕಾಗಿ ರಾಜ್ಯದಲ್ಲಿ ಧರ್ಮಸ್ಥಳ ಸಹಿತ ಐದು ನಗರಗಳನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ನಗರಗಳೆಂದು ರಾಜ್ಯ ಸರಕಾರ ಗುರುತಿಸಿದೆ. ಈ ನಗರಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಸರಕಾರ ಸ್ಥಳೀಯಾಡಳಿತಗಳು ಹಾಗೂ ಜನರು ಒಟ್ಟಾಗಿ ಪ್ರಯತ್ನಿಸುವ ಅಗತ್ಯವಿದೆ ಎಂದು ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸೋಮವಾರ ಧರ್ಮಸ್ಥಳವನ್ನು 'ಏಕಬಳಕೆಯ ಪ್ಲಾಸ್ಟಿಕ್ ಮುಕ್ತ ನಗರ' ಎಂದು ಘೋಷಿಸಿ ಮಾತನಾಡುತ್ತಿದ್ದರು.

ಲಕ್ಷಾಂತರ ಭಕ್ತರು ಆಗಮಿಸುವ ಶ್ರೀ ಕ್ಷೇತ್ರ ಧರ್ಮಸ್ಥಳವು ಪವಿತ್ರ ನಗರವಾಗಿ ಉಳಿಯಬೇಕು ಎಂಬ ಗುರಿಯೊಂದಿಗೆ ಧರ್ಮಸ್ಥಳವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ನಗರವೆಂದು ಘೋಷಿಸಲಾಗಿದೆ. ಸರಕಾರಗಳು ಕಾನೂನುಗಳನ್ನು ಮಾಡಬಹುದು. ಆದರೆ ಜನರು ಜಾಗೃತರಾಗದ ಹೊರತು ಅವು ಸಮರ್ಪಕ ಅನುಷ್ಠಾನವಾಗಲು ಸಾಧ್ಯವಿಲ್ಲ. ಆದ್ದರಿಂದ ಧರ್ಮಸ್ಥಳ ತ್ಯಾಜ್ಯಮುಕ್ತ  ಕ್ಷೇತ್ರವನ್ನಾಗಿ ರೂಪಿಸಲು ಭಕ್ತರು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸ್ವಚ್ಛವಾಗಿರಿಸಲು ಕ್ಷೇತ್ರದ ವತಿಯಿಂದ, ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಇದರಿಂದಾಗಿಯೇ ಕ್ಷೇತ್ರಕ್ಕೆ ಅತ್ಯಂತ ಸ್ವಚ್ಛ ದಾರ್ಮಿಕ ನಗರ ಎಂಬ ಪ್ರಶಸ್ತಿಯೂ ಲಭಿಸಿದೆ. ಇದೀಗ ಪ್ಲಾಸ್ಟಿಕ್ ಮುಕ್ತ ನಗರವೆಂದು ರಾಜ್ಯ ಸರಕಾರ ಘೋಷಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ಷೇತ್ರದಲ್ಲಿನ ತ್ಯಾಜ್ಯಗಳನ್ನು ಮರುಬಳಕೆ ಮಾಡುವ ದೃಷ್ಟಿಯಿಂದ ವಿಶೇಷ ಯಂತ್ರಗಳನ್ನು ತರಿಸಲಾಗುತ್ತಿದ್ದು, ಪ್ಲಾಸ್ಟಿಕ್ ಸೇರಿದಂತೆ ಎಲ್ಲ ತ್ಯಾಜ್ಯಗಳನ್ನು ಇಲ್ಲಿ ಯಾವುದಾದರೂ ರೂಪದಲ್ಲಿ ಮರುಬಳಕೆ ಮಾಡಲಾಗುವುದು ಎಂದರು.

ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸರಾವ್ ಮಾತನಾಡಿ, ಧರ್ಮಸ್ಥಳವನ್ನು ಏಕಬಳಕೆಯ ಪ್ಲಾಸ್ಟಿಕ್ ಮುಕ್ತವಾಗಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಪಂನಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ವಿಮಲಾ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಜಿಪಂ ಉಪ ಕಾರ್ಯದರ್ಶಿ ಡಾ,ರಘು ಹಾಗೂ ಇತರರು ಉಪಸ್ಥಿತರಿದ್ದರು.

ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಸಚಿವರನ್ನು ಕ್ಷೇತ್ರದ ಪರವಾಗಿ ಸ್ವಾಗತಿಸಲಾಯಿತು. ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಜೆ ಸಲ್ಲಿಸಿದ ಸಚಿವರು, ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News