×
Ad

ದಂಡಪಾಳ್ಯ ಗ್ಯಾಂಗ್‌ನಿಂದ ಜೋಡಿ ಕೊಲೆ ಪ್ರಕರಣ| ಲೇಡಿ ಕಾನ್‌ಸ್ಟೆಬಲ್ ಲಲಿತಾ ಶ್ರಮ ಮಹತ್ತರವಾದುದು: ಕಮಿಷನರ್‌

Update: 2026-01-24 19:07 IST

ಮಂಗಳೂರು, 24: ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 27 ವರ್ಷ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್‌ನ ಆರೋಪಿಯನ್ನು ಬಂಧಿಸುವಲ್ಲಿ ಉರ್ವಾ ಠಾಣೆಯ ಪೊಲೀಸರ ತಂಡದಲ್ಲಿ ಲೇಡಿ ಕಾನ್‌ಸ್ಟೆಬಲ್ ಲಲಿತಾ ಶ್ರಮ ಮಹತ್ತರವಾದುದು ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

ಹೆಸರು, ವಿಳಾಸ ಬದಲಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿ ಬಂಧನದ ಕುರಿತಂತೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಆರೋಪಿ ಚಿಕ್ಕ ಹನುಮಂತಪ್ಪ ಹೆಸರು, ವಿಳಾಸ ಬದಲಾಯಿಸಿಕೊಂಡು ಆಂಧ್ರದಲ್ಲಿ ಬೇರೆ ಕುಟುಂಬ ಮಾಡಿಕೊಂಡು ಮಕ್ಕಳೊಂದಿಗೆ ನೆಲೆಸಿದ್ದ. ಜಿಲ್ಲೆಯಲ್ಲಿ ದೀರ್ಘಾವಧಿಯ ಪ್ರಕರಣಗಳಲ್ಲಿ ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಕಾರ್ಯಾಚರಣೆಯ ಅಭಿಯಾನದ ಸಂದರ್ಭ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಉರ್ವಾ ಠಾಣೆ ಪೊಲೀಸರು, ಅದರಲ್ಲೂ ಮುಖ್ಯವಾಗಿ ಮಹಿಳಾ ಕಾನ್‌ಸ್ಪೆಬಲ್ ಲಲಿತಾ ಅವರು ಕಷ್ಟಪಟ್ಟು ಮೂರ್ನಾಲ್ಕು ತಿಂಗಳು ಈ ಪ್ರಕರಣಕ್ಕೆ ಒತ್ತು ನೀಡಿ ಶ್ರಮಿಸಿದ್ದಾರೆ. ವಿವಿಧ ಠಾಣೆ, ಕೋರ್ಟ್,ಕಚೇರಿಗಳಿಗೆ ಗಳಿಗೆ ಭೇಟಿ ನೀಡುವ ಸಂದರ್ಭ ಕೋರ್ಟ್ ದಾಖಲೆಯೊಂದರಲ್ಲಿ ಈತ ಹೆಸರು ಬದಲಾಯಿಸಿಕೊಂಡಿರುವುದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಊರಿನವ ರನ್ನು ಸಂಪರ್ಕಿಸಿ ತಂಡದೊಂದಿಗೆ ತೆರಳಿ ಉರ್ವಾ ಪೊಲೀಸ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದು.

1997ರಲ್ಲಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವಾರು ತನಿಖೆ ನಡೆದು ದಂಡುಪಾಳ್ಯದ ಕೃತ್ಯ ಎಂದು ಪತ್ತೆಯಾಗಿತ್ತು. ದಂಡುಪಾಳ್ಯ ಗ್ಯಾಂಗ್‌ನ ಸದಸ್ಯ, ಆರೋಪಿ ಚಿಕ್ಕಹನುಮಂತಪ್ಪ ಎಂಬಾತ ತಲೆಮರೆಸಿಕೊಂಡಿದ್ದ. ಇದೀಗ 27 ವರ್ಷಗಳ ನಂತರ ಉರ್ವಾ ಠಾಣೆಯ ಪೊಲೀಸರಿಂದ ಪತ್ತೆಹಚ್ಚಲ್ಪಟ್ಟು ಬಂಧಿತನಾಗಿರುವ ಆರೋಪಿಯನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ದಂಡುಪಾಳ್ಯ ಗ್ಯಾಂಗ್ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಬಂಧಿತ ಚಿಕ್ಕ ಹನುಮಂತಪ್ಪ ವಿರುದ್ಧವೂ ಎಂಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಇದೀಗ ಆತನ ಬಂಧನದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲಾ ಪೊಲೀಸ್ ಠಾಣೆಗಳಿಗೆ ಸಂಪರ್ಕ ಮಾಡಲಾಗಿದೆ. ಎಲ್ಲಾ ಪ್ರಕರಣಗಳಲ್ಲೂ ತನಿಖೆ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಿ ಮತ್ತೆ ವಿಚಾರಣೆ ನಡೆಸಬಹುದಾಗಿದೆ. ದಂಡುಪಾಳ್ಯದ ವಿರುದ್ಧದ ಕೆಲ ಪ್ರಕರಣಗಳಲ್ಲಿ ಕೆಲ ಆರೋಪಿಗಳಿಗೆ ಖುಲಾಸೆ ಯಾಗಿದ್ದು, ಬಂಧಿತ ಆರೋಪಿ ಖುಲಾಸೆಗೊಂಡಿಲ್ಲ. ಏನಾದರೂ ತಪ್ಪುಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಂಡು ವಿಚಾರಣೆ ಮುಂದುವರಿಸಲಾಗುವುದು.

ಬಂಧಿತ ಆರೋಪಿ ಚಿಕ್ಕ ಹನುಮ 1997ರಲ್ಲಿ ಜೋಡಿ ಕೊಲೆ ಪ್ರಕರಣವಲ್ಲದೆ, 2000ದಲ್ಲಿಯೂ ವಿವಿಧ ಪ್ರಕರಣ ಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ದಂಡುಪಾಳ್ಯ ಗ್ಯಾಂಗ್‌ನ ಅಪರಾಧ ಕೃತ್ಯಗಳ ಬಗ್ಗೆ ವಿಚಾರಣೆ ನಡೆದಾಗ 8 ಪ್ರಕರಣಗಳಲ್ಲಿ ಶಿಕ್ಷೆಯಾಗಿತ್ತು. ಕೆಲವು ಪ್ರಕರಣಗಳು ದೃಢಗೊಂಡು ಜೀವಾವಧಿ ಶಿಕ್ಷೆಯೂ ಆಗಿದೆ. ಕೆಲವು ಪ್ರಕರಣಗಳಲ್ಲಿ ಮರು ತನಿಖೆಗೆ ಕಳುಹಿಸಿದಾಗ ಕೆಲವರು ಖುಲಾಸೆಗೊಂಡಿದ್ದಾರೆ. ಈತ ಯಾವುದೇ ರೀತಿಯ ವಿಚಾರಣೆಗೆ ಹಾಜರಾಗದ ಕಾರಣ ಮತ್ತೆ ಆರೋಪಿಯನ್ನು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ.

ಗ್ಯಾಂಗ್‌ನಲ್ಲಿ ಉರ್ವಾ ಪ್ರಕರಣಕ್ಕೆ ಸಂಬಂಧಿಸಿ ದಂಡುಪಾಳ್ಯದ ಎಂಟು ಮಂದಿ ಭಾಗಿಯಾಗಿದ್ದು, ಆರು ಮಂದಿಯ ಬಂಧನವಾಗಿತ್ತು. ಇಬ್ಬರ ಮೇಲೆ ತಲೆಮರೆಸಿಕೊಂಡ ಆರೋಪ ಹೊರಿಸಲಾಗಿದ್ದು, ಇದೀಗ ಒಬ್ಬನನ್ನು ಬಂಧಿಸಲಾ ಗಿದೆ ಎಂದು ಕಮಿಷನರ್ ಸುಧೀರ್ ರೆಡ್ಡಿ ವಿವರ ನೀಡಿದರು.

ಪ್ರಕರಣವನ್ನು ಬೇಧಿಸಿ, ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿರುವ ಉರ್ವಾ ಪೊಲೀಸ್ ಠಾಣೆಯ ತಂಡವನ್ನು ಪೊಲೀಸ್ ಆಯುಕ್ತರು ಈ ಸಂದರ್ಭ ಅಭಿನಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News