×
Ad

ರೋಗ ನಿರೋಧಕ ಲಸಿಕೆ: ಶೇ.100 ಗುರಿ ಸಾಧಿಸಲು ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2023-07-27 22:05 IST

ಮಂಗಳೂರು, ಜು.27: 23 ತಿಂಗಳೊಳಗಿನ ಮಕ್ಕಳಿಗೆ ನಿಯಮಿತ ಅವಧಿಯಲ್ಲಿ ನೀಡಬೇಕಾದ ರೋಗ ನಿರೋಧಕ ಲಸಿಕೆಗಳು, 2-5 ವಷರ್ದೊಳಗಿನ ಮಕ್ಕಳಿಗೆ ಎಂಆರ್-1, ಎಂಆರ್-2, ಫೆಂಟಾ ಮತ್ತು ಓಪಿ ಲಸಿಕಾ ಡೋಸ್‌ಗಳು ಹಾಗೂ ರೋಗ ನಿರೋಧಕ ಹಾಗೂ ಸುರಕ್ಷಿತ ಲಸಿಕೆ ಪಡೆಯದ ಅಥವಾ ಭಾಗಶಃ ಪಡೆದಿರುವ ಗರ್ಭಿಣಿಯರನ್ನು ಆಗಸ್ಟ್ 7ರಿಂದ 12ರವರೆಗೆ ನಡೆಯಲಿರುವ ಇಂದ್ರ ಧನುಷ್ 5.0 ಅಭಿಯಾನದ ಮೊದಲ ಹಂತದಲ್ಲೇ ಮಾಡಿ ಲಸಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ ಶೇ.100ರಷ್ಟು ಗುರಿ ಸಾಧಿಸಬೇಕು ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಇಂದ್ರಧನುಷ್ ಮತ್ತು ದಡಾರ ಹಾಗೂ ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆಯ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಗೆ ವಲಸೆ ಬಂದಿರುವ ಕಟ್ಟಡ ಹಾಗೂ ಇತರೆ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಆರೋಗ್ಯ ಹಾಗೂ ಕಾರ್ಮಿಕ ಇಲಾಖೆ ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿ, ಅರ್ಹ ಫಲಾನುಭಗಳು ನಿಗದಿಪಡಿಸಿರುವ ಅಭಿಯಾನದ ಸಮಯದಲ್ಲಿ ಲಸಿಕೆ ಪಡೆಯದೆ ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು. ಈ ಬಗ್ಗೆ ಕೈಗೊಂಡಿರುವ ಸಮೀಕ್ಷಾ ಕಾರ್ಯ ಪೂರ್ಣಗೊಂಡ ನಂತರ ಆರೋಗ್ಯ ಇಲಾಖೆಯಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಡಿಸಿ ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಸರ್ವಲೆನ್ಸ್ ಮೆಡಿಕಲ್ ಅಧಿಕಾರಿ ಅನಂತೇಶ್ ಮಾತನಾಡಿ ಇಂದ್ರಧನುಷ್ ಅಭಿಯಾನ ಈ ವರ್ಷದ ಆಗಸ್ಟ್ 7-12, ಸೆಪ್ಟಂಬರ್ 11-16, ಅಕ್ಟೋಬರ್ 9-14ರವರೆಗೆ ಜಿಲ್ಲೆಯಲ್ಲಿ ಮೂರು ಹಂತಗಳಲ್ಲಿ ನಡೆಯಲಿದೆ ಎಂದರು.

ದ.ಕ.ಜಿಪಂ ಸಿಇಒ ಡಾ.ಆನಂದ್ ಕೆ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ಅಧೀಕ್ಷಕ ಡಾ.ಸದಾಶಿವ ಶಾನುಭೋಗ್, ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News