×
Ad

ಜನತಾಕಾಲನಿ ಸರಕಾರಿ ಶಾಲೆ ಭೂಹಗರಣ: ಹೋರಾಟ ಸಮಿತಿಯಿಂದ ಪ್ರತಿಭಟನಾ ಧರಣಿ

Update: 2023-11-27 19:55 IST

ಸುರತ್ಕಲ್, ನ.27: ದ.ಕ.ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಕಾನ ಕಟ್ಲ ಜನತಾಕಾಲನಿಯ ಭೂ ಕಬಳಿಕೆಯ ಸಮಗ್ರ ಹಾಗೂ ಗಂಭೀರ ತನಿಖೆಗೆ ಒತ್ತಾಯಿಸಿ ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಸೋಮವಾರ ಶಾಲೆಯ ವಠಾರದಲ್ಲಿ ಪ್ರತಿಭಟನಾ ಧರಣಿ ನಡೆಯಿತು.

ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಹಾಗೂ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಕಳೆದ 27ವರ್ಷಗಳಿಂದ ಬಡ ಮಕ್ಕಳ ಭವಿಷ್ಯಕ್ಕಾಗಿ ಸದ್ಭಳಕೆ ಆದ ಶಾಲೆ ಮತ್ತು ಆಟದ ಮೈದಾನಕ್ಕೆ ಈಗ ಏಕಏಕಿ ತನ್ನದೆಂದು ಹೇಳಿಕೊಂಡು ಬಂದ ವ್ಯಕ್ತಿ ಇದುವರೆಗೂ ಯಾಕೆ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಲಿಲ್ಲ. ಶಾಲೆಯ 1.60ಎಕ್ರೆ ಭೂಮಿಗೆ ಸಂಬಂಧಪಟ್ಟ ದಾಖಲೆಗಳು ಇದ್ದರೂ ಶಿಕ್ಷಣ ಇಲಾಖೆ ಯಾಕೆ ಶಾಲೆಯ ಭೂಮಿಯ ಪರಭಾರೆಯನ್ನು ತಡೆಯಲಾಗಲಿಲ್ಲ ಎಂದು ಅವರು ಪ್ರಶ್ನಿಸಿದರು. ಶಾಲೆಯ ಭೂಮಿಯನ್ನು ಉಳಿಸುವ ಹೋರಾಟ ತೀವ್ರಗೋಳಿಸುತ್ತೇವೆ ಎಂದರು.

ಹೋರಾಟ ಸಮಿತಿಯ ಸಹಸಂಚಾಲಕಿ ವಾರಿಜ ಅವರು ಮಾತನಾಡಿ, ಹಿರಿಯರ ಪರಿಶ್ರಮದಿಂದಾಗಿ ಬಡವರ ಕಾಲನಿಯಲ್ಲಿ ಶಾಲೆ ನಿರ್ಮಿಸಲಾಯಿತು. ಸಾವಿರಾರು ಮಕ್ಕಳಿಗೆ ವಿದ್ಯಾ ದಾನ ಮಾಡಿದ ಸರ್ವ ಧರ್ಮ ದೇಗುಲವನ್ನು ಯಾವ ಬೆಲೆ ತೆತ್ತಾದರೂ ಉಳಿಸುತ್ತೇವೆ. ಬೇಕಾದರೆ ನಮ್ಮ ಪ್ರಾಣ ತೆಗೆಯಿರಿ ಶಾಲೆಯ ಒಂದು ಇಂಚು ಭೂಮಿ ಬಿಟ್ಟು ಕೊಡುವುದಿಲ್ಲ ಎಂದರು.

ಶಾಲೆಯ ಸ್ಥಾಪಕ ಸದಸ್ಯರಾದ ಹಮ್ಮಬ್ಬ ಬದವಿದೆ, ಶಾಲಾಭಿವೃದ್ಧಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ, ಮಾಜಿ ಮನಪಾ ಸದಸ್ಯ ದಯಾನಂದ ಶೆಟ್ಟಿ, ರಾಘವೇಂದ್ರ ಕರಂಬಾರು, ಫಾರೂಕ್ ಜನತಾಕಾಲನಿ ಮಾತನಾಡಿದರು.

ಪ್ರತಿಭಟನಾ ಧರಣಿಗೂ ಮುನ್ನ ಗ್ರಾಮಸ್ಥರು ಹೋರಾಟ ಸಮಿರಿಯ ನೇತೃತ್ವದಲ್ಲಿ ಜನತಾ ಕಾಲನಿ ಬಸ್‌ನಿಲ್ದಾಣದಿಂದ ಶಾಲೆಯ ಮೈದಾನದ ವರೆಗೆ ಪ್ರತಿಭಟನಾ ಜಾಥಾ ನಡೆಯಿತು. ಜಾಥಾದಲ್ಲಿ ಸರಕಾರಿ ಶಾಲೆ ಉಳಿಸುವಂತೆ, ಶಾಲೆಯ ಒಂದಿಚ್ಚೂ ಭೂಮಿ ನೀಡುವುದಿಲ್ಲ ಎಂಬ ಘೋಷಣೆಗಳು ಮೊಳಗಿದವು.

ಈ ಸಂದರ್ಭ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಕೈರುನ್ನಿಸ, ಸ್ಥಳೀಯ ಮುಂದಾಳುಗಳಾದ ದಯಾನಂದ ಶೆಟ್ಟಿ, ಸಿಸಿಲಿಯ ಲೋಬೊ, ಶರೀಫ್ ಜನತಾಕಾಲನಿ, ಆಸೀಫ್, ಅಶ್ರಫ್, ಅಸ್ಕಾಫ್, ಕ್ರಿಸ್ಟಿನ್ ಮಥಾಯಸ್, ಕಿಶೋರ್ ಶೆಟ್ಟಿ, ರೋಷನ್ ಜೋಯ್ ಡಿಸೋಜಾ, ಶಬನಾ, ಡಿವೈಎಫ್ಐ ಮುಖಂಡರಾದ ಶ್ರೀನಾಥ್ ಕುಲಾಲ್, ಬಿ.ಕೆ. ಮಸೂದ್, ಸಾದಿಕ್ ಕಿಲ್ಪಾಡಿ, ಶೈಫರ್ ಆಲಿ, ಮುಹಮ್ಮದ್ ಐ., ಸಲೀಮ್ ಶಾಡೋ ಕಾಟಿಪಳ್ಳ ಮುಂತಾದವರು ಉಪಸ್ಥಿತರಿದ್ದರು.

"ಮತ ನೀಡಿದವರ ಖುಣ ತೀರಿಸಿ ಶಾಸಕ ಭರತ್ ಶೆಟ್ಟಿ"

ಸರಕಾರಕ್ಕೆ ಮತ್ತು ಜನ ಪ್ರತಿನಿಧಿಗಳಿಗೆ ಬಡವರು ಅವರ ಮಕ್ಕಳ ವಿದ್ಯಾಭ್ಯಾಸದ ಕುರಿತು ಕಾಲಜಿಯೇ ಇಲ್ಲ. ಇದ್ದಿದ್ದರೆ, ತಿಂಗಳುಗಳಿಂದ ಪ್ರತಿಭಟನೆ‌ ನಡೆಸುತ್ತಿದ್ದರೂ ಶಾಸಕ ಭರತ್ ಶೆಟ್ಟಿಯವರಿಗೆ ಬೆಂಗಳೂರು ಕಂಬಳದಲ್ಲಿ ಭಾಗವಹಿಸಲು ಸಮಯವಿತ್ತು. ಆದರೆ, ಶಾಲೆಗೆ ಭೇಟಿ ನೀಡಿ ಮತ ನೀಡಿದವರ ಖುಣ ತೀರಿಸಲು ಸಮಯವಿಲ್ಲ. ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿಯೆ ಈ ಶಾಲೆ ಈ ಸ್ಥತಿ ತಲುಪಲು ಮುಖ್ಯ ಕಾರಣ ಎಂದು ಹೋರಾಟ ಸಮಿತಿಯ ಅದ್ಯಕ್ಷ ಇಮ್ತಿಯಾಝ್ ಶಾಸಕ ಭರತ್ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು.

"ಜನತಾಕಾಲನಿ ಶಾಲೆಯ ಈ ಸ್ಥಿತಿಗೆ ಜನಪ್ರತಿನಿಧಿಗಳು ಎಷ್ಟು ಕಾರಣರೋ ಹಳೆವಿದ್ಯಾರ್ಥಿಗಳು, ಮಕ್ಕಳ ಪೋಷಕರು ಗ್ರಾಮಸ್ಥರೂ ಅಷ್ಟೇ ಕಾರಣ. ಹಿರಿಯರು ಹಾಕಿ ಕೊಟ್ಟ ಹೆಜ್ಜೆಯ ಮೇಲೆ ನಡೆದರೆ ನಮ್ಮ ಶಾಲೆಯನ್ನು ಉಳಿಸಿಕೊಳ್ಳ ಬಹುದು. ಮುಂದಿನ ದಿನಗಳಲ್ಲಿ ಶಾಲೆಯನ್ನು ಮನೆಯ ಅಡುಗೆ ಕೊಣೆಯ ರೀತಿ ನೋಡಿಕೊಳ್ಳುತ್ತೇವೆ. ಪ್ರಾಣ ಬಿಟ್ಟರೂ ನಮ್ಮ ಶಾಲೆಯ ಒಂದ್ದಿಂಚು ಭೂಮಿಯನ್ನು ಪರರಿಗೆ ಬಿಡುವುದಿಲ್ಲ"

-ವಾರಿಜ, ಹೋರಾಟ ಸಮಿತಿಯ ಸಹಸಂಚಾಲಕಿ




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News