×
Ad

ಮೂಡುಬಿದಿರೆ | 60 ಅಡಿ ಆಳದ ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Update: 2026-01-26 23:06 IST

ಮೂಡುಬಿದಿರೆ : 60 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದ ಹಸುವೊಂದನ್ನು ಮೂಡುಬಿದಿರೆ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಮಿಜಾರಿನಲ್ಲಿ ಸೋಮವಾರ ನಡೆದಿದೆ.

ಬಡಗಮಿಜಾರು ನಿವಾಸಿ ಜಯರಾಮ್ ಗೌಡ ಅವರಿಗೆ ಸೇರಿದ ಸುಮಾರು 60 ಅಡಿ ಆಳ ಮತ್ತು 5 ಅಡಿ ಅಗಲದ ಬಾವಿಗೆ ಹಸು ಬಿದ್ದಿರುವುದನ್ನು ಗಮನಿಸಿದ ಮನೆಯವರು ಹಾಗೂ ಸ್ಥಳೀಯರು ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬಾವಿಗೆ ಇಳಿದು, ಹಸುವಿಗೆ ಯಾವುದೇ ಗಾಯವಾಗದಂತೆ ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿದರು. 60 ಅಡಿ ಆಳವಿದ್ದರೂ ಸಮಯಪ್ರಜ್ಞೆ ಹಾಗೂ ನಿಪುಣತೆಯಿಂದ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಮೂಡುಬಿದಿರೆ ಅಗ್ನಿಶಾಮಕ ಇಲಾಖೆಯ ಸಹಾಯಕ ಠಾಣಾಧಿಕಾರಿ ದಿವಾಕರ್ ಆಚಾರ್ಯ, ಸಿಬ್ಬಂದಿಗಳಾದ ಪ್ರಸಾದ್, ಪ್ರವೀಣಕುಮಾರ್ ದೊಡ್ಡಮನಿ, ರಾಜೇಂದ್ರ ಸಾತರಕರ, ಮಲ್ಲಿಕಾರ್ಜುನ್ ಅರಬಾವಿ ಹಾಗೂ ಚಾಲಕ ಸಚಿನ್ ರಾಮ್ ನಾಯಕ್ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News