ಜ. 23 ರಂದು ಪತ್ರಕರ್ತ, ಬರಹಗಾರ ನವೀನ್ ಸೂರಿಂಜೆ ಅವರ 'ಕೊರಗರು-ತುಳುನಾಡಿನ ಮಾತೃಸಮುದಾಯ' ಪುಸ್ತಕ ಬಿಡುಗಡೆ
ಮಂಗಳೂರು: ಕೊರಗ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಜನವರಿ 23 ಗುರುವಾರದಂದು ನಡೆಯುತ್ತಿರುವ ಐತಿಹಾಸಿಕ 'ಆದಿವಾಸಿ ಆಕ್ರೋಶ ರ್ಯಾಲಿ'ಯಲ್ಲಿ ಪತ್ರಕರ್ತ, ಬರಹಗಾರ ನವೀನ್ ಸೂರಿಂಜೆ ಬರೆದಿರುವ 'ಕೊರಗರು-ತುಳುನಾಡಿನ ಮಾತೃಸಮುದಾಯ' ಪುಸ್ತಕ ಬಿಡುಗಡೆ ನಡೆಯಲಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಕಟನೆ ತಿಳಿಸಿದೆ.
ಕರಾವಳಿಯ ಮೂಲನಿವಾಸಿ ಕೊರಗ ಸಮುದಾಯ ಇಂದು ಅಳಿವಿನಂಚಿನಲ್ಲಿದೆ. ಸಾಂಸ್ಕೃತಿಕವಾಗಿ, ಐತಿಹ್ಯವಾಗಿ ಈ ಕೊರಗ ಸಮುದಾಯ ಕರಾವಳಿಯನ್ನು ಒಂದು ಕಾಲದಲ್ಲಿ ಆಳ್ವಿಕೆ ಮಾಡಿತ್ತು. ಆದರೆ ಕಾನೂನಾತ್ಮಕವಾಗಿ ತುಂಡು ಭೂಮಿಯನ್ನೂ ಹೊಂದಿಲ್ಲ. ಜಾತ್ರೆ, ನೇಮ, ಕೋಲ, ಕಂಬಳ, ಮೇಲ್ವರ್ಗಗಳ ಮದುವೆ, ಸಂಪ್ರದಾಯದ ಹೆಸರಿನಲ್ಲಿ ಅಜಲು ಶೋಷಣೆಗೆ ಒಳಗಾದ ಈ ಸಮುದಾಯ ಸಧ್ಯ ಉಳಿವಿಗಾಗಿ ಹೋರಾಟ ನಡೆಸುತ್ತಿದೆ. ಈ ಸಂದರ್ಭದಲ್ಲಿ ಕೊರಗ ಸಮುದಾಯದ ಇತಿಹಾಸ-ವರ್ತಮಾನ-ಭವಿಷ್ಯದ ಬಗ್ಗೆ ಅವಲೋಕನ ನಡೆಸಬೇಕಿದೆ. ಕೊರಗರ ಈ ಸ್ಥಿತಿಗೆ ಮನುಸ್ಮೃತಿ ಪಾಲಿಸುವ ಯಾವ ರಾಜಕಾರಣಿಗಳ ಪಾತ್ರವೇನು ? ಯಾವ್ಯಾವ ಶಾಸಕರು ಕೊರಗರ ಶಿಕ್ಷಣ, ಅಭಿವೃದ್ದಿ ವಿಷಯದಲ್ಲಿ ಸರ್ಕಾರಕ್ಕೆ ಹೇಳಿದ್ದೇನು? ಡಾ ಮಹಮ್ಮದ್ ಪೀರ್ ವರದಿ ಯಾಕೆ ಜಾರಿಯಾಗಲಿಲ್ಲ ? ಕೊರಗರನ್ನು ಈಗಲೂ ಶಿಕ್ಷಣದಿಂದ ವಂಚಿಸಬೇಕು ಎಂದು ಯೋಚಿಸುತ್ತಿರುವವರು ಯಾರು ? ಕೊರಗರ ಜನಪದ ಐತಿಹ್ಯ, ಇತಿಹಾಸ, ಸರ್ಕಾರಿ ದಾಖಲೆಗಳು ಏನು ಹೇಳುತ್ತದೆ ಎಂಬುದರ ಬಗ್ಗೆ 'ಕೊರಗರು- ತುಳುನಾಡಿನ ಮಾತೃಸಮುದಾಯ' ಬೆಳಕು ಚೆಲ್ಲುತ್ತದೆ.
ಕ್ರಿಯಾ ಮಾಧ್ಯಮ ಪ್ರಕಟಿಸಿರುವ ಪುಸ್ತಕವನ್ನು ಆದಿವಾಸಿ ಆಕ್ರೋಶ ರ್ಯಾಲಿಯ ವೇದಿಕೆಯಲ್ಲಿ ಮಾಜಿ ಸಂಸದರೂ, ಆದಿವಾಸಿ ಅಧಿಕಾರ್ ಮಂಚ್ ನ ರಾಷ್ಟ್ರೀಯ ಉಪಾದ್ಯಕ್ಷರೂ ಆಗಿರುವ ಬೃಂದಾ ಕಾರಟ್ ಬಿಡುಗಡೆ ಮಾಡಲಿದ್ದಾರೆ. ಡಾ ಎಸ್ ವೈ ಗುರುಶಾಂತ್, ಮುನೀರ್ ಕಾಟಿಪಳ್ಳ, ಡಾ ಕೃಷ್ಣಪ್ಪ ಕೊಂಚಾಡಿ, ಶ್ರೀಧರ ನಾಡ, ಕರಿಯ. ಕೆ, ನವೀನ್ ಸೂರಿಂಜೆ ಮತ್ತು ಕೊರಗ ಸಮುದಾಯ ಮುಖಂಡರು ಉಪಸ್ಥಿತರಿರಲಿದ್ದಾರೆ.