ದೇಶದಲ್ಲಿ ಮೋದಿ ಅಲೆ ಇನ್ನೂ ಇದೆ: ನಳಿನ್ ಕುಮಾರ್
ಮಂಗಳೂರು: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅಲೆ ಇನ್ನೂ ಇದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿರುವುದು ದೇಶದಲ್ಲಿ ಬಿಜೆಪಿ ಪರ ಮತದಾರರ ಒಲವು ಇರುವುದು ಸ್ಪಷ್ಟವಾಗಿದೆ ಎಂದು ಸಂಸದ ಹಾಗೂ ಬಿಜೆಪಿಯ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಹೇಳಿದರು.
ಪಂಚ ರಾಜ್ಯದ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಅವರು ರವಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.
ಮೋದಿಯ ಮೇಲೆ ಮತದಾರರ ವಿಶ್ವಾಸ ಹೆಚ್ಚಿದೆ. ಅವರ ಗ್ಯಾರಂಟಿಗಳು ಸಫಲವಾಗಿದೆ. ಕರ್ನಾಟಕದ ಫಲಿತಾಂಶ ನೋಡಿ ಕಾಂಗ್ರೆಸ್ ದೇಶದ ಇತರ ಭಾಗಗಳಲ್ಲೂ ಗ್ಯಾರಂಟಿ ಯೋಜನೆ ಘೋಷಿಸಿತ್ತು. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮೋಸ ಮಾಡಿರುವದು ದೇಶದ ಜನತೆಗೆ ಗೊತ್ತಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಸಿದ್ದರಾಮಯ್ಯ ಈ ಚುನಾವಣೆಯನ್ನು ಸೆಮಿಫೈನಲ್ ಅಂದಿದ್ದರು. ಸೆಮಿಫೈನಲ್ನಲ್ಲೇ ಕಾಂಗ್ರೆಸ್ ಪಕ್ಷವನ್ನು ಜನರು ಹೊರ ಗಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ ಮತ್ತು ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.