ಹರೇಕಳ: ಸಿಪಿಐಎಂ ನೇತೃತ್ವದಲ್ಲಿ 'ಹರೇಕಳ ಗ್ರಾಮ ಪಂಚಾಯತ್ ಚಲೋ'
ಕೊಣಾಜೆ: ನಿವೇಶನ ರಹಿತರಿಗೆ ಕೂಡಲೇ ಮನೆ ನಿವೇಶನ ನೀಡಬೇಕು ಹಾಗೂ 557 ಮನೆಗಳ ತೆರಿಗೆಯನ್ನು ಕೂಡಲೇ ಸಂಗ್ರಹಿಸಬೇಕೆಂದು ಗುರುವಾರ ಸಿಪಿಐಎಂ ನೇತೃತ್ವದಲ್ಲಿ ನಿವೇಶನರಹಿತರ ಹರೇಕಳ ಗ್ರಾಮ ಪಂಚಾಯತ್ ಚಲೋ ಹೋರಾಟದ ಮೂಲಕ ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಮುನೀರ್ ಕಾಟಿಪಳ್ಳ ರವರು, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಅಮೃತ ಮಹೋತ್ಸವವನ್ನು ದಾಟಿ ಮುನ್ನಡೆಯುತ್ತಿದ್ದರೂ ದೇಶದ ಬಡಪಾಯಿ ಜನತೆಗೆ ಇನ್ನೂ ಕೂಡ ತುಂಡು ಭೂಮಿ ಲಭಿಸದೇ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹರೇಕಳ ಗ್ರಾಮದಲ್ಲಿ ಕಳೆದ 4 ದಶಕಗಳಿಂದ ಬಡವರಿಗೆ ಮನೆ ನಿವೇಶನವನ್ನು ಒದಗಿಸದಿರುವ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳ ನಿರಂತರ ಹೋರಾಟದ ಫಲವಾಗಿ ಇಲ್ಲಿನ ಗ್ರಾಮ ಪಂಚಾಯತ್ ನಿವೇಶನರಹಿತರ ಪಟ್ಟಿಯನ್ನು ಸಿದ್ದಗೊಳಿಸಿದೆ. ಆದರೆ ಅದಕ್ಕಾಗಿ ನಿವೇಶನವನ್ನು ಇನ್ನೂ ಕೂಡ ಕಾದಿರಿಸದೆ ಸ್ಥಳೀಯ ಜನತೆಯನ್ನು ವಂಚಿಸಿದೆ. ಮಾತ್ರವಲ್ಲದೆ ಕಳೆದ ಹಲವಾರು ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದ 557 ಮನೆಗಳ ತೆರಿಗೆ ಕಟ್ಟುವುದನ್ನು ಏಕಾಏಕಿ ನಿಲ್ಲಿಸಿ ಅವರನ್ನೂ ಕೂಡ ಗ್ರಾಮದಿಂದಲೇ ಒದ್ದೋಡಿಸಲು ವ್ಯವಸ್ಥಿತ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು, ಹರೇಕಳ ಗ್ರಾಮ ಪಂಚಾ ಯತ್ ವ್ಯಾಪ್ತಿಯಲ್ಲಿ ನೂರಾರು ಎಕರೆ ಭೂಮಿ ಸರಕಾರದ ವಶದಲ್ಲಿದ್ದರೂ ಇಲ್ಲಿನ ಬಡಪಾಯಿ ಜನತೆಯ ಮನೆ ನಿವೇಶನಕ್ಕಾಗಿ ಜಾಗ ಕಾದಿರಿಸಲು ಇನ್ನೂ ಸಾಧ್ಯವಾಗಿಲ್ಲ. ಮಾತ್ರವಲ್ಲದೆ ಈ ಹೋರಾಟವನ್ನು ದಾರಿ ತಪ್ಪಿಸಲು 9 ಎಕರೆಯಷ್ಟು ಭೂಮಿ ನಿವೇಶನ ರಹಿತರಿಗೆ ಕಾದಿರಿಸಲಾಗಿದೆ ಎಂದು ಪಂಚಾಯತ್ ಆಡಳಿತ ಪತ್ರಿಕಾಗೋಷ್ಠಿಯ ಮೂಲಕ ಹೇಳಿದ್ದು,ಇದು ನಿಜಕ್ಕೂ ದಾಖಲೆಯಲ್ಲಿ ಸಾರ್ವಜನಿಕ ಉಪಯೋಗಕ್ಕೆ ಅಂತ ನಮೂದಿಸಲಾಗಿದೆಯೇ ಹೊರತು ನಿವೇಶನರಹಿತರಿಗೆ ಅಂತ ಇನ್ನೂ ಕೂಡ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐಎ.. ಯುವ ನಾಯಕರಾದ ರಫೀಕ್ ಹರೇಕಳರವರು,ನಿವೇಶನ ರಹಿತರ ಹೋರಾ ಟದ ಮಹತ್ವವನ್ನು ವಿವರಿಸುತ್ತಾ, ನಿವೇಶನರಹಿತರ ಪ್ರಶ್ನೆಗಳನ್ನು ಮುಂದಿಟ್ಟು ಕಳೆದ ಹಲವಾರು ಬಾರಿ ಹೋರಾಟಗಳನ್ನು ನಡೆಸಿದ್ದರೂ ಪಂಚಾಯತ್ ಆಡಳಿತ ಮೊಸಳೆ ಕಣ್ಣೀರು ಸುರಿಸುತ್ತಿದೆಯೇ ಹೊರತು ಜನತೆಯ ನೋವುಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್,ಸುಕುಮಾರ್ ತೊಕ್ಕೋಟು,ಜಯಂತ ನಾಯಕ್, ಜಯಂತ ಅಂಬ್ಲಮೊಗರು, ಇಬ್ರಾಹಿಂ ಮದಕ, ರಿಜ್ವಾನ್, ಹರೇಕಳ ಗ್ರಾಮ ಪಂಚಾಯಿತಿ ಸದಸ್ಯರಾದ ಅಶ್ರಫ್ ಹರೇಕಳ, ಕೆ.ಎಚ್ ಹಮೀದ್, ಜನಾರ್ದನ ಅಮೀನ್, ಕೆ.ಉಮ್ಮರಬ್ಬ, ಸತ್ತಾರ್ ಕೊಜಪ್ಪಾಡಿ, ಇಸ್ಮಾಯಿಲ್, ಕೆ.ಎಚ್ ಇಕ್ಬಾಲ್, ಹೈದರ್ ಹರೇಕಳ, ಬಶೀರ್ ಲಚ್ಚಿಲ್, ನಿಝಾಮ್ ಆಲಡ್ಕ, ಯಾಕೂಬ್ ಖಂಡಿಗ ಮುಂತಾದವರು ಉಪಸ್ಥಿತರಿದ್ದರು.