ಜೆರೋಸಾ ಶಾಲೆ ವಿಚಾರದಲ್ಲಿ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ್ ನಡೆ ಅಮಾನವೀಯ: ಇನಾಯತ್ ಅಲಿ
ಇನಾಯತ್ ಅಲಿ
ಮಂಗಳೂರು, ಫೆ.15: ನಗರದ ಸಂತ ಜೆರೋಸಾ ಶಾಲೆಯ ವಿಚಾರವನ್ನು ಮುಂದಿಟ್ಟು ಬಗ್ಗೆ ಇಡೀ ಕ್ರೈಸ್ತ ಮಿಷನರಿ ಶಾಲೆಗಳನ್ನು ಬಹಿಷ್ಕರಿಸುವಂತೆ ಶಾಸಕ ಭರತ್ ಶೆಟ್ಟಿ ನೀಡಿರುವ ಹೇಳಿಕೆ ಹಾಗೂ ಶಾಲೆಗೆ ಮುತ್ತಿಗೆ ಹಾಕಿರುವ ವೇದವ್ಯಾಸ ಕಾಮತ್ ನಡೆ ಅಮಾನವೀಯ ಹಾಗೂ ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದ್ದಾರೆ.
ಚುನಾಯಿತ ಶಾಸಕರಾಗಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಕ್ರಮ ಕೈಗೊಳ್ಳುವ ಅಧಿಕಾರ ಶಾಸಕರಿಗಿದೆ. ಅದನ್ನು ಬಿಟ್ಟು ಶಾಲೆಗೆ ನುಗ್ಗುವುದು, ಮುಗ್ಧ ಮಕ್ಕಳನ್ನು ಪ್ರಚೋದಿಸುವುದು ಜವಾಬ್ದಾರಿಯುತ ಶಾಸಕ ಪರಂಪರೆಗೇ ಅವಮಾನ. ಶೇ.2ರಷ್ಟಿರುವ ಕ್ರೈಸ್ತರನ್ನು ಪದೇ ಪದೇ ಟಾರ್ಗೆಟ್ ಮಾಡುವ ಭರತ್ ಶೆಟ್ಟಿ ಶಿಕ್ಷಣ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆಂದು ಉತ್ತರಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.
ಮಕ್ಕಳ ಭವಿಷ್ಯವನ್ನೇ ಬದಿಗೊತ್ತಿ ಚುನಾಯಿತ ಪ್ರತಿನಿಧಿಯೊಬ್ಬರು ಈ ರೀತಿ ಕೋಮು ಪ್ರಚೋದನೆಯ ಹೇಳಿಕೆ ನೀಡುವುದು ಖಂಡನೀಯ. ಪ್ರಜಾತಂತ್ರ ವ್ಯವಸ್ಥೆ ಮೂಲಕ ಆರಿಸಿಬಂದ ಶಾಸಕರು ಕಾನೂನನ್ನು ಕೈಗೆತ್ತಿಕೊಳ್ಳುವುದು ನಾಗರಿಕ ಸಮಾಜ ಒಪ್ಪುವ ನಡೆಯಲ್ಲ ಎಂದು ಇನಾಯತ್ ಅಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.