ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಜೊತೆ ಚಿಂತಕರು, ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತರ ಚರ್ಚೆ
ಮಂಗಳೂರು: ಕರಾವಳಿಯಲ್ಲಿ ಭುಗಿಲೆದ್ದಿರುವ ಮತೀಯ ಹಿಂಸಾಚಾರ, ದ್ವೇಷ ಭಾಷಣ, ಪ್ರತೀಕಾರದ ಹತ್ಯೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಮಂಗಳೂರಿಗೆ ಆಗಮಿಸಿರುವ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರನ್ನು ದ.ಕ ಮತ್ತು ಉಡುಪಿ ಜಿಲ್ಲೆಯ ಪ್ರಮುಖ ಚಿಂತಕರು, ಬರಹಗಾರರು, ರಂಗಕರ್ಮಿಗಳು, ಸಾಮಾಜಿಕ ಕಾರ್ಯಕರ್ತರು, ವಿವಿಧ ಚಳವಳಿಗಳ ಪ್ರಮುಖರು ಶುಕ್ರವಾರ ಭೇಟಿಯಾಗಿ ಜಿಲ್ಲೆಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋಮು ಸಂಘರ್ಷ, ಆಳಗೊಳ್ಳುತ್ತಿರುವ ಮತೀಯ ಧ್ರುವೀಕರಣದ ಕುರಿತು ಕಳವಳ ವ್ಯಕ್ತ ಪಡಿಸಿದರಲ್ಲದೆ ಶಾಂತಿ, ಸಾಮರಸ್ಯ ಮರಳಿ ನೆಲೆಗೊಳಿಸಲು ಸರಕಾರ ಕೈಗೊಳ್ಳಬೇಕಾದ ಕೆಲಸಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಮೂರು ದಶಕಗಳಿಗಿಂತೂ ದೀರ್ಘ ಅವಧಿಯಲ್ಲಿ ವ್ಯವಸ್ಥಿತವಾಗಿ ಕೋಮುವಾದಿ ಸಿದ್ದಾಂತವನ್ನು ಕರಾವಳಿ ಜಿಲ್ಲೆಯಲ್ಲಿ ಹರಡಲಾಗಿದೆ. ಸರಿಯಾದ ಪ್ರತಿರೋಧ ಒಡ್ಡದಿರುವುದರಿಂದ ಇಂದು ಕೋಮುವಾದ ಯಾರ ಅಂಖೆಗೂ ಸಿಗದಷ್ಟು ರಾಕ್ಷಸಿ ರೂಪ ತಾಳಿದೆ. ಈ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈ ಕುರಿತು ಸ್ಪಷ್ಟ ಧೋರಣೆ ಹೊಂದದಿರುವುದರಿಂದ ಬಿಜೆಪಿ ಸರಕಾರದ ಪತನದ ಹೊರತಾಗಿಯು ಸಂಘ ಪರಿವಾರದ ಶಕ್ತಿಗಳ ಚಟುವಟಿಕೆ ತಡೆ ಇಲ್ಲದೆ ಮುಂದುವರಿದಿದೆ. ದ್ವೇಷ ಭಾಷಣಗಳು ತಡೆ ರಹಿತವಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಕೋಮು ಶಕ್ತಿಗಳ ನಿಗ್ರಹಕ್ಕೆ ಈಗಲಾ ದರು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚಿಂತಕರು ಅಭಿಪ್ರಾಯಪಟ್ಟರು.
ಶಿಕ್ಷಣ ಸಂಸ್ಥೆಗಳು, ಸಾಂಸ್ಕೃತಿಕ ವಲಯಗಳಲ್ಲಿ ಸೌಹಾರ್ದ ಉದ್ದೀಪನಗೊಳಿಸುವ ಕಾರ್ಯಕ್ರಮಗಳು ನಡೆಯಬೇಕು, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ದಂಧೆಗಳ ಹಾಗೂ ಮತೀಯ ಗೂಂಡಾಗಳ ಲೋಕ ಒಂದಕ್ಕೊಂದು ಬೆಸೆದುಕೊಂಡಿದೆ. ಇವುಗಳನ್ನು ಮುಲಾಜಿಲ್ಲದೆ ಮಟ್ಟ ಹಾಕಬೇಕು. ದ್ವೇಷ ಭಾಷಣ, ಮಾಬ್ ಲಿಂಚಿಂಗ್, ಹತ್ಯಾ ಪ್ರಕರಣಗಳಲ್ಲಿ ಜಾಮೀನು ದೊರಕದಂತೆ ಕಾನೂನಾತ್ಮಕ ದೃಢ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲಾಡಳಿತದ ಎಲ್ಲಾ ವಿಭಾಗಗಳು, ಪೊಲೀಸ್ ಇಲಾಖೆ, ವಿವಿ ಸೇರಿದಂತೆ ಆಯಕಟ್ಟಿನ ವಿಭಾಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಬೇಕು. ಮಾನವೀಯತೆ, ಸಂವಿಧಾನದ ಮೌಲ್ಯ ಗಳನ್ನು ಜನತೆಗೆ ತಲುಪಿಸುವ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಸರಕಾರ ವ್ಯಾಪಕವಾಗಿ ನಡೆಸಬೇಕು. ಸಾಮಾಜಿಕ ಚಳವಳಿಗಳು ನಡೆಸುವ ಸೌಹಾರ್ದ ಕಾರ್ಯಕ್ರಮಗಳಿಗೆ ಬೆಂಬಲ ನೀಡಬೇಕು. ಸಾಮರಸ್ಯ, ಸಹಬಾಳ್ವೆಯ ಕರೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು.
ನಿಯೋಗದ ಅಭಿಪ್ರಾಯಗಳನ್ನು ಆಲಿಸಿದ ಬಿ.ಕೆ. ಹರಿಪ್ರಸಾದ್ ಈ ಕುರಿತು ಜಾತ್ಯತೀತ ಶಕ್ತಿಗಳ ಜೊತೆಗಿರುವುದಾಗಿ ಭರವಸೆ ನೀಡಿದರು, ಮುಖ್ಯಮಂತ್ರಿಗಳ ಜೊತೆಗೆ ಕರಾವಳಿಯ ಚಿಂತಕರು, ಬರಹಗಾರರು, ಸಂಘಟನೆಗಳ ಪ್ರಮುಖರ ಸಭೆ ಏರ್ಪಡಿಸುವುದಾಗಿ ತಿಳಿಸಿದರು.
ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುನೀರ್ ಕಾಟಿಪಳ್ಳ ಸ್ವಾಗತಿಸಿದರು. ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಜನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು, ನಿವೃತ್ತ ಪ್ರಾಂಶುಪಾಲರು, ಲೇಖಕರು ಆದ ಡಾ.ಉದಯ ಇರ್ವತ್ತೂರು, ನಿವೃತ್ತ ಪ್ರಾಧ್ಯಾಪಕ ಡಾ. ಶಿವರಾಮ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಡಾ.ಎನ್. ಇಸ್ಮಾಯಿಲ್, ಡಾ.ಅಮರಶ್ರೀ ಮೂಡುಬಿದ್ರೆ, ವಾಸುದೇವ ಉಚ್ಚಿಲ್, ಸಹಬಾಳ್ವೆ ಉಡುಪಿಯ ಅಮೃತ್ ಶೆಣೈ, ರಥಬೀದಿ ಗೆಳೆಯರು ಉಡುಪಿ ಇದರ ನಾಗೇಶ್ ಉದ್ಯಾವರ, ಕೀರ್ತಿ ಶೆಟ್ಟಿ ಅಂಬಲಪಾಡಿ, ಸಿಪಿಎಂ ಮುಖಂಡರಾದ ಕೆ. ಯಾದವ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಹಿರಿಯ ನ್ಯಾಯವಾದಿಗಳಾದ ದಿನೇಶ್ ಹೆಗ್ಡೆ ಉಳೆಪ್ಪಾಡಿ, ಯಶವಂತ ಮರೋಳಿ, ದಲಿತ ಚಳವಳಿಯ ನಾಯಕರಾದ ಎಂ. ದೇವದಾಸ್, ಕೃಷ್ಣಾನಂದ ಬಜ್ಪೆ, ಸದಾಶಿವ ಪಡುಬಿದ್ರೆ, ರಘು ಎಕ್ಕಾರು, ಮಾಜಿ ಮೇಯರ್ ಕೆ. ಅಶ್ರಫ್, ಸಾಮಾಜಿಕ ಹೋರಾಟ ಗಾರರಾದ ಮಂಜುಳಾ ನಾಯಕ್, ಬಿಎನ್ ದೇವಾಡಿಗ, ಟಿಆರ್ ಭಟ್, ಸ್ವರ್ಣಾ ಭಟ್, ದಿಲ್ರಾಜ್ ಆಳ್ವ, ಸಮರ್ಥ್ ಭಟ್, ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್, ಸೀತಾರಾಮ ಬೇರಿಂಜ, ಕರುಣಾಕರ್ ಮಾರಿಪಳ್ಳ, ಸಿಪಿಐ ಪಕ್ಷದ ವಿ. ಕುಕ್ಯಾನ್, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ರೋಯ್ ಕ್ಯಾಸ್ಟಲಿನೋ, ಪ್ಲೇವಿಕ್ರಾಸ್ತಾ ಅತ್ತಾವರ, ಡೋಲ್ಪಿಡಿಸೋಜ, ರಚನಾ ಸಂಸ್ಥೆಯ ಜೋನ್ ಮೊಂತೇರೋ,ಕೆಥೋಲಿಕ್ ಸಭಾದ ಸಂತೋಷ್ ಡಿಸೋಜ, ಡಿವೈಎಫ್ಐ ಸಂಘಟನೆಯ ಬಿ.ಕೆ. ಇಮ್ತಿಯಾಝ್, ಮಹಿಳಾ ಸಂಘಟನೆಯ ಅಸುಂತ ಡಿಸೋಜ, ಪ್ರಮೀಳಾ ಶಕ್ತಿನಗರ, ಸಾಂಸ್ಕೃತಿಕ ರಂಗದ ಸಂತೋಷ್ ಶೆಟ್ಟಿ ಹಿರಿಯಡ್ಕ, ವಿದ್ದು ಉಚ್ಚಿಲ್, ಹರೀಶ್ ಪೇಜಾವರ, ಶ್ಯಾಮಸುಂದರ್ ರಾವ್, ಚಿತ್ತರಂಜನ್ ಶೆಟ್ಟಿ ಬೊಂಡಾಲ ಉಪಸ್ಥಿತರಿದ್ದರು.