ಸರಳ ಮರಳು ನೀತಿ ಜಾರಿಗೆ ಎಐಟಿಯುಸಿ ಒತ್ತಾಯ
ಮಂಗಳೂರು, ಜು.1: ದ.ಕ.ದಲ್ಲಿ ಸರಳ ಮರಳು ನೀತಿ ಜಾರಿಗೊಳಿಸಬೇಕು ಎಂದು ಎಐಟಿಯುಸಿ ದ.ಕ. ಮತ್ತು ಉತ್ತರ ಕನ್ನಡ ಜಿಲ್ಲಾ ಸಮಿತಿಯು ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ದ.ಕ.ಜಿಲ್ಲೆಯಲ್ಲಿ ಮರಳು ಮಾಫಿಯಾದಿಂದ ಸಂಘರ್ಷಗಳು ನಡೆಯುತ್ತಿದೆ. ಮರಳು/ಗಣಿ ಮಾಫಿಯಾ ದವರು ಕೆಲವೊಂದು ರಾಜಕೀಯ ವ್ಯಕ್ತಿಗಳ ಬೆಂಬಲದಲ್ಲಿ ಕಾರ್ಯಾಚರಿಸುತ್ತಿದ್ದು ಇದಕ್ಕೆ ಕೆಲವೊಂದು ಭ್ರಷ್ಟ ಅಧಿಕಾರಿಗಳೂ ಕೂಡ ಕೈಜೊಡಿಸುತ್ತಿದ್ದಾರೆ. ಪ್ರಸಕ್ತ ಮರಳು ಸಮಸ್ಯೆಯಿಂದ ಗುತ್ತಿಗೆದಾರರು, ಕಾರ್ಮಿ ಕರು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ನಿರ್ಮಾಣ ಕಾರ್ಯಗಳಿಗೆ ತೊಡಕಾಗಿದೆ. ಹಾಗಾಗಿ ಸರಳ ಮರಳು ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿಯ ಮೂಲಕ ಮನವಿ ಸಲ್ಲಿಸಿದ ನಿಯೋಗದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್, ಎಐಟಿಯುಸಿ ಮಾಜಿ ಜಿಲ್ಲಾಧ್ಯಕ್ಷ ವಿ. ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಬೇರಿಂಜ, ಸಹಾಯಕ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ, ಕಟ್ಟಡ ಕಾರ್ಮಿಕರ ಸಂಘಟನೆಯ ನಾಯಕರಾದ ಕರುಣಾಕರ್ ಮಾರಿಪಲ್ಲ, ರಾಮ ಮುಗೇರ ವಿಟ್ಲ ಉಪಸ್ಥಿತರಿದ್ದರು.