×
Ad

ಸುರತ್ಕಲ್ | ತಂಡದಿಂದ ಇಬ್ಬರಿಗೆ ಚೂರಿ ಇರಿತ; ಓರ್ವನ ಸ್ಥಿತಿ ಗಂಭೀರ

Update: 2025-10-24 06:45 IST

ಸುರತ್ಕಲ್: ನಾಲ್ಕು ಮಂದಿ‌ ದುಷ್ಕರ್ಮಿಗಳ ತಂಡ ಇಬ್ಬರಿಗೆ ಚೂರಿಯಿಂದು ಇರಿದ‌ ಪರಿಣಾಮ‌ ಓರ್ವ ಗಂಭೀರ ಗಾಯಗೊಂಡು ಇನ್ನೋರ್ವನಿಗೆ ಅಲ್ಪಪ್ರಮಾಣದ ಗಾಯಗಳಾಗಿರುವ ಘಟನೆ ಗುರುವಾರ‌ ತಡರಾತ್ರಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ ಪೆಟ್ರೋಲ್ ಪಂಪ್‌ ಬಳಿ ನಡೆದಿದೆ.

ಚೂರಿ ಇರಿತಕ್ಕೊಳಗಾದವರನ್ನು ಸುರತ್ಕಲ್‌ ಚೊಕ್ಕಬೆಟ್ಟು ನಿವಾಸಿಗಳಾದ ನಿಝಾಮ್ (23) ಮತ್ತು ಕೃಷ್ಣಾಪುರ ಹಿಲ್ ಸೈಡ್ ನಿವಾಸಿ ಹಸನ್ ಮುರ್ಷಿದ್ (18) ಎಂದು ತಿಳಿದು ಬಂದಿದೆ.

ಘಟ‌ನೆಯಿಂದ ನಿಝಾಮ್ ರ ಹೊಟ್ಟೆಗೆ ಗಂಭೀರ‌ ಸ್ವರೂಪದ ಗಾಯವಾಗಿದ್ದು, ಆತನಿಗೆ‌ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ‌ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ‌ ಆಸ್ಪತ್ರೆಗೆ ರವಾನಿಸಲಾಗಿದೆ.‌ ಸಣ್ಣಪ್ರಮಾಣದ ಇರಿತದ ಗಾಯಗಳಾಗಿರುವ ಮುರ್ಷಿದ್ ಮುಕ್ಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಐದು‌ ಮಂದಿ ಸ್ನೇಹಿತರು ಎರಡು ದ್ವಿಚಕ್ರ ವಾಹನಗಳಲ್ಲಿ ಕೃಷ್ಣಾಪುರಕ್ಕೆ ಹೋಗುತ್ತಿದ್ದ ಸಂದರ್ಭ ನಿಝಾಮ್ ಮತ್ತು ಮುರ್ಷಿದ್ ಇದ್ದ ವಾಹನದ ಪೆಟ್ರೋಲ್ ಖಾಲಿಯಾಗಿ ರಸ್ತೆ ಬದಿಯಲ್ಲಿ ನಿಂತಿದ್ದರು. ಇನ್ನೊಂದು ವಾಹನದಲ್ಲಿದ ಸ್ನೇಹಿತರು ಪೆಟ್ರೋಲ್ ತರಲೆಂದು ಪೆಟ್ರೋಲ್ ಪಂಪ್‌ಗೆ ಹೋಗಿದ್ದರು.

ಈ ವೇಳೆ ಸಮೀಪದ‌ ಬಾರ್ ಬಳಿಯಿಂದ ಅವರಿದ್ದ ಕಡೆಗೆ ಬಂದ ನಾಲ್ವರು ಅಪರಿಚಿತರು ಹನೀಫ್ ಗೊತ್ತಾ ಎಂದು ಪ್ರಶ್ನಿಸಿ ಮಾತು ಆರಂಭಿಸಿದರು ಎನ್ನಲಾಗಿದೆ. ಈ ವೇಳೆ ಎರಡೂ ತಂಡಗಳ‌ ನಡುವೆ ಮಾತಿನ ಚಕಮಕಿ ನಡೆದು ಓರ್ವ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ಗಾಯಾಳುಗಳು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಸುರತ್ಕಲ್‌ ಪೊಲೀಸ್‌ ನಿರೀಕ್ಷಕ ಪ್ರಮೋದ್ ಕುಮಾರ್ ಮತ್ತು ಸಿಬ್ಬಂದಿ‌‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಗೆ ತೆರಳಿ ಸಂತ್ರಸ್ತರಿಂದ ಹೇಳಿಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News