×
Ad

ನಿವೇಶನ ರಚನೆಗೆ ಪಂಚಾಯತ್ ರಸ್ತೆ ಬಳಕೆ: ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ಆಕ್ರೋಶ

Update: 2024-12-17 17:13 IST

ಉಳ್ಳಾಲ: ನಿವೇಶನ ನಿರ್ಮಾಣಕ್ಕೆ ಪಂಚಾಯತ್ ರಸ್ತೆ ಬಳಕೆ ಹಾಗೂ ಮನೆಯ ಅರ್ಧ ಗೋಡೆ ಕಾಮಗಾರಿ ಆದ ಬಳಿಕ ಪರವಾನಿಗೆ ನೀಡುವ ಕ್ರಮಕ್ಕೆ ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.

ಸೋಮೇಶ್ವರ ಪುರಸಭೆ ಅಧ್ಯಕ್ಷ ಕಮಲ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿದ ಪುರುಷೊತ್ತಮ, ಪಿಲಾರ್ ನಲ್ಲಿ ಖಾಸಗಿ ಜಾಗವೊಂದನ್ನು ಸಿಂಗಲ್ ಸೈಟ್ ಲೇಔಟ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಈ ಸೈಟ್ ರಚನೆಗೆ ಪಂಚಾಯತ್ ರಸ್ತೆ ಮತ್ತು ಸೇತುವೆಯನ್ನು ಬಳಸಲಾಗುತ್ತದೆ.ಇದಕ್ಕೆ ಅವಕಾಶ ನೀಡಬಾರದು.ಸೈಟ್ ವ್ಯವಹಾರ ಮಾಡುವವರು ಅದರ ಕಾರ್ಯ ಚಟುವಟಿಕೆಗೆ ಪ್ರತ್ಯೇಕ ರಸ್ತೆ ನಿರ್ಮಾಣ ಮಾಡಲಿ ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಮನೋಜ್, ಸೈಟ್ ಮಾಡುವವರು ಮೊದಲು ಪ್ರತ್ಯೇಕ ರಸ್ತೆ ಮಾಡಿ ಕಾರ್ಯಾರಂಭ ಮಾಡಲಿ. ಅಲ್ಲದೇ ಮನೆ ಕಟ್ಟಲು ಪಂಚಾಂಗ ಹಾಕುವ ಮೊದಲೇ ಪಂಚಾಯತ್ ಗೆ ಮಾಹಿತಿ ನೀಡುತ್ತಿಲ್ಲ. ಮನೆಯ ಅರ್ಧ ಗೋಡೆ ಕಾಮಗಾರಿ ಆದ ಬಳಿಕ ಪುರಸಭೆಗೆ ಮಾಹಿತಿ ನೀಡಿ ಪರವಾನಿಗೆ ಗೆ ಅರ್ಜಿ ಸಲ್ಲಿಸುತ್ತಾರೆ. ಇದಕ್ಕೆ ಅವಕಾಶ ನೀಡಬಾರದು. ಪುರಸಭೆ ವ್ಯಾಪ್ತಿಯಲ್ಲಿ ಮನೆಯ ಪಂಚಾಂಗ ಹಾಕುವ ಮೊದಲೇ ಇಂಜಿನಿಯರ್ ಪರಿಶೀಲನೆ ಆಗಬೇಕು. ನೀವೇಶನ ಪರಿಶೀಲಿಸಿ ಮನೆ ನಿರ್ಮಾಣಕ್ಕೆ ಯೋಗ್ಯ ಎಂದು ಕಂಡುಬಂದಲ್ಲಿ ಪರವಾನಿಗೆ ನೀಡಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ವ್ಯಾಪಕ ಚರ್ಚೆ ಸಭೆಯಲ್ಲಿ ನಡೆಯಿತು.

ಖಾಸಗಿ ಶಾಲೆಗಳಿಂದ ಸೇವಾ ಶುಲ್ಕ ವಸೂಲಿ ಮಾಡುವ ಬಗೆ ಸಭೆಯಲ್ಲಿ ಮುಖ್ಯಾಧಿಕಾರಿ ಮತ್ತಡಿ ಪ್ರಸ್ತಾಪಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಮನೋಜ್, ವಸೂಲಿ ಮಾಡಿದ ಸೇವಾ ಶುಲ್ಕವನ್ನು ಸರಕಾರಿ ಶಾಲೆ ಅಭಿವೃದ್ಧಿಗೆ ಬಳಸುವಂತೆ ಸಲಹೆ ನೀಡಿದರು.

ಸೋಮೇಶ್ವರ ಪುರಸಭೆ ಹಳೆ ಕಟ್ಟಡವನ್ನು ನೆಲಸಮಗೊಳಿಸುವ ಬಗೆ ಮುಖ್ಯಾಧಿಕಾರಿ ಮತ್ತಡಿ ಪ್ರಸ್ತಾಪಿಸಿದಾಗ ಇಂಜಿನಿಯರ್ ಶ್ರೀಧರ್ ನ್ಯಾಯ್ಕ್, ಕಟ್ಟಡ ನೆಲಸಮ ಗೊಳಿಸುವ ಕಾರ್ಯ ನಗರೋತ್ಥಾನ ವತಿಯಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸದಸ್ಯರು ಕಟ್ಟಡದಲ್ಲಿರುವ ಉಪಯುಕ್ತ ಸಾಮಗ್ರಿಗಳನ್ನು ಕೆಡವಿದ ದಿನದಂದೇ ಏಲಂ ಮಾಡಬೇಕು ಎಂದು ಸಲಹೆ ನೀಡಿದರು.

ಪುರಸಭೆ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ನೆಲ ಬಾಡಿಗೆ ವಿಧಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾದಾಗ ವ್ಯಾಪಕ ಆಕ್ಷೇಪ ವ್ಯಕ್ತವಾಯಿತು. ಪಂಚಾಯತ್ ವತಿಯಿಂದ ತುರ್ತು ಸಂದರ್ಭದಲ್ಲಿ ಜನರು ಪಡೆದುಕೊಳ್ಳುವ ನಿರಾಕ್ಷೇಪಣಾ ಪತ್ರ, ದೃಢಪತ್ರ, ಕಟ್ಟಡ ಪೂರ್ಣತಾ ಪತ್ರಗಳಿಗೆ ದರ ವಿಧಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ಎಲ್ಲರ ಸಹಮತ ವ್ಯಕ್ತವಾಯಿತು.

ಪುರಸಭೆಗೆ ಕಾಂಗ್ರೆಸ್ ನ ಇಬ್ಬರು ಸದಸ್ಯರು ಹಾಗೂ ಬಿಜೆಪಿಯ 9 ಸದಸ್ಯರನ್ನು ಸೇರಿಸಿ ಸ್ಥಾಯಿ ಸಮಿತಿ ರಚನೆ ಮಾಡುವ ಬಗೆ ಉಪಾಧ್ಯಕ್ಷ ರವಿಶಂಕರ್ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಹಮತ ವ್ಯಕ್ತಪಡಿಸಿದ ಸದಸ್ಯರು ಒಂದು ವಾರದೊಳಗೆ ರಚನೆ ಮಾಡಬೇಕು ಎಂದು ತಿಳಿಸಿದರು.

ಉಚ್ಚಿಲ, ಬೀರಿ ಮುಂತಾದ ಕಡೆ ಸರ್ವಿಸ್ ರಸ್ತೆ ಇದ್ದರೂ ಸಿಟಿಬಸ್ ಗಳು ಹೆದ್ದಾರಿಯಲ್ಲಿ ನಿಲ್ಲಿಸುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುತ್ತವೆ. ಈಗಾಗಲೇ ಕೆಲವು ಕಡೆ ಅಪಘಾತ ಸಂಭವಿಸಲು ನಿಗದಿತ ನಿಲ್ದಾಣದಲ್ಲಿ ನಿಲ್ಲಸಿರುವುದು ಕಾರಣ ಎಂದು ಸದಸ್ಯ ಅಬ್ದುಲ್ ಸಲಾಂ ಸಭೆಯಲ್ಲಿ ಪ್ರಸ್ತಾಪಿಸಿದಾಗ ವ್ಯಾಪಕ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಇತರ ಸದಸ್ಯರು ಕೊಲ್ಯ, ಸಂಕೋಲಿಗೆ ಸರ್ವಿಸ್ ರಸ್ತೆ ಇಲ್ಲದೇ ಆಗುತ್ತಿರುವ ತೊಂದರೆ ಬಗೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ರವಿಶಂಕರ್ ಹೆದ್ದಾರಿ ಸರ್ವಿಸ್ ರಸ್ತೆ ಸಮಸ್ಯೆ ಬಗ್ಗೆ ಸಂಸದ ಬ್ರಿಜೇಶ್ ಚೌಟರ ಗಮನಕ್ಕೆ ತಂದಿದ್ದೇವೆ. ಶೀಘ್ರ ಸರ್ವಿಸ್ ರಸ್ತೆಯ ವ್ಯವಸ್ಥೆ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸುವ ಮೂಲಕ ಚರ್ಚೆಗೆ ಇತಿಶ್ರೀ ಹಾಡಿದರು.

ಇದೇ ವೇಳೆ ವಿಕಲಚೇತನರ ಯೋಜನೆಯಡಿ 12 ಮಂದಿ ಫಲಾನುಭವಿಗಳಿಗೆ ಹಾಗೂ ಬಡಜನರ ಯೋಜನೆಯಡಿ ವೈದ್ಯಕೀಯ ವೆಚ್ಚಕ್ಕೆ ಅರ್ಜಿ ಸಲ್ಲಿಸಿದ 25 ಮಂದಿ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News