ರಾಜಸ್ಥಾನ ವಿಮಾನ ಅಪಘಾತದಲ್ಲಿ ಇಬ್ಬರು ಐಎಎಫ್ ಪೈಲಟ್ ಗಳ ಮೃತ್ಯು
PC : indiatoday.in
ಜೈಪುರ: ಬುಧವಾರ ಮಧ್ಯಾಹ್ನ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಸಂಭವಿಸಿದ ಜಾಗ್ವಾರ್ ಯುದ್ಧ ವಿಮಾನದಲ್ಲಿ ಇಬ್ಬರು ಭಾರತೀಯ ವಾಯುಪಡೆಯ ಪೈಲಟ್ ಗಳು ಮೃತಪಟ್ಟಿದ್ದಾರೆ. ಈ ಪೈಕಿ ಓರ್ವ ಪೈಲಟ್ ಯುವ ಅಧಿಕಾರಿಯಾಗಿದ್ದರೆ, ಮತ್ತೋರ್ವ ಪೈಲಟ್ ಈಗಷ್ಟೇ ನವಜಾತು ಶಿಶುವಿಗೆ ತಂದೆಯಾಗಿದ್ದ ಅಧಿಕಾರಿ ಎಂಬ ಹೃದಯ ಕಲಕುವ ಸಂಗತಿ ಬೆಳಕಿಗೆ ಬಂದಿದೆ.
ದೈನಂದಿನ ತರಬೇತಿ ಕಾರ್ಯಕ್ರಮದ ಭಾಗವಾಗಿ ಹಾರಾಟ ನಡೆಸುತ್ತಿದ್ದ ಜಾಗ್ವಾರ್ ಯುದ್ಧ ವಿಮಾನ, ನಿನ್ನೆ ಮಧ್ಯಾಹ್ನ ಸುಮಾರು 1.25ರ ವೇಳೆಗೆ ಕೃಷಿ ಭೂಮಿಯೊಂದರಲ್ಲಿ ಪತನಗೊಂಡಿತ್ತು. ಕಳೆದ ಐದು ತಿಂಗಳಲ್ಲಿ ಇದು ಐದನೆಯ ಜಾಗ್ವಾರ್ ವಿಮಾನ ಪತನ ದುರಂತವಾಗಿದ್ದು, ಇದು ಈ ವಿಮಾನ ಮಾದರಿಯ ಬಗ್ಗೆ ಹೊಸ ಬಗೆಯ ಆತಂಕಕ್ಕೆ ಕಾರಣವಾಗಿದೆ.
ಈ ದುರಂತದಲ್ಲಿ ಮೃತಪಟ್ಟ ಸ್ಕ್ವಾಡ್ರನ್ ಲೀಡರ್ ಲೋಕೇಂದರ್ ಸಿಂಗ್ ಸಿಂಧು (31) ಹಾಗೂ ವಿಮಾನದ ಲೆಫ್ಟಿನೆಂಟ್ ರಿಷಿ ರಾಜ್ ಸಿಂಗ್ (23) ಇಬ್ಬರೂ ಪೈಲಟ್ ಗಳು ತಮ್ಮ ಅರ್ಪಣಾ ಮನೋಭಾವ ಹಾಗೂ ವೃತ್ತಿಪರತೆಗೆ ಹೆಸರಾಗಿದ್ದರು. ಈ ಪೈಕಿ ಲೋಕೇಂದರ್ ಸಿಂಗ್ ಸಿಂಧು ಈಗಷ್ಟೇ ನವಜಾತ ಶಿಶುವಿಗೆ ತಂದೆಯಾಗಿದ್ದರೆ, ರಿಷಿ ರಾಜ್ ಸಿಂಗ್ ಉಜ್ವಲ ವೃತ್ತಿಜೀವನದ ಭರವಸೆ ಮೂಡಿಸಿದ್ದ ಯುವ ಅಧಿಕಾರಿಯಾಗಿದ್ದರು.
ಈ ಇಬ್ಬರ ಮೃತದೇಹಗಳು ಅಪಘಾತದ ಸ್ಥಳದಲ್ಲಿ ಗುರುತಿಸಲಸಾಧ್ಯವಾದ ರೀತಿಯಲ್ಲಿ ಪತ್ತೆಯಾಗಿತ್ತು. ಅವರಿಬ್ಬರ ನಿಧನಕ್ಕೆ ಕುಟುಂಬದ ಸದಸ್ಯರು, ಸಹೋದ್ಯೋಗಿಗಳು ಹಾಗೂ ಸ್ಥಳೀಯರು ಸಂತಾಪ ವ್ಯಕ್ತಪಡಿಸಿದ್ದಾರೆ.