ಮಧ್ಯಪ್ರದೇಶ | ರಾಹುಲ್ ಗಾಂಧಿ, ಪ್ರಿಯಾಂಕಾ ವಿರುದ್ಧ ಬಿಜೆಪಿ ಸಚಿವನಿಂದ ವಿವಾದಾತ್ಮಕ ಹೇಳಿಕೆ
ಕೈಲಾಶ್ ವಿಜಯವರ್ಗೀಯ (Photo: PTI)
ಭೋಪಾಲ್: ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯವರ್ಗೀಯ, ನಾವು ಹಳೆಯ ಸಂಸ್ಕೃತಿಯ ಜನರು. ನಮ್ಮ ಸಹೋದರಿಯರ ಹಳ್ಳಿಯಲ್ಲಿ ನಾವು ನೀರನ್ನು ಕೂಡ ಕುಡಿಯುವುದಿಲ್ಲ. ನನ್ನ ಚಿಕ್ಕಮ್ಮ ವಾಸಿಸುತ್ತಿದ್ದ ಜಿರಾಪುರಕ್ಕೆ ಹೋಗುವಾಗ ನನ್ನ ತಂದೆ ಮನೆಯಿಂದ ನೀರಿನ ಪಾತ್ರೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಇಂದಿನ ನಮ್ಮ ವಿರೋಧ ಪಕ್ಷದ ನಾಯಕರು ತಮ್ಮ ಸಹೋದರಿಯನ್ನು ನಡುರಸ್ತೆಯ ಮಧ್ಯದಲ್ಲಿ ಚುಂಬಿಸುವಷ್ಟು ದುರ್ಬಲರಾಗಿದ್ದಾರೆ. ನಿಮ್ಮಲ್ಲಿ ಯಾರು ನಿಮ್ಮ ಸಹೋದರಿಯರನ್ನು ಅಥವಾ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಚುಂಬಿಸುತ್ತಾರೆ ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ? ಇದು ಮೌಲ್ಯಗಳ ಕೊರತೆ. ಇವು ವಿದೇಶದಲ್ಲಿ ಬೆಳೆದ ವಿದೇಶಿ ಮೌಲ್ಯಗಳು. ಅವರು ಪ್ರಧಾನಿ ಬಗ್ಗೆ ಕೂಡ ಅಸಭ್ಯವಾಗಿ ಮಾತನಾಡುತ್ತಾರೆ ಎಂದು ಹೇಳಿದರು.
ನಂತರ NDTV ಜೊತೆ ಮಾತನಾಡಿದ ವಿಜಯವರ್ಗೀಯ, "ಇದು ಅವರ (ರಾಹುಲ್ ಗಾಂಧಿಯವರ) ತಪ್ಪಲ್ಲ. ವಿರೋಧ ಪಕ್ಷದ ನಾಯಕರು ವಿದೇಶದಲ್ಲಿ ಅಧ್ಯಯನ ಮಾಡಿ ಆ ಮೌಲ್ಯಗಳನ್ನು ಆಮದು ಮಾಡಿಕೊಂಡರು. ಅವರಿಗೆ ಭಾರತೀಯ ಸಂಪ್ರದಾಯಗಳು ಅರ್ಥವಾಗುವುದಿಲ್ಲ" ಎಂದು ಹೇಳಿದರು.
ವಿಜಯವರ್ಗೀಯ ಹೇಳಿಕೆಗೆ ಕಾಂಗ್ರೆಸ್ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಜಿತು ಪಟ್ವಾರಿ, ಕೈಲಾಶ್ ವಿಜಯವರ್ಗಿಯ ಅವರು ಸಹೋದರ-ಸಹೋದರಿಯರ ಪವಿತ್ರ ಬಾಂಧವ್ಯವನ್ನು ಅವಮಾನಿಸಲು ಮಾತೃ ದೇವತೆಯನ್ನು ಪೂಜಿಸುವ ಹಬ್ಬವಾದ ನವರಾತ್ರಿಯನ್ನು ಆಯ್ದುಕೊಂಡಿದ್ದಾರೆ. ಅವರ ಭಾಷೆ ಎಲ್ಲರಿಗೂ ತಿಳಿದಿದೆ. ಅವರು ಮಹಿಳೆಯರನ್ನು ಪದೇ ಪದೇ ಅವಮಾನಿಸಿದ್ದಾರೆ. ಕೆಲವೊಮ್ಮೆ ಅವರ ಬಟ್ಟೆ, ಕೆಲವೊಮ್ಮೆ ಅವರ ಶಿಕ್ಷಣ, ಕೆಲವೊಮ್ಮೆ ಅವರ ಮಾತಿನ ಬಗ್ಗೆ ಮಾತನಾಡಿದ್ದಾರೆ. ಇದು ಸಹೋದರಿಯರು ಮತ್ತು ಹೆಣ್ಣುಮಕ್ಕಳ ಬಗ್ಗೆ ಅವರ ಚಿಂತನೆಯನ್ನು ಬಹಿರಂಗಪಡಿಸುತ್ತದೆ. ಇಂತಹ ನಾಚಿಕೆಯಿಲ್ಲದ ಹೇಳಿಕೆಗೆ ಪ್ರತಿಕ್ರಿಯಿಸಲು ನನಗೆ ನಾಚಿಕೆಯಾಗುತ್ತಿದೆ ಎಂದು ಹೇಳಿದರು.