ರಾಜಸ್ಥಾನ: ತಲೆ ಬೋಳಿಸಿ ಅಶೋಕ್ ಗೆಹ್ಲೋಟ್ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್ ಶಾಸಕ
ಕಾಂಗ್ರೆಸ್ ಶಾಸಕ ಭರತ್ ಸಿಂಗ್ (Photo credit: Twitter/@NewsArenaIndia)
ಕೋಟಾ (ರಾಜಸ್ಥಾನ): ಮಂಗಳವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಪ್ರತಿಭಟನಾರ್ಥವಾಗಿ ತಲೆ ಬೋಳಿಸಿಕೊಂಡಿರುವ ಕಾಂಗ್ರೆಸ್ ಶಾಸಕ ಭರತ್ ಸಿಂಗ್, ತನ್ನ ಸಲಹೆಯ ಹೊರತಾಗಿಯೂ ಭ್ರಷ್ಟ ಸಚಿವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ರಾಜ್ಯ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಅಶೋಕ್ ಚಂದನ ತಮ್ಮದೇ ಸರ್ಕಾರದ ವಿರುದ್ಧ ಬುಂದಿ ಜಿಲ್ಲಾ ಕೇಂದ್ರದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಧರಣಿ ನಡೆಸಿದ ನಾಲ್ಕು ದಿನಗಳ ನಂತರ ಈ ಘಟನೆ ನಡೆದಿದೆ.
ಇದಕ್ಕೂ ಮುನ್ನ, ಅಶೋಕ್ ಗೆಹ್ಲೋಟ್ ಅವರಿಗೆ ಪತ್ರವನ್ನೂ ಬರೆದಿದ್ದ ಭರತ್ ಸಿಂಗ್, ತಾವು ಭಯ್ಯಾ ಎಂದು ಉಲ್ಲೇಖಿಸಿರುವ ರಾಜ್ಯ ಗಣಿ ಸಚಿವ ಪ್ರಮೋದ್ ಜೈನ್ ಭಯ್ಯಾ ಅವರನ್ನು ನೀವು ರಕ್ಷಿಸುತ್ತಿದ್ದೀರಿ ಎಂದು ಆರೋಪಿಸಿದ್ದರು..
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭರತ್ ಸಿಂಗ್, “ಇದು ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆಯ ಸಂಕೇತ” ಎಂದು ಹೇಳಿದ್ದಾರೆ.