ಅರಣ್ಯ ಭೂಮಿಯಲ್ಲಿ ಅದಾನಿ ಥರ್ಮಲ್ ಪ್ಲಾಂಟ್ ನಿರ್ಮಾಣ: ಕೇಂದ್ರ, ಉತ್ತರ ಪ್ರದೇಶ ಸರಕಾರಗಳಿಗೆ ಎನ್ಜಿಟಿ ನೋಟಿಸ್
ಸಾಂದರ್ಭಿಕ ಚಿತ್ರ | PC : adanipower.com
ಹೊಸದಿಲ್ಲಿ: ಮಿರ್ಜಾಪುರ ಅರಣ್ಯ ವಿಭಾಗದಲ್ಲಿ ಅರಣ್ಯ ಭೂಮಿಯಲ್ಲಿ ನಿರ್ಮಾಣ ಮಾಡುವುದನ್ನು ನಿಷೇಧಿಸಿರುವ ತನ್ನ 2016ರ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ)ಯು, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರ ಮತ್ತು ಮಿರ್ಜಾಪುರ ಥರ್ಮಲ್ ಎನರ್ಜಿ ಯುಪಿ ಪ್ರೈವೇಟ್ ಲಿಮಿಟೆಡ್ಗೆ ನೋಟಿಸ್ ಜಾರಿ ಮಾಡಿದೆ.
ಅದಾನಿ ಪವರ್ನ ಅಂಗಸಂಸ್ಥೆಯಾದ ಕಂಪೆನಿಯು ಅರಣ್ಯ ಭೂಮಿಯಲ್ಲಿ ಅತಿಕ್ರಮಣ ಮಾಡಿ ಅಕ್ರಮವಾಗಿ ಗೋಡೆಗಳು ಮತ್ತು ರಸ್ತೆಗಳನ್ನು ನಿರ್ಮಿಸಲು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಅರಣ್ಯ ಭೂಮಿಯು ಉತ್ತರ ಪ್ರದೇಶದ ಮಿರ್ಜಾಪುರ ಅರಣ್ಯ ವಿಭಾಗದಲ್ಲಿ ಪ್ರಸ್ತಾವಿತ ಕರಡಿ ಸಂರಕ್ಷಣಾ ಮೀಸಲು ಪ್ರದೇಶ ಆಗಿದೆ. ಅಲ್ಲದೇ ಈ ಪ್ರದೇಶವು
ವಿಂಧ್ಯನ್-ಕೈಮೂರ್ ಪರಿಸರ ವ್ಯವಸ್ಥೆಗೆ ವಿಶಿಷ್ಟವಾಗಿರುವ ಕನಿಷ್ಠ 24 ಅಳಿವಿನಂಚಿನಲ್ಲಿರುವ ವನ್ಯಜೀವಿಗಳಿಗೆ ಅರಣ್ಯವು ಆವಾಸಸ್ಥಾನವಾಗಿದೆ.
ಡಿಸೆಂಬರ್ 21, 2016 ರಂದು, ಹಸಿರು ನ್ಯಾಯಮಂಡಳಿಯು ಮಿರ್ಜಾಪುರದ ದಾದ್ರಿ ಖುರ್ದ್ ಗ್ರಾಮದಲ್ಲಿ 2x660 MW ಸೂಪರ್ ಕ್ರಿಟಿಕಲ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ವಿದ್ಯುತ್ ಕಂಪನಿ ವೆಲ್ಸ್ಪನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ಗೆ ಅನುಮತಿ ನಿರಾಕರಿಸಿತು. ಪ್ರಸ್ತುತ, ಸ್ಥಾವರವನ್ನು ಅದಾನಿ ಸಮೂಹದ ಒಡೆತನದ ಮಿರ್ಜಾಪುರ ಎನರ್ಜಿ ಯುಪಿ ಪ್ರೈವೇಟ್ ಲಿಮಿಟೆಡ್ಗೆ ವರ್ಗಾಯಿಸಲಾಗಿದೆ.
ಆಗಸ್ಟ್ 21, 2014 ರ ದಿನಾಂಕದಂದು ಹಸಿರು ನ್ಯಾಯಮಂಡಳಿಯು ಅನುಮತಿ ಮಂಜೂರು ಮಾಡುವ ಪ್ರಸ್ತಾಪದ ಪರಿಗಣನೆ ಮತ್ತು ಮೌಲ್ಯಮಾಪನದ ಸಂಪೂರ್ಣ ಪ್ರಕ್ರಿಯೆಯು ಕಳಂಕಿತವಾಗಿದೆ ಎಂದು ಸಾಕ್ಷ್ಯವನ್ನು ತೋರಿಸಿದ ನಂತರ ಅನುಮತಿ ರದ್ದುಗೊಳಿಸಿತು. ಎನ್ಜಿಟಿಯು ಸ್ಥಳೀಯ ಸಮುದಾಯದ ಪರಿಸರ ಮತ್ತು ಜೀವನೋಪಾಯವನ್ನು ಕಾಪಾಡಲು ನಿಯಮಗಳು ಮತ್ತು ನಿಬಂಧನೆಗಳನ್ನು ಹಾಕಿದೆ.
ದ್ವಿಸದಸ್ಯ ಎನ್ಜಿಟಿ ಪೀಠದ ಆದೇಶದ ನಂತರ, ಮಿರ್ಜಾಪುರ ಜಿಲ್ಲಾಡಳಿತ ಕಚೇರಿಯಲ್ಲಿ ಜಮಾಯಿಸಿದ ಹೆಚ್ಚಿನ ಸಂಖ್ಯೆಯ ರೈತರು ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಭೂಮಿಯನ್ನು ಬಲವಂತವಾಗಿ ನೋಂದಾಯಿಸಿದ್ದಾರೆ ಎಂದು ಆರೋಪಿಸಿ ಅದನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಅವರು ಜಿಲ್ಲಾಧಿಕಾರಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿ, ಕಂಪೆನಿಯು ತಮ್ಮ ಭೂಮಿಯನ್ನು ಹೇಗೆ ಕಿತ್ತುಕೊಂಡಿತು ಎಂಬುದನ್ನು ವಿವರಿಸಿ ಪ್ರಧಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರಗಳನ್ನು ಬರೆದರು.
"ನ್ಯಾಯಾಲಯದ ಆದೇಶದ ಹೊರತಾಗಿಯೂ ಕಂಪೆನಿಯು ತನ್ನ ಕೆಲಸವನ್ನು ನಿಲ್ಲಿಸಿಲ್ಲ" ಎಂದು ಕಂಪೆನಿಯು ನೋಂದಾಯಿಸಿದೆ ಎಂದು ಹೇಳಲಾದ ಜಮೀನಿನ ರೈತ ತ್ರಿಲೋಕಿ ನಾಥ್ ದುಬೆ ಹೇಳಿದರು.