ಉತ್ತರಪ್ರದೇಶ | ಕೃಷಿಕನನ್ನು ಕೊಂದು ಹಾಕಿದ ನರಭಕ್ಷಕ ಹುಲಿ
PC : PTI
ಉತ್ತರಪ್ರದೇಶ: ಲಖಿಂಪುರ ಖೇರಿಯ ದುಧ್ವಾ ಬಫರ್ ವಲಯ ಪ್ರದೇಶದ ಮಜ್ಗೈನ್ ವ್ಯಾಪ್ತಿಯಲ್ಲಿ 25 ವರ್ಷದ ಕೃಷಿಕನನ್ನು ನರಭಕ್ಷಕ ಹುಲಿ ಕೊಂದು ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಜ್ಗೈನ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಪುರದ ನಿವಾಸಿ ಬಾಬುರಾಮ್ ಕೆಲಸದಲ್ಲಿದ್ದಾಗ ಸಮೀಪದ ಅರಣ್ಯದಿಂದ ದಾರಿ ತಪ್ಪಿ ಬಂದ ಹುಲಿ ಅವರ ಮೇಲೆ ದಾಳಿ ಮಾಡಿ ಕಬ್ಬಿನ ಗದ್ದೆಗೆ ಎಳೆದೊಯ್ದಿದೆ. ಸಂಜೆಯ ವೇಳೆ ಬಾಬುರಾಮ್ ಅವರ ಭಾಗಶಃ ತಿಂದು ಹಾಕಿದ ದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾರ್ಮಿಕನನ್ನು ಹುಲಿ ತಿಂದು ಹಾಕಿದ ಸುದ್ದಿ ತಿಳಿದು ದುಧ್ವಾ ಬಫರ್ ವಲಯದ ಉಪನಿರ್ದೇಶಕ ಸುಂದರೇಶ್ ಸ್ಥಳಕ್ಕೆ ಧಾವಿಸಿದ್ದಾರೆ.
ತನಿಖೆಯ ಬಳಿಕ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ಫೀಲ್ಡ್ ಡೈರೆಕ್ಟರ್ ಲಲಿತ್ ವರ್ಮಾ ಹೇಳಿದ್ದಾರೆ.
ಈ ಮಧ್ಯೆ, ದಕ್ಷಿಣ ಖೇರಿ ಅರಣ್ಯ ವಿಭಾಗದ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಶಾರದಾನಗರ ಅರಣ್ಯ ವ್ಯಾಪ್ತಿಯಲ್ಲಿ ಚಿರತೆಯನ್ನು ಬಲೆಗೆ ಬೀಳಿಸಿದ್ದಾರೆ ಎಂದು ತಿಳಿಸಿದ್ದಾರೆ.