ತಮಿಳುನಾಡು | ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ: ಒಂದು ವರ್ಷದ ಮಗು ಸಹಿತ ಒಂದೇ ಕುಟುಂಬದ ನಾಲ್ವರು ಮೃತ್ಯು
Photo credit: indiatoday
ಮಧುರೈ: ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿಯಾದ ಪರಿಣಾಮ, ಒಂದು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಭೀಕರ ಘಟನೆ ಶನಿವಾರ ಮಧುರೈ ಜಿಲ್ಲೆಯ ಉಸಿಲಾಂಪಟ್ಟಿಯ ಕುಂಜಂಪಟ್ಟಿ ಬಳಿ ನಡೆದಿದೆ.
ಮೃತರನ್ನು ಪಾಂಡಿಸೆಲ್ವಿ, ಜೋತಿಕಾ, ಲಕ್ಷ್ಮಿ ಹಾಗೂ ಇನ್ನೂ ಹೆಸರಿಡದ ಒಂದು ವರ್ಷದ ಶಿಶು ಎಂದು ಗುರುತಿಸಲಾಗಿದೆ. ಉಸಿಲಾಂಪಟ್ಟಿನಲ್ಲಿನ ದೇವಾಲಯವೊಂದಕ್ಕೆ ಭೇಟಿ ನೀಡಿ ಮನೆಗೆ ಮರಳುತ್ತಿದ್ದಾಗ ಘಟನೆ ನಡೆದಿದೆ.
ದೇವಾಲಯವೊಂದಕ್ಕೆ ಭೇಟಿ ನೀಡಿ ಮನೆಗೆ ಮರಳುತ್ತಿದ್ದ 7 ಮಂದಿಯ ಗುಂಪು ಬಸ್ ನಿಲ್ದಾಣದಲ್ಲಿ ಇಳಿದಿದ್ದು, ರಸ್ತೆಯನ್ನು ದಾಟಲು ಮುಂದಾಗಿದೆ. ಆ ವೇಳೆಗೆ ವೇಗವಾಗಿ ಬಂದ ಕಾರೊಂದು ಅವರಿಗೆ ಢಿಕ್ಕಯಾಗಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ ಇನ್ನುಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯರ ನೆರವಿನೊಂದಿಗೆ ಉಸಿಲಾಂಪಟ್ಟಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಪಘಾತದ ನಂತರ, ಸ್ಥಳದಿಂದ ಪರಾರಿಯಾಗಿ, ತಲೆಮರೆಸಿಕೊಂಡಿರುವ ಕಾರಿನ ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ.