×
Ad

ಉರ್ದು ಭಾಷೆಯ ಅತಿಯಾದ ಬಳಕೆ ವಿರುದ್ಧ ಹಿಂದಿ ಸುದ್ದಿವಾಹಿನಿಗಳಿಗೆ ಕೇಂದ್ರ ಸರಕಾರ ನೋಟಿಸ್ ನೀಡಿಲ್ಲ : ಪಿಐಬಿ ಸ್ಬಷ್ಟನೆ

Update: 2025-09-21 20:48 IST

PC - X/@PIBFactCheck

ಹೊಸದಿಲ್ಲಿ,ಸೆ.21: ಹಿಂದಿ ಸುದ್ದಿವಾಹಿನಿಗಳು ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ಉರ್ದು ಭಾಷೆಯನ್ನು ಅತಿಯಾಗಿ ಬಳಸಲಾಗುತ್ತಿರುವುದಕ್ಕೆ ಸಂಬಂಧಿಸಿ ಅವುಗಳಿಗೆ ಕೇಂದ್ರ ಸರಕಾರವು ನೋಟಿಸ್‌ ಜಾರಿಗೊಳಿಸಿದೆ ಎಂಬ ವರದಿಯನ್ನು ಭಾರತೀಯ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ)ದ ಸತ್ಯಶೋಧನಾ ವಿಭಾಗವು ರವಿವಾರ ತಳ್ಳಿಹಾಕಿದೆ.

ಕೇಬಲ್ ಟಿವಿ ಜಾಲ ನಿಯಂತ್ರಣ ಕಾಯ್ದೆಯಡಿ ವೀಕ್ಷಕರೊಬ್ಬರು ಈ ವಿಷಯವಾಗಿ ಸಂಬಂಧಪಟ್ಟ ಚಾನೆಲ್‌ ಬಗ್ಗೆ ನೀಡಿದ್ದ ದೂರನ್ನು ಕೇಂದ್ರ ಮಾಹಿತಿ ಹಾಗೂ ಪ್ರಸಾರ ( ಎಂಐಬಿ) ಸಚಿವಾಲಯವು ಅವುಗಳಿಗೆ ಫಾರ್ವರ್ಡ್‌ ಮಾಡಿದೆಯಷ್ಟೇ ಎಂದು ಸತ್ಯಶೋಧನಾ ಘಟಕವು ತಿಳಿಸಿದೆ.

ಈ ಬಗ್ಗೆ ಪಿಐಬಿಯು, ಸಾಮಾಜಿಕ ಜಾಲತಾಣದಲ್ಲಿ ರವಿವಾರ ಪ್ರಕಟಿಸಿದ ಪೋಸ್ಟ್‌ನಲ್ಲಿ ಸ್ಪಷ್ಟನೆ ನೀಡಿದೆ. ‘‘ಕೆಲವು ನಿರ್ದಿಷ್ಟ ಹಿಂದಿ ಸುದ್ದಿ ವಾಹಿನಿಗಳು ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ಉರ್ದು ಪದಗಳನ್ನು ಅತಿಯಾಗಿ ಬಳಸುತ್ತಿರುವುದಕ್ಕಾಗಿ ಅವುಗಳಿಗೆ ಕೇಂದ್ರ ಮಾಹಿತಿ ಸಚಿವಾಲಯವು ನೋಟಿಸ್ ಜಾರಿಗೊಳಿಸಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿವೆ. ಇಂತಹ ವರದಿಯು ದಾರಿತಪ್ಪಿಸುವಂತಹದ್ದಾಗಿದೆ’’ ಎಂದು ಅದು ಹೇಳಿದೆ.

ಆದರೆ ಸಚಿವಾಲಯವು ಈ ವಿಷಯವಾಗಿ ವೀಕ್ಷಕರೊಬ್ಬರು ನೀಡಿದ್ದ ದೂರನ್ನು ಕೇಬಲ್ ಟಿವಿ ಜಾಲ ನಿಯಂತ್ರಣ ಕಾಯ್ದೆಯ ನಿಯಮಾವಳಿಗಳಡಿ, ಸಂಬಂಧಪಟ್ಟ ಸುದ್ದಿವಾಹಿನಿಗಳಿಗೆ ಫಾರ್ವರ್ಡ್ ಮಾಡಿದೆ. ಪ್ರಸಕ್ತ ನಿಯಮಾವಳಿಗಳಡಿ ಈ ವಿಷಯವಾಗಿ ಕೈಗೊಂಡ ಕ್ರಮಗಳ ಬಗ್ಗೆ ದೂರುದಾರನಿಗೆ ಮಾಹಿತಿ ನೀಡುವಂತೆ ಹಾಗೂ ಸಚಿವಾಲಯಕ್ಕೂ ತಿಳಿಸುವಂತೆ ಸಂಬಂಧಿತ ಸುದ್ದಿವಾಹಿನಿಗಳಿಗೆ ತಿಳಿಸಲಾಗಿದೆ’’ ಎಂದು ಪಿಐಬಿಯು ಎಕ್ಸ್‌ನಲ್ಲಿ ಪ್ರಸಾರ ಮಾಡಿದ ಪೋಸ್ಟ್‌ನಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News