×
Ad

ಗುಜರಾತ್:‌ ಯುವಕರಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸ್‌ ಅಧಿಕಾರಿಗಳಿಗೆ 14 ದಿನಗಳ ಜೈಲು ಶಿಕ್ಷೆ

Update: 2023-10-19 15:20 IST

Photo: livelaw.in

ಅಹಮದಾಬಾದ್:‌ ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಐವರು ಮುಸ್ಲಿಂ ಯುವಕರಿಗೆ ಸಾರ್ವಜನಿಕವಾಗಿ ಥಳಿಸಿದ್ದಕ್ಕಾಗಿ ಗುಜರಾತ್ ಹೈಕೋರ್ಟ್ 4 ಗುಜರಾತ್ ಪೊಲೀಸ್ ಅಧಿಕಾರಿಗಳನ್ನು ನ್ಯಾಯಾಲಯದಿಂದ ನಿಂದನೆ ತಪ್ಪಿತಸ್ಥರೆಂದು ಘೋಷಿಸಿದ್ದು, ಅಪರಾಧಿಗಳಿಗೆ 14 ದಿನಗಳ ಸರಳ ಜೈಲು ಶಿಕ್ಷೆ ವಿಧಿಸಿದೆ.

ಅಲ್ಲದೆ, ಅಪರಾಧಿ ಪೊಲೀಸರಿಗೆ ತಲಾ 2 ಸಾವಿರ ರೂ. ದಂಡವನ್ನು ವಿಧಿಸಿದ್ದು, ದಂಡ ತೆರಲು ತಪ್ಪಿದ್ದಲ್ಲಿ ಇನ್ನೂ ಮೂರು ದಿನಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ಎಚ್ಚರಿಸಿದೆ.

ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರೋಪಿ ಪರ ವಕೀಲರು ಅವಕಾಶ ಕೋರಿದ ಹಿನ್ನೆಲೆಯಲ್ಲಿ ಶಿಕ್ಷೆಯ ಆದೇಶವನ್ನು ಮೂರು ತಿಂಗಳ ಕಾಲ ತಡೆಹಿಡಿಯಲಾಗಿದೆ.

ನ್ಯಾಯಮೂರ್ತಿ ಎಎಸ್ ಸುಪೇಹಿಯಾ ಮತ್ತು ನ್ಯಾಯಮೂರ್ತಿ ಗೀತಾ ಗೋಪಿ ಅವರ ಪೀಠವು ಈ ಆದೇಶವನ್ನು ನೀಡಿದೆ.

ಇದಕ್ಕೂ ಮುನ್ನ ಅಕ್ಟೋಬರ್ 4 ರಂದು ಸ್ಥಳೀಯ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ (ಎವಿ. ಪರ್ಮಾರ್), ಸಬ್ ಇನ್ಸ್‌ಪೆಕ್ಟರ್ (ಡಿ.ಬಿ. ಕುಮಾವತ್), ಹೆಡ್ ಕಾನ್‌ಸ್ಟೆಬಲ್ (ಕನಕ್‌ಸಿಂಗ್ ಲಕ್ಷ್ಮಣ್ ಸಿಂಗ್) ಮತ್ತು ಒಬ್ಬ ಕಾನ್‌ಸ್ಟೆಬಲ್ (ರಾಜು ರಮೇಶ್‌ಭಾಯ್ ದಾಭಿ) ವಿರುದ್ಧ ನ್ಯಾಯಾಂಗ ನಿಂದನೆ ಆರೋಪಗಳನ್ನು ರೂಪಿಸುವ ಆದೇಶವನ್ನು ಹೈಕೋರ್ಟ್ ನೀಡಿತ್ತು.

ಆದರೆ, ಅಕ್ಟೋಬರ್ 16 ರಂದು, ಅಪರಾಧಿ ಪೊಲೀಸರಿಂದ ಹಣದ ಪರಿಹಾರವನ್ನು ಸ್ವೀಕರಿಸಲು ಸಂತ್ರಸ್ತರು ನಿರಾಕರಿಸಿದ್ದರು.

ಕಳೆದ ವರ್ಷ ಖೇಡಾ ಜಿಲ್ಲೆಯ ಮಟರ್ ಪೊಲೀಸ್ ಠಾಣೆಯ ಪೊಲೀಸರು ಐವರು ಸಂತ್ರಸ್ತರನ್ನು ಸಾರ್ವಜನಿಕವಾಗಿ ಥಳಿಸಿದ್ದರು. ಖೇಡಾ ಜಿಲ್ಲೆಯ ಮತರ್ ತಾಲೂಕಿನ ಉಂಧೇಲಾ ಗ್ರಾಮದಲ್ಲಿ ನಡೆದ ಕೋಮು ಘರ್ಷಣೆಯ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News