ತಾಲಿಬಾನ್ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ; ʼನಮ್ಮ ಪಾತ್ರವಿಲ್ಲʼ ಎಂದ ಕೇಂದ್ರ ಸರಕಾರ
Photo credit: PTI
ಹೊಸದಿಲ್ಲಿ: ಶುಕ್ರವಾರ ದಿಲ್ಲಿಯಲ್ಲಿ ತಾಲಿಬಾನ್ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ನಿಷೇಧ ವಿಧಿಸಿದ ಕ್ರಮದ ವಿರುದ್ಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳಿಂದ ಟೀಕೆ ವ್ಯಕ್ತವಾದ ಬೆನ್ನಿಗೇ, ಅಫ್ಘನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಶನಿವಾರ ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ.
ಈ ಕುರಿತು ಸ್ಪಷ್ಟನೆ ಬಿಡುಗಡೆ ಮಾಡಿರುವ ಅಧಿಕೃತ ಮೂಲಗಳು, “ಶುಕ್ರವಾರ ಅಫ್ಘನ್ ವಿದೇಶಾಂಗ ಸಚಿವರು ದಿಲ್ಲಿಯಲ್ಲಿ ನಡೆಸಿದ ಮಾಧ್ಯತಮ ಸಂವಾದದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಯಾವುದೇ ಪಾತ್ರವಿಲ್ಲ” ಎಂದು ಹೇಳಿವೆ.
ಮುತ್ತಖಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಯಾವುದೇ ಮಹಿಳಾ ಪತ್ರಕರ್ತರು ಉಪಸ್ಥಿತರಿರದಿದ್ದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ತಾಲಿಬಾನ್ ಸಚಿವರು ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಕೇವಲ ಪುರುಷ ಪತ್ರಕರ್ತರು ಉಪಸ್ಥಿತರಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಈ ಘಟನೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, “ಮಾನ್ಯ ಮೋದಿಯವರೆ, ಸಾರ್ವಜನಿಕ ವೇದಿಕೆಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಡಲು ಅವಕಾಶ ನೀಡುವ ಮೂಲಕ, ನಾನು ನಿಮ್ಮ ಬೆಂಬಲಕ್ಕೆ ನಿಲ್ಲಲಾರದಷ್ಟು ದುರ್ಬಲನಾಗಿದ್ದೇನೆ ಎಂಬ ಸಂದೇಶವನ್ನು ಭಾರತೀಯ ಮಹಿಳೆಯರಿಗೆ ರವಾನಿಸಿದ್ದೀರಿ” ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ನಾರಿ ಶಕ್ತಿ ಘೋಷಣೆಯನ್ನೂ ವ್ಯಂಗ್ಯವಾಡಿದ್ದ ರಾಹುಲ್ ಗಾಂಧಿ, “ನಮ್ಮ ದೇಶದಲ್ಲಿ ಪ್ರತಿಯೊಬ್ಬ ಮಹಿಳೆಗೂ ಎಲ್ಲ ಸ್ಥಳಗಳಲ್ಲೂ ಭಾಗವಹಿಸುವ ಸಮಾನ ಹಕ್ಕಿದೆ. ಆದರೆ, ಇಂತಹ ತಾರತಮ್ಯದ ಕುರಿತ ನಿಮ್ಮ ಮೌನವು, ನಿಮ್ಮ ನಾರಿ ಶಕ್ತಿ ಘೋಷಣೆಯ ಖಾಲಿತನವನ್ನು ಬಯಲುಗೊಳಿಸಿದೆ” ಎಂದು ತರಾಟೆಗೆ ತೆಗೆದುಕೊಂಡಿದ್ದರು.