ಹರ್ಯಾಣ | ಥಳಿಸಿ ಸಬ್ ಇನ್ಸ್ಪೆಕ್ಟರ್ ಹತ್ಯೆ
ಸಾಂದರ್ಭಿಕ ಚಿತ್ರ
ಚಂಡಿಗಢ, ನ. 7: ಹರ್ಯಾಣದ ಹಿಸಾರ್ ನಲ್ಲಿರುವ ತಮ್ಮ ಮನೆಯ ಹೊರಗೆ ಜನರ ಗುಂಪೊಂದು ಗಲಾಟೆ ಮಾಡುತ್ತಿರುವುದನ್ನು ತಡೆಯಲು ಪ್ರಯತ್ನಿಸಿದ ಹರ್ಯಾಣ ಪೊಲೀಸ್ನ ಸಬ್ ಇನ್ಸ್ಪೆಕ್ಟರ್ ರಮೇಶ್ ಕುಮಾರ್ ಅವರನ್ನು ಇಟ್ಟಿಗೆ ಹಾಗೂ ದೊಣ್ಣೆಗಳಿಂದ ಥಳಿಸಿ ಬರ್ಬರವಾಗಿ ಹತ್ಯೆಗೈಯಲಾಗಿದೆ.
ಹಿಸಾರ್ ನ ಶಾಮ್ಲಾಲ್ ಧನಿಯಲ್ಲಿರುವ ಕುಮಾರ್ ಅವರ ನೆರೆಯಲ್ಲಿ ಯುವಕರ ಗುಂಪೊಂದು ಗುರುವಾರ ಮಧ್ಯರಾತ್ರಿ ಗದ್ದಲ ಉಂಟು ಮಾಡಿದ ಸಂದರ್ಭ ಈ ಘಟನೆ ನಡೆದಿದೆ.
ಯುವಕರ ಗುಂಪಿನ ಗದ್ದಲ ಕೇಳಿ ಕುಮಾರ್ ಅವರು ಮನೆಯಿಂದ ಹೊರಗೆ ಬಂದರು ಹಾಗೂ ಅವರ ಅಸಭ್ಯ ಭಾಷೆ ಬಳಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಆರಂಭದಲ್ಲಿ ಗುಂಪು ಸ್ಥಳದಿಂದ ತೆರಳಿತು. ಆದರೆ, ಗಂಟೆಯ ಬಳಿಕ ಇನ್ನಷ್ಟು ಜನರೊಂದಿಗೆ ಕಾರು ಹಾಗೂ ಬೈಕ್ಗಳಲ್ಲಿ ಆಗಮಿಸಿತು. ಕುಮಾರ್ ಅವರ ಮನೆ ಮುಂದೆ ಮತ್ತೆ ಗಲಾಟೆ ಆರಂಭಿಸಿತು. ಕುಮಾರ್ ಅವರು ಮತ್ತೆ ಮಧ್ಯೆಪ್ರವೇಶಿಸಿದಾಗ ಗುಂಪು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿತು ಹಾಗೂ ಇಟ್ಟಿಗೆ ಹಾಗೂ ದೊಣ್ಣೆಗಳಿಂದ ಹಲ್ಲೆ ನಡೆಸಿತು. ಇದರಿಂದ ಗಂಭೀರ ಗಾಯಗೊಂಡ ಕುಮಾರ್ ಸ್ಥಳದಲ್ಲೇ ಮೃತಪಟ್ಟರು.
ಗದ್ದಲ ಕೇಳಿ ಕುಮಾರ್ ಅವರ ಕುಟುಂಬ ಮನೆಯ ಹೊರಗೆ ಧಾವಿಸಿ ಬಂತು. ಆದರೆ, ಆಗಲೇ ಆಕ್ರಮಣಕಾರರು ತಮ್ಮ ಕಾರು ಹಾಗೂ ಎರಡು ಬೈಕ್ಗಳನ್ನು ಬಿಟ್ಟು ಪರಾರಿಯಾಗಿದ್ದರು. ಅನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.
ಹಿಸಾರ್ ನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ)ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 57 ವರ್ಷದ ರಮೇಶ್ ಕುಮಾರ್ ಅವರು ಮುಂದಿನ ವರ್ಷ ಜನವರಿಯಲ್ಲಿ ನಿವೃತ್ತರಾಗಲಿದ್ದರು.
ಆಕ್ರಮಣಕಾರರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ ಹಾಗೂ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.