ಕೇರಳದಲ್ಲಿ ಭಾರೀ ಮಳೆ: ಅಣೆಕಟ್ಟು, ನದಿಗಳಲ್ಲಿ ನೀರಿನ ಮಟ್ಟ ಏರಿಕೆ
ತಿರುವನಂತಪುರ: ಕೇರಳದಲ್ಲಿ ಮುಖ್ಯವಾಗಿ ಕೇಂದ್ರ ಹಾಗೂ ಉತ್ತರ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದ್ದು, ವಿವಿಧ ಅಣೆಕಟ್ಟುಗಳು ಹಾಗೂ ನದಿಗಳು ಮಂಗಳವಾರ ಉಕ್ಕಿ ಹರಿಯುತ್ತಿವೆ.
ರಾಜ್ಯದ ಪತ್ತನಂತಿಟ್ಟ, ಇಡುಕ್ಕಿ, ತ್ರಿಶೂರ್, ವಯನಾಡ್ ಹಾಗೂ ಪಾಲಕ್ಕಾಡ್ ಜಿಲ್ಲೆಗಳ ವಿವಿಧ ಅಣೆಕಟ್ಟುಗಳ ನೀರಿನ ಮಟ್ಟ ಮುನ್ನೆಚ್ಚರಿಕೆಯ ಎರಡನೇ ಹಾಗೂ ಮೂರನೇ ಹಂತದಲ್ಲಿವೆ ಎಂದು ಆಡಳಿತ ಬಿಡುಗಡೆ ಮಾಡಿದ ಅಂಕಿ-ಅಂಶಗಳು ತಿಳಿಸಿವೆ.
ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಪಾಲೆಕ್ಕಾಡ್ನಲ್ಲಿರುವ ಮೀನಕರ, ವಲಯಾರ್ ಸೇರಿದಂತೆ ವಿವಿಧ ಅಣೆಕಟ್ಟುಗಳ ಶಟರ್ಗಳನ್ನು ಹಾಗೂ ಮೂಲಥರ ಅಣೆಕಟ್ಟಿನ ರೆಗ್ಯುಲೇಟರ್ ಅನ್ನು ತೆರೆಯಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಪತ್ತನಂತಿಟ್ಟದ ಅಚ್ಚಂಕೋವಿಲ್ ಹಾಗೂ ತ್ರಿಶೂರ್ನ ಕರುವನ್ನೂರುನಂತಹ ನದಿಗಳ ನೀರಿನ ಮಟ್ಟ ‘ಯೆಲ್ಲೋ ಅಲರ್ಟ್’ಗೆ ಏರಿಕೆಯಾಗಿದೆ ಎಂದು ನೀರಾವರಿ ವಿನ್ಯಾಸ ಹಾಗೂ ಸಂಶೋಧನಾ ಮಂಡಳಿ (ಐಡಿಆರ್ಬಿ) ಹಾಗೂ ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಹೇಳಿದೆ.
ಈ ನಡುವೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಉತ್ತರ ಕೇರಳದ ಜಿಲ್ಲೆಗಳಾದ ವಯನಾಡ್, ಕಣ್ಣೂರು ಹಾಗೂ ಕಾಸರಗೋಡುಗಳಲ್ಲಿ ‘ಆರೆಂಜ್ ಅಲರ್ಟ್’ ಹಾಗೂ ಇತರ 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿತ್ತು.